ಬಿಜೆಪಿ ಕಲಾಪಕ್ಕೂ ಮೊದಲು ಬರದ ಬಗ್ಗೆ ಅಧ್ಯಯನ ಮಾಡ್ತೀವಿ ಎಂದು ತಂಡ ಮಾಡಿತ್ತು. ಬರ ಅಧ್ಯಯನ ಎಂದು ಓಡಾಡಿತ್ತು, ಸರ್ಕಾರಕ್ಕೆ ಬರದ ವರದಿ ಕೊಡ್ತೀನಿ ಎಂದಿತ್ತು. ಆದರೆ ಚರ್ಚೆಗೆ ಆವಕಾಶ ಕೊಡದೆ ಬಿಜೆಪಿ ಸದನದ ಸಮಯ ವ್ಯರ್ಥ ಮಾಡ್ತಿದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಅವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಬಿಜೆಪಿ ಕಲಾಪಕ್ಕೂ ಮೊದಲು ಬರದ ಬಗ್ಗೆ ಅಧ್ಯಯನ ಮಾಡ್ತೀವಿ ಎಂದು ತಂಡ ಮಾಡಿತ್ತು. ಬರ ಅಧ್ಯಯನ ಎಂದು ಓಡಾಡಿತ್ತು, ಸರ್ಕಾರಕ್ಕೆ ಬರದ ವರದಿ ಕೊಡ್ತೀನಿ ಎಂದಿತ್ತು. ಆದರೆ ಚರ್ಚೆಗೆ ಆವಕಾಶ ಕೊಡದೆ ಬಿಜೆಪಿ ಸದನದ ಸಮಯ ವ್ಯರ್ಥ ಮಾಡ್ತಿದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಅವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ವಿಧಾನಸಭೆಯಲ್ಲಿ ಬರದ ಕುರಿತು ಚರ್ಚೆ ನಡೆಯದ ವಿಚಾರವಾಗಿ ನಗರದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕೈದು ದಿನ ಅಧಿವೇಶನ ಕಾಲಹರಣ ನಡೆದಿದೆ. ಓರ್ವ ವ್ಯಕ್ತಿಯ ವಿಷಯ ಇಟ್ಟುಕೊಂಡು ಹೋರಾಟ ಮಾಡ್ತಿದ್ದಾರೆ. ವಿರೋಧ ಪಕ್ಷವಾಗಿ ಜವಾಬ್ದಾರಿ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಕೇವಲ ಆರೋಪ ಮಾಡುವ ಬಿಜೆಪಿಯವರಿಗೆ ಮಾತನಾಡುವ ಎದೆಗಾರಿಕೆಯೂ ಇಲ್ಲ ಎಂದರು.ವಿಷಯ ಮಂಡನೆಗೆ ಹಲವು ಬಾರಿ ನಾವು ಹೇಳಿದ್ದೇವೆ. ವ್ಯಕ್ತಿಯ ವಿಷಯ ಇಟ್ಟುಕೊಂಡು ತೇಜೋವಧೆ ಮಾಡುವ ಕೆಲಸ ಮಾಡುತ್ತಿದೆ. ನಾಗೇಂದ್ರರನ್ನು ಈಗಾಗಲೇ ಲೋಕಾಯುಕ್ತ ಆರೋಪ ಮುಕ್ತಗೊಳಿಸಿದೆ. ಇವರ ಬಳಿ ಏನಾದ್ರೂ ಹೆಚ್ಚಿನ ಮಾಹಿತಿ ಇದ್ದರೆ ವಿಷಯ ಮಂಡನೆ ಮಾಡಬೇಕು. ವಿಷಯ ಮಂಡಿಸಿ ಚರ್ಚೆ ನಡೆಸಬೇಕು, ಆದರೆ ಒಂದು ವಾರದಿಂದ ಬಿಜೆಪಿ ಕಾಲಹರಣ ಮಾಡಿದೆ ಎಂದು ಆರೋಪಿಸಿದರು. ವಿರೋಧ ಪಕ್ಷಕ್ಕೆ ಭಗವಂತ ಸದ್ಬುದ್ಧಿ ಕೊಡಲಿ, ಬರಗಾಲ, ಅತಿವೃಷ್ಟಿ ಕುರಿತು ಚರ್ಚೆ ಮಾಡುವ ಬುದ್ಧಿ ಕೊಡಲಿ ಎಂದು ಬಿಜೆಪಿ ಹೋರಾಟಕ್ಕೆ ಟಾಂಗ್ ಕೊಟ್ಟರು.
ನಾನು ನನ್ನ 25 ವರ್ಷದ ರಾಜಕೀಯದಲ್ಲಿ ಜಾತ್ಯತೀತವಾಗಿ ನಡೆದುಕೊಂಡು ಬಂದಿದ್ದೇನೆ. ಕಾಂಗ್ರೆಸ್ ಪಕ್ಷ ನನ್ನನ್ನು ಗುರುತಿಸಿ ಸಹಕಾರ ಇಲಾಖೆ ನೀಡಿದ್ದು, ರಾಜ್ಯದಲ್ಲಿ ಸಹಕಾರಿ ಇಲಾಖೆಯನ್ನು ಇನ್ನಷ್ಟು ಬಲಪಡಿಸುತ್ತೇನೆ. ಕೇಂದ್ರ ಸರ್ಕಾರ ಪ್ರತ್ಯೇಕವಾಗಿ ಸಚಿವಾಲಯ ಮಾಡಿದ್ದು, ಇದುವರೆಗೂ ವಿಶೇಷ ಯೋಜನೆಗಳು ಯಾವುದೂ ಬಂದಿಲ್ಲ. ರಾಜ್ಯದಲ್ಲಿ ಬರವಿದ್ದು, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆಗಳು ವರದಿ ಕೊಡಬೇಕಿದೆ. ಹಾಗಾಗಿ ಮೂರು ಇಲಾಖೆಗಳು ಸರ್ಕಾರಕ್ಕೆ ವರದಿ ಕೊಟ್ಟಮೇಲೆ ಸಾಲಮನ್ನಾ ಕುರಿತು ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಗಳು ಚರ್ಚಿಸಿ ತೀರ್ಮಾನಿಸಲಿದ್ದಾರೆ. ಬಹಳ ದಿನಗಳಿಂದ ಮೋಡ ಬಿತ್ತನೆ ಆಗಬೇಕು ಎಂಬುದು ರೈತರ ಬೇಡಿಕೆಯಾಗಿದ್ದು, ಅದನ್ನು ಸಿಎಂ ತೀರ್ಮಾನಿಸುತ್ತಾರೆ ಎಂದು ಹೇಳಿದರು.ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಮಾಜಿ ಶಾಸಕ ಮನೋಹರ ಐನಾಪುರ, ಮುಖಂಡರಾದ ಅಬ್ದುಲರಜಾಕ್ ಹೊರ್ತಿ, ವಸಂತ ಹೊನಮೊಡೆ, ಇತರರು ಇದ್ದರು.