ಕರ್ನಾಟಕದಲ್ಲಿ ಬಿಜೆಪಿ ಒಂದಂಕಿ ದಾಟುವುದಿಲ್ಲ: ಸಚಿವ ದಿನೇಶ ಗುಂಡೂರಾವ್‌

| Published : May 06 2024, 12:32 AM IST

ಕರ್ನಾಟಕದಲ್ಲಿ ಬಿಜೆಪಿ ಒಂದಂಕಿ ದಾಟುವುದಿಲ್ಲ: ಸಚಿವ ದಿನೇಶ ಗುಂಡೂರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಡವರು, ಮಹಿಳೆಯರು, ಮಧ್ಯಮ ವರ್ಗದ ಪರ ಗ್ಯಾರಂಟಿ ಯೋಜನೆಗಳನ್ನು ನೀಡಿರುವ ಕಾಂಗ್ರೆಸ್‌ಗೆ ಜನರಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗಲಿದೆ. ರಾಜ್ಯದಲ್ಲಿ 20ಕ್ಕೂ ಅಧಿಕ ಸೀಟುಗಳು ಕಾಂಗ್ರೆಸ್‌ಗೆ ಬರಲಿವೆ. ಬಿಜೆಪಿ ಈ ಚುನಾವಣೆಯಲ್ಲಿ ಸಿಂಗಲ್‌ ಡಿಜಿಟ್‌ ಕೂಡ ದಾಟುವುದಿಲ್ಲ ಎಂದು ಕಲ್ಯಾಣ ಸಚಿವ ದಿನೇಶ ಗುಂಡೂರಾವ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಸಿಂಗಲ್ ಡಿಜಿಟ್ (ಒಂದಂಕಿ) ದಾಟುವುದಿಲ್ಲ. ಕಾಂಗ್ರೆಸ್‌ಗೆ ನಿರೀಕ್ಷೆ ಮೀರಿ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಅಚ್ಚರಿಯ ಫಲಿತಾಂಶ ಬರುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್‌ ಭವಿಷ್ಯ ನುಡಿದರು.

ಪ್ರಜ್ವಲ್‌ ರೇವಣ್ಣ ಪ್ರಕರಣದಿಂದ ಬಿಜೆಪಿಗೆ ಹಿನ್ನಡೆಯಾಗಿ, ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂದು ಇದೇ ವೇಳೆ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಸತ್ಯ ಹಾಗೂ ಸುಳ್ಳು, ಪ್ರೀತಿ ಮತ್ತು ದ್ವೇಷದ ನಡುವೆ ನಡೆಯುತ್ತಿರುವ ಚುನಾವಣೆ ಇದಾಗಿದೆ. ಪ್ರಧಾನಿ ಮೋದಿ ಅವರು ಚುನಾವಣೆಯಲ್ಲಿ ಸುಳ್ಳಿನ ಆಶ್ರಯ ಪಡೆದಿದ್ದಾರೆ. 10 ವರ್ಷಗಳಲ್ಲಿ ಅವರು ಮಾಡಿದ ಕೆಲಸಗಳ ಬಗ್ಗೆ ಚುನಾವಣೆಯಲ್ಲೇ ಚರ್ಚೆಯನ್ನೇ ಮಾಡಲಿಲ್ಲ. ಬದಲಿಗೆ ಸಮಾಜದಲ್ಲಿ ದ್ವೇಷ ಬಿತ್ತುವ, ಸಮಾಜವನ್ನು ಒಡೆಯುವಂಥ ಮಾತುಗಳನ್ನಷ್ಟೇ ಆಡಿದ್ದಾರೆ. ಆದರೆ ಸಮಾಜವನ್ನು ಒಗ್ಗೂಡಿಸುವ, ಸೌಹಾರ್ದಯುತವಾಗಿ ಬದುಕುವ ಬಗ್ಗೆ ಮಾತನಾಡಿದ್ದೇವೆ. ಹೀಗಾಗಿ ಸುಳ್ಳು ಮತ್ತು ಸತ್ಯದ ನಡುವೆ, ಪ್ರೀತಿ ಮತ್ತು ದ್ವೇಷದ ನಡುವೆ ನಡೆಯುತ್ತಿರುವ ಚುನಾವಣೆ ಇದು ಎಂದರು.

ಬಡವರು, ಮಹಿಳೆಯರು, ಮಧ್ಯಮ ವರ್ಗದ ಪರ ಗ್ಯಾರಂಟಿ ಯೋಜನೆಗಳನ್ನು ನೀಡಿರುವ ಕಾಂಗ್ರೆಸ್‌ಗೆ ಜನರಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗಲಿದೆ. ರಾಜ್ಯದಲ್ಲಿ 20ಕ್ಕೂ ಅಧಿಕ ಸೀಟುಗಳು ಕಾಂಗ್ರೆಸ್‌ಗೆ ಬರಲಿವೆ. ಬಿಜೆಪಿ ಈ ಚುನಾವಣೆಯಲ್ಲಿ ಸಿಂಗಲ್‌ ಡಿಜಿಟ್‌ ಕೂಡ ದಾಟುವುದಿಲ್ಲ ಎಂದರು.

ಪ್ರಜ್ವಲ್‌ ರೇವಣ್ಣ ಕೇಸ್‌ ಬಗ್ಗೆ ಬಿಜೆಪಿಗರು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ನಾವು ಎಸ್‌ಐಟಿ ರಚನೆ ಮಾಡಿದ್ದೇವೆ. ತನಿಖೆ ನಡೆಸುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದರು.

ಪ್ರಜ್ವಲ್‌ ರೇವಣ್ಣ ವಿಡಿಯೋ ಪ್ರಕರಣದಿಂದ ಕಾಂಗ್ರೆಸ್‌ಗೆ ಲಾಭವಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಇವರು ವರ್ತಿಸುತ್ತಿರುವ ಬಗೆ, ಗೊಂದಲಗಳ ಹೇಳಿಕೆಯಿಂದ ಜನರಿಗೆ ಮನವರಿಕೆಯಾಗಿದೆ. ಕಾಂಗ್ರೆಸ್‌ಗೆ ಮತ ಚಲಾಯಿಸುವುದು ಉತ್ತಮ ಎಂಬುದು. ಹೀಗಾಗಿ ಸಹಜವಾಗಿ ಲಾಭವಾಗುತ್ತದೆ ಎಂದರು.

ಕೇಂದ್ರದಲ್ಲಿ ಕರ್ನಾಟಕದ ಪರವಾಗಿ ಕೆಲಸ ಮಾಡುವಂತಹ ಸಂಸದರು ನಮಗೆ ಬೇಕಾಗಿದೆ. ರಾಜ್ಯದಿಂದ ಆಯ್ಕೆಯಾಗಿದ್ದ ಬಹುತೇಕ ಬಿಜೆಪಿ ಸಂಸದರು ಕರ್ನಾಟಕವನ್ನೇ ಮರೆತಿದ್ದಾರೆ. ಅದರಲ್ಲೂ ಪ್ರಹ್ಲಾದ್ ಜೋಶಿ ಕೇಂದ್ರದಲ್ಲಿ ಸಚಿವರಾದ ಮೇಲೆ ಸಂಪೂರ್ಣವಾಗಿ ರಾಜ್ಯವನ್ನು ಮರೆತಿದ್ದಾರೆ. ರಾಜ್ಯದ ಪರ ಕೇಂದ್ರ ಸರ್ಕಾರದಲ್ಲಿ ಧ್ವನಿ ಎತ್ತಿ ಕರ್ನಾಟಕಕ್ಕೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷರಾದ ಅನಿಲಕುಮಾರ ಪಾಟೀಲ, ಅಲ್ತಾಫ್‌ ಹಳ್ಳೂರ, ಸದಾನಂದ ಡಂಗನವರ, ರಾಜೇಶ್ವರಿ ಪಾಟೀಲ ಸೇರಿದಂತೆ ಹಲವರಿದ್ದರು.