ಕನ್ನಡಪ್ರಭ ವಾರ್ತೆ ಶಿರಸಿ
ಬ್ರಹ್ಮಾನಂದ ಸರಸ್ವತೀ ಮಹಾರಾಜರ ಚಾತುರ್ಮಾಸ್ಯ ವ್ರತಾಚರಣೆ ಜು.29ರಿಂದ ಸೆ.14 ರವರೆಗೆ ಉಡುಪಿ ಜಿಲ್ಲೆಯ ಬೈಂದೂರಿನ ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದ ಆವಾರದಲ್ಲಿ ನಡೆಯಲಿದೆ ಎಂದು ಶ್ರೀರಾಮ ಕ್ಷೇತ್ರ ಸಂಸ್ಥಾನಂ ಜಗದ್ಗುರು ಪೀಠದ ಶಿರಸಿ ವಿಭಾಗೀಯ ಅಧ್ಯಕ್ಷ ಡಾ. ವೆಂಕಟೇಶ ನಾಯ್ಕ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಈ ಬಾರಿಯ ಚಾತುರ್ಮಾಸ್ಯವು ಜು. 29ರಂದು ಗುರುಪೂರ್ಣಿಮೆಯ ಶುಭದಿನದಂದು ಮುಂಜಾನೆ 7 ಗಂಟೆಗೆ ಆರಂಭವಾಗಲಿದ್ದು, ರಾಮತಾರಕ ಯಜ್ಞ ಹಾಗೂ ವೈದಿಕ ವಿಧಿ ವಿಧಾನಗಳು ನಡೆಯಲಿದ್ದು, ಬೆಳಗ್ಗೆ 10 ಗಂಟೆಗೆ ಬೈಂದೂರು ಶ್ರೀ ಶನೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಶ್ರೀಗಳ ಪುರ ಪ್ರವೇಶದ ಭವ್ಯ ಮೆರವಣಿಗೆ ಆರಂಭವಾಗುವುದು. 11 ಗಂಟೆಗೆ ಶ್ರೀಗಳ ವ್ಯಾಸ ಪೀಠಾರೋಹಣ, ಗುರು ಪಾದುಕಾ ಪೂಜೆ, ಶ್ರೀಗಳಿಂದ ಆಶೀರ್ವಚನ, ಪ್ರಸಾದ ಮಂತ್ರಾಕ್ಷತೆ ಸಮೇತ ಅನ್ನಸಂತರ್ಪಣೆ ನಡೆಯಲಿದೆ.
ಪ್ರತಿದಿನ ಧರ್ಮಸಭೆಗಳು, ಭಜನೆ, ಪಾದುಕಾಪೂಜೆ, ಆಶೀರ್ವಚನ, ಮಂತ್ರಾಕ್ಷತೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದ್ದು, ಸಂಜೆ 5.30ರಿಂದ ವಿವಿಧ ಭಕ್ತಿ ಪ್ರದಾನ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು ಎಂದು ತಿಳಿಸಿದರು.ಸೆ. 14ರಂದು ವ್ರತಾಚರಣೆ ಪೂರ್ಣಗೊಳ್ಳಲಿದ್ದು, ಅದೇ ದಿನ ಬೆಳಿಗ್ಗೆ ಶ್ರೀಗಳ ಸೀಮೋಲಂಘನ ಕಾರ್ಯಕ್ರಮವು ಉಪ್ಪುಂದದ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದ ತಟದಲ್ಲಿರುವ ಸುಮನಾವತಿ ನದಿಯಲ್ಲಿ ಗಂಗಾಪೂಜೆ ಸಲ್ಲಿಸುವುದರೊಂದಿಗೆ ಸಮಾಪನೆಗೊಳ್ಳಲಿದೆ ಎಂದರು.
ಈ ಧರ್ಮಸಭೆಯ ಉದ್ಘಾಟನೆಯನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ನೆರವೇರಿಸಲಿದ್ದು, ಸಂಸದ ಬಿ.ವೈ. ರಾಘವೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಬ್ರೀಜೇಶ್ ಚೌಟಾ, ಮಾಜಿ ಸಚಿವರಾದ ಮಂಕಾಳ ಎಸ್. ವೈದ್ಯ, ಮಧು ಬಂಗಾರಪ್ಪ, ಶಾಸಕರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಈ ಸಂದರ್ಭ ಪ್ರಮುಖರಾದ ಅಶ್ವಿನ್ ಭೀಮಣ್ಣ ನಾಯ್ಕ, ಆರ್.ಜಿ. ನಾಯ್ಕ, ಗಣಪತಿ ನಾಯ್ಕ ದೇವಿಕೆರೆ, ಶ್ರೀನಿವಾಸ ನಾಯ್ಕ, ಅನಂತ ನಾಯ್ಕ, ಗಣಪತಿ ಎಲ್. ನಾಯ್ಕ, ಮಧುಕರ ಬಿಲ್ಲವ,ದತ್ತು ರಾವ್, ಅಪೂರ್ವ ನಾಯ್ಕ, ವಿವೇಕ ಪೂಜಾರಿ ಮುಂತಾದವರಿದ್ದರು.