ಬಂಟ್ವಾಳ: ಹಿಂದೂಗಳು ಸ್ವಾರ್ಥ ಚಿಂತನೆಗಳನ್ನು ಬಿಟ್ಟು ನಿಸ್ವಾರ್ಥ ಬದುಕು ನಡೆಸಿ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಸತ್ ಕುಟುಂಬಗಳನ್ನು ಬೆಳೆಸಿದಾಗ ಮಾತ್ರ ಉತ್ತಮ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಗುರುಪುರ ವಜ್ರದೇಹಿ ಮಠದ ಪೀಠಾಧಿಪತಿಗಳಾದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಶನಿವಾರ ಬಂಟ್ವಾಳದ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜಿಲ್ಲಾ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಆಶೀರ್ವಚನ ನೀಡಿದ ಅವರು, ದೇಶ ಮತ್ತು ಧರ್ಮದ ರಕ್ಷಣೆಗೆ ಕುಟುಂಬ ವ್ಯವಸ್ಥೆಯ ಬಲ ಅಗತ್ಯವಾಗಿದ್ದು, ಮನೆ ಮನೆಗಳಲ್ಲಿ ಮಕ್ಕಳಿಗೆ ಸನಾತನ ಮೌಲ್ಯಗಳ ಸಂಸ್ಕಾರ ನೀಡಬೇಕು ಎಂದರು.
ಅಧಿವೇಶನವನ್ನು ಶಂಖನಾದ, ದೀಪ ಪ್ರಜ್ವಲನೆ ಹಾಗೂ ವೇದಮಂತ್ರಗಳೊಂದಿಗೆ ಉದ್ಘಾಟಿಸಲಾಯಿತು. ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕರ್ನಾಟಕ ಸಮನ್ವಯಕರಾದ ಶ್ರೀ ಚಂದ್ರ ಮೊಗವೀರ ಮಾತನಾಡಿ, ಸಮಾಜ ಧರ್ಮನಿಷ್ಠ ಹಾಗೂ ಸಾತ್ವಿಕವಾಗಿದ್ದಾಗ ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯವಾಗುತ್ತದೆ ಎಂದರು. 2012ರಿಂದ ಆರಂಭವಾದ ಹಿಂದೂ ರಾಷ್ಟ್ರ ಅಧಿವೇಶನದ ಕಾರ್ಯಗಳು ಇಂದು ವ್ಯಾಪಕವಾಗಿ ಬೆಳೆಯುತ್ತಿದ್ದು, ವಿವಿಧ ಸಂತರು ಮತ್ತು ಧಾರ್ಮಿಕ ಮುಖಂಡರ ಮಾರ್ಗದರ್ಶನದಲ್ಲಿ ಚಳವಳಿ ಮುಂದುವರಿಯುತ್ತಿದೆ ಎಂದರು.ಬಂಟ್ವಾಳದ ನ್ಯಾಯವಾದಿ ಪ್ರಸಾದ್ ರೈ ಮಾತನಾಡಿ, ಲವ್ ಜಿಹಾದ್ ಕುರಿತಾಗಿ ಆತಂಕ ವ್ಯಕ್ತಪಡಿಸಿ, ಹಿಂದೂ ಸಮಾಜದ ಹೆಣ್ಣು ಮಕ್ಕಳಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಜಾಗೃತಿ ಅಗತ್ಯವಿದೆ ಎಂದರು. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಅವರಂತಹ ವೀರ ವನಿತೆಯರ ಆದರ್ಶವನ್ನು ಯುವತಿಯರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಉಡುಪಿ ಮೂಲದ ಉದ್ಯಮಿ ಅಜಯ್ ಶೆಟ್ಟಿ ಮಾತನಾಡಿ, ಸನಾತನ ಧರ್ಮದ ಮೌಲ್ಯಗಳು ವಿಶ್ವದ ಗಮನ ಸೆಳೆಯುತ್ತಿದ್ದು, ಇತಿಹಾಸ ತಿರುಚಿದರೂ ಸತ್ಯವನ್ನು ಅಳಿಸಲಾಗುವುದಿಲ್ಲ ಎಂದರು.ಕಾರ್ಯಕ್ರಮದಲ್ಲಿ ಉಳಿಯ ವೈಷ್ಣವಿ ಕ್ಷೇತ್ರದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ, ಸನಾತನ ಸಂಸ್ಥೆಯ ಪೂಜ್ಯ ಸಾಂತಪ್ಪ ಗೌಡ, ಮಂಗಳೂರಿನ ವಕೀಲರಾದ ಜಗದೀಶ ಶೇಣವ, ಪ್ರಭಾಕರ ಪ್ರಭು, ರಾಧಾಕೃಷ್ಣ ಅಡ್ಯಾಂತಾಯ, ರಾಜಾರಾಮ್ ಭಟ್, ಹಿಂದೂ ಜನಜಾಗೃತಿ ಸಮಿತಿಯ ದ.ಕ. ಜಿಲ್ಲಾ ಸಮನ್ವಯಕಾರ ವಿಜಯ ಕುಮಾರ್ ಸೇರಿದಂತೆ ಮಂಗಳೂರು, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಹಾಗೂ ಕೊಡಗು ಭಾಗಗಳ ಹಿಂದೂ ಸಂಘಟನೆಗಳ ಮುಖಂಡರು, ದೇವಸ್ಥಾನಗಳ ವಿಶ್ವಸ್ತರು, ಪುರೋಹಿತರು, ವಕೀಲರು, ಉದ್ಯಮಿಗಳು, ವಿವಿಧ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು. ಸುಧಾ ತಲಪಾಡಿ ಹಾಗೂ ಲಾವಣ್ಯ ನಿರೂಪಿಸಿದರು. ಸುಮಾರು 250ಕ್ಕೂ ಅಧಿಕ ಮಂದಿ ಅಧಿವೇಶನದಲ್ಲಿ ಉಪಸ್ಥಿತರಿದ್ದರು.