ಕನ್ನಡಪ್ರಭ ವಾರ್ತೆ ಬೆಂಗಳೂರುದಾನದಿಂದ ಮಾತ್ರವೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಎಲ್ಲವೂ ನನಗೇ ಬೇಕು ಎಂಬ ಭಾವನೆಯಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯವಿಲ್ಲ ಎಂದು ಒಡಿಶಾ ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹೇಳಿದ್ದಾರೆ.

ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಆರ್ಟ್‌ ಆಫ್‌ ಗಿವಿಂಗ್‌ನ 13ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆ, ಅನ್ನ, ವಸ್ತ್ರ ದಾನದಿಂದ ಸಮಾಜವನ್ನು ಸದೃಢಗೊಳಿಸಬಹುದು. ಯಾವ ಜೀವಿಗಳು ಕೊಡುಗೈ ಆಗಿ, ಇನ್ನೊಬ್ಬರ ಜೊತೆ ಹಂಚಿಕೊಂಡು ಹೋಗುತ್ತಾರೋ ಅವು ಹೆಚ್ಚು ಕಾಲ ಬದುಕುತ್ತವೆ. ನಾನು ಕೊಟ್ಟೆ ಎಂಬ ಭಾವವೂ ನಮ್ಮಲ್ಲಿ ಉಳಿಯಬಾರದು ಎಂದರು.ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ವೆಂಕಟೇಶ್ ಮಾತನಾಡಿ, ಸಮಾಜದಲ್ಲಿ ಪರೋಪಕಾರ, ಪ್ರೀತಿ, ಕರುಣೆ, ದಯೆ ಎನ್ನುವುದು ಈಗೀಗ ಕಡಿಮೆಯಾಗಿದೆ. ಯಾರು ಜಾಸ್ತಿ ಆಸ್ತಿ ಮಾಡಿರುತ್ತಾರೆ, ಅಧಿಕಾರ ಹೊಂದಿರುತ್ತಾರೆ ಅಂತಹವರಿಗೆ ಮನ್ನಣೆ ಸಿಗುವ ಸ್ಥಿತಿ ಇದೆ ಎಂದರು.

ನಿರ್ದೇಶಕ ಪಿ. ಶೇಷಾದ್ರಿ, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ. ವೋಡೇ ಪಿ. ಕೃಷ್ಣ, ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ರಾಕೇಶ್ ಸಿಂಗ್‌, ಆರ್ಟ್‌ ಆಫ್‌ ಗಿವಿಂಗ್‌ನ ಕರ್ನಾಟಕ ಮುಖ್ಯಸ್ಥ ಗುರುಪ್ರಸಾದ್‌ ಮತ್ತಿತರರು ಉಪಸ್ಥಿತರಿದ್ದರು.