ಸಾರಾಂಶ
ಗ್ರಾಮಕ್ಕೆ ಜಿಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಂದಾಯದ ಅಧಿಕಾರಿಗಳೊಂದಿಗೆ ಭೇಟಿ
ಕನ್ನಡಪ್ರಭ ವಾರ್ತೆ ಬನ್ನೂರು
ಗ್ರಾಮಾಂತರ ಪ್ರದೇಶದಲ್ಲಿರುವ ಒತ್ತುವರಿಯಾಗಿರುವ ದಲಿತರ ಸ್ಮಶಾನದ ಭೂಮಿಯನ್ನು ತಾಲೂಕು ಅಧಿಕಾರಿಗಳು ಗುರುತಿಸಿ ಆ ಭೂಮಿಯನ್ನು ಶವಸಂಸ್ಕಾರ ಮಾಡಲೆಂದೇ ಮೀಸಲಾಗಿರಿಸಬೇಕು. ಒತ್ತುವರಿಯಾದಲ್ಲಿ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಬೇಕೆಂದು ದಸಂಸ ಜಿಲ್ಲಾ ಸಂಚಾಲಕ ಸಿ. ಉಮಾಮಹದೇವ ಹೇಳಿದರು.ಇತ್ತೀಚೆಗೆ ದಲಿತರಿಗೆ ಸ್ಮಶಾನದ ಭೂಮಿ ಇಲ್ಲದೇ ಕಾಲುವೆ ಬಳಿಯಲ್ಲಿ ಶವಸಂಸ್ಕಾರ ಮಾಡಿದ ಬೀಡನಹಳ್ಳಿ ಗ್ರಾಮಕ್ಕೆ ಜಿಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಂದಾಯದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಮೌಖಿಕ ಆದೇಶದ ಮೇರೆಗೆ ಬೀಡನಹಳ್ಳಿ ಗ್ರಾಮದಲ್ಲಿ ಒತ್ತುವರಿಯಾಗಿದ್ದ ದಲಿತರ ಸ್ಮಶಾನದ ಭೂಮಿಯನ್ನು ತೆರವುಗೊಳಿಸಿ ಅದನ್ನು ಗ್ರಾಪಂಗೆ ಹಸ್ತಾಂತರ ಮಾಡಿರುವುದು ಒಳ್ಳೆಯ ಬೆಳವಣಿಗೆಯಾದರೂ ಸ್ಮಶಾನದ ಭೂಮಿಗೆ ಅಗತ್ಯವಿರುವ ಸೌಲಭ್ಯವನ್ನು ಒದಗಿಸಬೇಕೆಂದು ಅವರು ಅಧಿಕಾರಿಗೆ ಮನವಿ ಮಾಡಿದರು.ಕಂದಾಯ ನಿರೀಕ್ಷಕ ಸಿದ್ದರಾಜು, ಪಿಡಿಒ ಪವಿತ್ರ, ದಸಂಸ ತಾಲೂಕು ಸಂಚಾಲಕ ಶಿವಪ್ರಕಾಶ್, ಸಂಘಟನಾ ಸಂಚಾಲಕ ಮಲ್ಲೇಶ್, ಮಹದೇವ, ಮಹದೇವಮ್ಮ, ಜಯಪ್ಪ, ಸಿದ್ದಯ್ಯ, ಮಹಾದೇವ, ದಿನೇಶ್ ಕುಮಾರ್ ಇದ್ದರು.