ಹಿರೇಕೆರೂರು: ಕರ್ನಾಟಕ ಸರ್ಕಾರ 2025- 26ನೇ ಸಾಲಿನಲ್ಲಿ ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕಿಗೆ ಮೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ಮಂಜೂರು ಮಾಡಿಸಿರುವೆ. ಅದರಂತೆ ಸರ್ಕಾರಿ ಪ್ರೌಢಶಾಲೆ ಹಿರೇಕೆರೂರು ಕೂಡ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಬದಲಾಗಿದೆ . ಈ ಶಾಲೆಯು ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಶಾಲೆಯಾಗಿದ್ದು ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಿಸುವಂತೆ ಶಾಸಕ ಯು.ಬಿ. ಬಣಕಾರ್ ಕರೆ ನೀಡಿದರು.ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಎಲ್ಲಾ ಮಕ್ಕಳಿಗೂ ಶಾಲಾ ಆರಂಭದ ದಿನದಿಂದಲೇ ಉಚಿತ ಪಠ್ಯಪುಸ್ತಕಗಳನ್ನು, ಸಮವಸ್ತ್ರಗಳನ್ನು ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಅದೇ ರೀತಿ ಎಲ್ಲಾ ವಿದ್ಯಾರ್ಥಿಗಳಿಗೆ ಕ್ಷೀರ ಭಾಗ್ಯ, ರಾಗಿ ಮಾಲ್ಟ್, ಮಧ್ಯಾಹ್ನದ ಬಿಸಿ ಊಟ ಹಾಗೂ ಮೊಟ್ಟೆ ಹಾಗೂ ಬಾಳೆಹಣ್ಣನ್ನು ಪ್ರತಿನಿತ್ಯ ವಿತರಿಸುವರು. ಇದರ ಸದುಪಯೋಗವನ್ನು ಪಡೆಯುವಂತೆ ಸಲಹೆ ನೀಡಿದರು ಹಾಗೂ ಈ ವರ್ಷ ಈ ಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇಕಡಾ 96ರಷ್ಟು ಆಗಿರುವುದು ತುಂಬಾ ಸಂತೋಷ ಹಾಗೂ ಈ ವರ್ಷದಿಂದಲೇ ಈ ಶಾಲೆಯಲ್ಲಿ ಎಂಟನೇ ತರಗತಿ ಇಂಗ್ಲಿಷ್ ಮಾಧ್ಯಮವನ್ನು ಕೂಡ ಪ್ರಾರಂಭಿಸಲಾಗುವುದು. ಈ ಶಾಲೆಯಲ್ಲಿ ಯಾವುದೇ ವಿದ್ಯಾರ್ಥಿಯು ಸರ್ಕಾರಿ ಶುಲ್ಕವನ್ನು ಭರಿಸದೆ ಉಚಿತವಾಗಿ ಶಿಕ್ಷಣವನ್ನು ಪಡೆಯಬಹುದಾಗಿದೆ. ಅಂತಹ ವಾತಾವರಣ ಈ ಶಾಲೆಯಲ್ಲಿದೆ. ಇದಕ್ಕಾಗಿ ಇಲ್ಲಿಯ ಮುಖ್ಯ ಗುರುಗಳು ಹಾಗೂ ಶಿಕ್ಷಕರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು. ಈ ವರ್ಷ ಪ್ರವೇಶ ಪಡೆದ ಹೊಸ ವಿದ್ಯಾರ್ಥಿಗಳಿಗೆ ನಿವೃತ್ತ ಮುಖ್ಯ ಶಿಕ್ಷಕರಾದ ಜೆ.ಬಿ. ಮರಿಗೌಡ್ರ ಸುಮಾರು 12 ಸಾವಿರ ವೆಚ್ಚದಲ್ಲಿ ಇಂದು ನೋಟ್ ಬುಕ್ ಗಳನ್ನು ವಿತರಿಸಿದರು. ಇದು ಅಭಿನಂದನೀಯ ಎಂದರು. ಕಾರ್ಯಕ್ರಮದಲ್ಲಿ ಶಾಸಕ ಯು.ಬಿ. ಬಣಕಾರ ಅವರು ಎಲ್ಲಾ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ಹಾಗೂ ಚಾಕ್ಲೇಟ್ ನೀಡುವುದರ ಮುಖಾಂತರ ವಿದ್ಯಾರ್ಥಿಗಳಿಗೆ ಶಾಲೆಗೆ ಸ್ವಾಗತವನ್ನು ಕೋರಲಾಯಿತು. ಕಾರ್ಯಕ್ರಮದಲ್ಲಿ ಹಾಜರಿದ್ದ 200 ವಿದ್ಯಾರ್ಥಿಗಳಿಗೂ ಸಮವಸ್ತ್ರ, ನೋಟ್ ಬುಕ್ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ್ ಮಾತನಾಡಿದರು. ಅಧ್ಯಕ್ಷತೆಯನ್ನು ಮುಖ್ಯ ಗುರುಗಳಾದ ಎನ್ ಸುರೇಶ್ ಕುಮಾರ್ ವಹಿಸಿಕೊಂಡಿದ್ದರು. ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಆರ್. ತೇವರಿ, ಸಿಆರ್‌ಪಿ ಹರಗೋಲ್, ಪಪಂ ಮಾಜಿ ಅಧ್ಯಕ್ಷರಾದ ಮಹೇಂದ್ರ ಬಡಳ್ಳಿ, ಜಿಪಂ ಮಾಜಿ ಸದಸ್ಯ ಶಿವರಾಜ್ ಹರಿಜನ್, ನಿವೃತ್ತ ಮುಖ್ಯ ಗುರುಗಳಾದ ಜೆ.ಬಿ. ಮರಿಗೌಡರ್, ಎಂಕೆಬಿ ಶಾಲೆಯ ಪ್ರಧಾನ ಗುರುಗಳಾದ ಜಯಮ್ಮ, ಎಸ್.ಆರ್. ಅಣ್ಣಯ್ಯ ,ಎಮ್.ವೈ. ದಾಳಿ, ನೂರ್ಜಾನ್, ಎಸ್‌ಡಿಎಂಸಿ ಸದಸ್ಯರಾದ ಪ್ರಕಾಶ್ ಹಿತ್ಲಳ್ಳಿ, ಪಿ.ಬಿ. ನಿಂಗನಗೌಡ್ರ, ಮೇಘರಾಜು ಮಾಳಗಿಮನಿ, ಬಸನಗೌಡ ಬಣಕಾರ್, ನಟರಾಜ್, ಸುಮಾ ಎಸ್., ಕಾಟೇನಹಳ್ಳಿ ಕೆ.ಎಚ್., ಪ್ರಕಾಶ್ ವರಾದ, ಪರಮೇಶ್ವರ ಹುಲ್ಲಮನಿ, ಶಿವಕುಮಾರ್ ಸಾಲೆರ್ ಹಾಗೂ ಮುಖಂಡರು ವಿದ್ಯಾರ್ಥಿಗಳು ಇದ್ದರು.