ಸಾರಾಂಶ
ಬುಧವಾರ ನಡೆದ ಸಾರ್ವಜನಿಕಸಭೆಯಲ್ಲಿ ರೈತ ಸಂಘದ ಕಾರ್ಯಾಧ್ಯಕ್ಷ ಈಚಗಟ್ಟದ ಸಿದ್ದವೀರಪ್ಪ ಎಚ್ಚರಿಕೆಕನ್ನಡಪ್ರಭವಾರ್ತೆ ಚಿತ್ರದುರ್ಗ
ಭದ್ರಾಮೇಲ್ದಂಡೆ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಎದುರು ಕೇಂದ್ರ ಸರ್ಕಾರದ ವಿರುದ್ಧ ಕಳೆದ ಹತ್ತು ದಿನಗಳಿಂದ ಧರಣಿ ನಡೆಸುತ್ತಿರುವ ರೈತ ಸಂಘ ಹಾಗೂ ಹಸಿರುಸೇನೆ, ಅಖಂಡ ಕರ್ನಾಟಕ ರೈತ ಸಂಘ, ಜನಪರ, ಪ್ರಗತಿಪರ, ದಲಿತಪರ ಸಂಘಟನೆಗಳ ಮುಖಂಡರು ಬುಧವಾರ ಚಳ್ಳಕೆರೆ ಗೇಟ್ನಲ್ಲಿ ಸಾರ್ವಜನಿಕ ಜಾಗೃತಿ ಸಭೆ ನಡೆಸಿದರು.ಈ ವೇಳೆ ಮಾತನಾಡಿದ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ದತೆಯಿಂದ ಕೆಲಸ ಮಾಡಿ ಪಾರ್ಲಿಮೆಂಟ್ ಚುನಾವಣೆಯೊಳಗೆ ಜಿಲ್ಲೆಗೆ ಭದ್ರಾಮೇಲ್ದಂಡೆ ಯೋಜನೆಯಿಂದ ನೀರು ಹರಿಸದಿದ್ದರೆ ಹಳ್ಳಿ ಹಳ್ಳಿಗೆ ತಿರುಗಿ ಬಿಜೆಪಿ ವಿರುದ್ದ ಮತ ಚಲಾಯಿಸುವಂತೆ ಜನತೆಯಲ್ಲಿ ಜಾಗೃತಿ ಮೂಡಿಸಿ ಅಧಿಕಾರದಿಂದ ತೊಲಗಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಸುಳ್ಳು ಭರವಸೆಗಳನ್ನು ನೀಡಿ ಎರಡನೆ ಬಾರಿಗೆ ದೇಶದ ಪ್ರಧಾನಿಯಾಗಿರುವ ನರೇಂದ್ರಮೋದಿ ಕೈಗೊಂಡ ಹದಿನಾಲ್ಕು ತೀರ್ಮಾನಗಳು ಹುಸಿಯಾಗಿವೆ. ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಗೆ ಲಕ್ಷಾಂತರ ಮಂದಿ ಮನೆ, ಜಮೀನುಗಳನ್ನು ಕಳೆದುಕೊಂಡು ನಿರ್ಗತಿಕರಾದಾಗ ಮಾನವೀಯತೆಯಿಂದಲಾದರು ಪ್ರಧಾನಿ ಬಂದು ಕಷ್ಟ ಕೇಳಲಿಲ್ಲ. ರಾಮನ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಬರಗಾಲಕ್ಕೆ ಸಿಲುಕಿರುವ ಚಿತ್ರದುರ್ಗ ಜಿಲ್ಲೆಯ ರೈತರು ಜನಸಾಮಾನ್ಯರನ್ನು ಸಂಕಷ್ಟದಿಂದ ಪಾರು ಮಾಡಲಿ ಎಂದರು.ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ಭದ್ರೆ ನೀರು ಹರಿಯಬೇಕು. ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿ ಕಣ್ಣೊರೆಸುವ ಮಾತುಗಳನ್ನಾಡಿದರೆ ವಿನಃ ಕೇಂದ್ರದಿಂದ 5300 ಕೋಟಿ ರು.ಗಳನ್ನು ಬಿಡುಗಡೆಗೊಳಿಸುವ ಯಾವ ಭರವಸೆಯನ್ನು ನೀಡಲಿಲ್ಲ. ಪ್ರಧಾನಿ ಮೋದಿ ಎದುರು ನಿಂತು ಜಿಲ್ಲೆಯ ಸಮಸ್ಯೆಗಳನ್ನು ಮನವರಿಕೆ ಮಾಡುವ ತಾಕತ್ತು ಉಳಿಸಿಕೊಂಡಿಲ್ಲ. ಇಂತಹ ಸಂಸದರನ್ನು ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳಿಸಲಾಗುವುದೆಂದರು.
ರೈತ ಮುಖಂಡರಾದ ಬಸವರಾಜಪ್ಪ, ರಾಮರೆಡ್ಡಿ, ಬೋರೇಶ್, ಶಶಿಧರ್, ಪ್ರಸನ್ನಕುಮಾರ್, ರಂಗಸ್ವಾಮಿ, ತುಳಜಮ್ಮ, ಬಸವಲಿಂಗಮ್ಮ. ನಾಗತಿಹಳ್ಳಿ ನಿರಂಜನ್. ಅಲೆಮಾರಿ ಅರೆಅಲೆಮಾರಿ ಜನಾಂಗದ ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮಿಕಾಂತ್ ಇನ್ನು ಅನೇಕರು ಜಾಗೃತಿ ಸಭೆಯಲ್ಲಿ ಭಾಗವಹಿಸಿದ್ದರು.