ಕನ್ನಡಪ್ರಭವಾರ್ತೆ ಪುತ್ತೂರು

ಪುತ್ತೂರಿನ ಅಖಿಲ ಭಾರತ ಗೇರು ಬೆಳೆಗಾರರ ಸಂಘ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಗೇರು ಕೃಷಿಕರ ಸಮ್ಮಿಲನ ಸಮಾರಂಭ ಇತ್ತೀಚೆಗೆ ಪುತ್ತೂರು ನಗರದ ಹೊರವಲಯದ ಮುಕ್ರಂಪಾಡಿ ರಾಜಾಪುರ ಕಂಪೌಂಡ್‌ನಲ್ಲಿ ನಡೆಯಿತು.ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಕಾರ್ಯಕ್ರಮ ಉದ್ಘಾಟಿಸಿ ಸಂಘದ ನೂತನ ಜಾಲತಾಣ ಲೋಕಾರ್ಪಣೆ ಮಾಡಿದರು. ಇದೇ ಸಂದರ್ಭ ನಿತ್ಯ ಚಪಾತಿ ಅವರಿಂದ ತಯಾರಿಸಲಾದ ಗೇರುಹಣ್ಣಿನ ಮೌಲ್ಯವರ್ಧಿತ ಉತ್ಪನ್ನವಾದ ‘ಮಫಿನ್’ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಶ್ರೀ ಪಡ್ರೆ ಅವರು ‘ಗೇರು ಹಣ್ಣಿನ ಮೌಲ್ಯವರ್ಧನೆ: ಸಾಧ್ಯತೆ ಮತ್ತು ಸವಾಲು’ ಕುರಿತು ಉಪನ್ಯಾಸ ನೀಡಿ ಗೇರು ಹಣ್ಣಿನ ಸಮರ್ಪಕ ಬಳಕೆ, ಮಾರುಕಟ್ಟೆ ಅವಕಾಶಗಳು ಮತ್ತು ಕೃಷಿಕರು ಎದುರಿಸುವ ಸವಾಲುಗಳ ಕುರಿತು ವಿವರಿಸಿದರು.ಸಂಘದ ಮಾಜಿ ಅಧ್ಯಕ್ಷ ನನ್ಯ ಅಚ್ಯುತ ಮೂಡತ್ತಾಯ ಅವರು ಸಂಘದ ಅಗತ್ಯತೆ ಮತ್ತು ಬೆಳೆಗಾರರ ಒಕ್ಕೂಟದ ಮಹತ್ವವನ್ನು ಪ್ರಸ್ತಾಪಿಸಿದರು. ಡಾ. ಎಂ. ಗಂಗಾಧರ್ ನಾಯಕ್ ಅಧ್ಯಕ್ಷರಾಗಿ, ವಿವೇಕ್ ಆಳ್ವ ನಡುಮನೆ ಕಾರ್ಯದರ್ಶಿಯಾಗಿ ಹಾಗೂ ದೇವಿಪ್ರಸಾದ್ ಪುಣಚ ಅವರು ಕೋಶಾಧಿಕಾರಿಯಾಗಿ ಪದಗ್ರಹಣ ಮಾಡಿದರು.ಗೇರು ಬೆಳೆಗಾರರೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ನಿವೃತ್ತ ಶಿಕ್ಷಕ ಸುಳ್ಯದ ಕೆ ಆರ್ ಗೋಪಾಲಕೃಷ್ಣ ನಿರೂಪಿಸಿದರು.