ಮೀಸಲಾತಿಯಲ್ಲಿ ಕಾಂಗ್ರೆಸ್‌ನಿಂದ ದಲಿತರಿಗೆ ದ್ರೋಹ

| Published : Jun 24 2025, 01:47 AM IST

ಸಾರಾಂಶ

ಮುಸ್ಲಿಮರ ಪರ ರಾಜ್ಯ ಸರ್ಕಾರದ ದೋರಣೆ ನೋಡುತ್ತಿದ್ದರೆ ಸಿಎಂ, ಡಿಸಿಎಂ ತಮ್ಮ ಅಧಿಕಾರಾವಧಿಯಲ್ಲಿ ಮುಸ್ಲಿಮರಿಗೆ ರಾಜ್ಯವನ್ನು ಮಾರುವಂತೆ ಕಾಣುತ್ತಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.

ಶಿವಮೊಗ್ಗ: ಮುಸ್ಲಿಮರ ಪರ ರಾಜ್ಯ ಸರ್ಕಾರದ ದೋರಣೆ ನೋಡುತ್ತಿದ್ದರೆ ಸಿಎಂ, ಡಿಸಿಎಂ ತಮ್ಮ ಅಧಿಕಾರಾವಧಿಯಲ್ಲಿ ಮುಸ್ಲಿಮರಿಗೆ ರಾಜ್ಯವನ್ನು ಮಾರುವಂತೆ ಕಾಣುತ್ತಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಸ್ಲಿಮರಿಗೆ ಗುಲಾಮರಾಗಿರುವ ರಾಜ್ಯ ಸರ್ಕಾರ ತಮ್ಮ ಕೊನೆಗಾಲವನ್ನು ಎದುರಿಸುತ್ತಿದೆ. ಧರ್ಮಾದಾರಿತ ಮೀಸಲಾತಿಯನ್ನು ನೀಡಬಾರದು ಎಂದು ಸಂವಿಧಾನವೇ ಹೇಳಿದೆ. ಆದರೆ, ಸಂವಿಧಾನದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ಸಿಗರು ಮುಸ್ಲಿಂರಿಗೆ ವಸತಿ ಯೋಜನೆಯೂ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಮೀಸಲಾತಿ ನೀಡಿದೆ. ಈಗ ವಸತಿ ಯೋಜನೆಯಡಿ ಶೇ.15ರಷ್ಟು ಮೀಸಲಾತಿಯನ್ನು ನೀಡಲು ಹೊರಟಿದೆ. ಇದಕ್ಕಾಗಿ ಕಾಯ್ದೆ ಮಾಡಲು ಯೋಚಿಸಿದ್ದು, ರಾಜ್ಯಪಾಲರು ಈ ಕಾಯ್ದೆಗೆ ಯಾವುದೇ ಕಾರಣಕ್ಕೆ ಒಪ್ಪಿಗೆ ನೀಡಬಾರದು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರ ಒಂದು ಕಡೆ ಹಿಂದುಳಿದವರಿಗೆ, ದಲಿತರಿಗೆ ವಂಚಿಸಿ, ಮುಸ್ಲಿಮರಿಗೆ ಮೀಸಲಾತಿ ಹೆಚ್ಚಿಸುತ್ತಿದೆ. ಕಳೆದವರ್ಷ ಬಜೆಟ್‍ನಲ್ಲಿ 910 ಕೋಟಿ ರು. ಅವರಿಗಾಗಿ ಮೀಸಲಿಟ್ಟಿದ್ದಾರೆ. ಈ ವರ್ಷ ಅದನ್ನು 1913.97 ಕೋಟಿ ರು.ಗೆ ಹೆಚ್ಚಿಸಿದೆ. ವಿದ್ಯಾರ್ಥಿವೇತನ, ಶಾದಿಭಾಗ್ಯ, ಮುಲ್ಲಾಗಳಿಗೆ ಸಂಬಳ ಜಾಸ್ತಿ ಹೀಗೆ ಎಲ್ಲಾ ಕಡೆ ಮುಸ್ಲಿಂರ ಓಲೈಕೆ ಮಾಡುತ್ತಿದೆ. ಇದನ್ನು ಹಿಂದೂ ಸಮಾಜ ಒಪ್ಪುವುದಿಲ್ಲ ಎಂದರು.

ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಕಮಿಷನ್ ಕೊಡದೆ ನಿವೇಶನ ಸಿಗಲ್ಲ ಎಂದು ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಆರೋಪಿಸಿದ್ದಾರೆ. ಬೋಸರಾಜು, ಪರಮೇಶ್ವರ್ ಅವರು ಬಿ.ಆರ್.ಪಾಟೀಲ್ ಹೇಳಿಕೆ ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಈ ರೀತಿ ಆಗಿಲ್ಲ ಎಂದು ಹೇಳುತ್ತಾರೆ. ಇನ್ನೂ ತನಿಖೆ ಆಗಿಲ್ಲ ಆಗಲೇ ತೀರ್ಪು ಕೊಟ್ಟಿದ್ದಾರೆ. ಬಡವರಿಗೆ ಹಂಚುವ ಮನೆಗಳಲ್ಲಿ ಕಮಿಷನ್ ತಿಂದ್ರೆ ಇವರ ಮಕ್ಕಳು ಮರಿ ಉದ್ಧಾರ ಆಗ್ತಾರಾ? ಹರಿಹಾಯ್ದರು.

ಮುಸ್ಲಿಮರು ಯಾವ ಪಕ್ಷ ಅಧಿಕಾರಕ್ಕೆ ಬರುತ್ತೋ ಅವರು ಅ ಕಡೆ ಹೋಗುತ್ತಾರೆ. ಮುಸ್ಲಿಂ, ಕ್ರಿಶ್ಚಿಯನ್ ಹೀಗೆ ಧರ್ಮಾಧಾರಿತ ಮೀಸಲಾತಿ ಸೌಲಭ್ಯ ನೀಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಕಾಂಗ್ರೆಸ್‌ನವರು ಹಿಂದುಳಿದ, ದಲಿತರಿಗೆ ಮೀಸಲಾತಿ ವಿಷಯದಲ್ಲಿ ದ್ರೋಹ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮ ಆಗುತ್ತದೆ ಎಂದು ಭವಿಷ್ಯ ನುಡಿದರು.

ಈ ಎಲ್ಲಾ ಘಟನೆಗಳನ್ನು ಇಟ್ಟುಕೊಂಡು ಜೂ.25ರಂದು ರಾಷ್ಟ್ರಭಕ್ತ ಬಳಗದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಭ್ರಷ್ಟಾಚಾರ ತನಿಖೆಯಾಗಬೇಕು ಸಂಬಂಧಪಟ್ಟ ಸಚಿವರುಗಳು ರಾಜೀನಾಮೆ ಕೊಡಬೇಕು. ಧರ್ಮಾಧಾರಿತ ಮೀಸಲಾತಿ ಕೈಬಿಡಬೇಕು ಎಂಬುದು ಸೇರಿದಂತೆ ಹಲವು ವಿಷಯಗಳನ್ನು ಇಟ್ಟುಕೊಂಡು ಈ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈ.ವಿಶ್ವಾಸ್, ಜಾಧವ್, ಮಹಾಲಿಂಗಶಾಸ್ತ್ರೀ, ಮೋಹನ್, ಕಾಚಿನಕಟ್ಟೆ ಸತ್ಯಣ್ಣ, ಅ.ಮ. ಪ್ರಕಾಶ್, ಶಿವಾಜಿ ಮತ್ತಿತರರಿದ್ದರು.