ಗಣೇಶೋತ್ಸವದ ಹೆಸರಿನಲ್ಲಿ ಡಿಜೆ ಬಳಕೆಗೆ ಮುಂದಾಗುವುದು ಅನಗತ್ಯ. ನಮ್ಮ ಸಂಸ್ಕೃತಿ ಹಾಗೂ ಪರಂಪರೆಗೆ ಗೌರವ ನೀಡುವ ರೀತಿಯಲ್ಲಿ ಭಕ್ತಿ-ಭಾವದಿಂದ ಹಬ್ಬ ಆಚರಿಸಬೇಕು. ಪೊಲೀಸ್ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಕುಂದಗೋಳ:

ಗೌರಿ-ಗಣೇಶ ಹಬ್ಬವನ್ನು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಶಾಂತಿ, ಸೌಹಾರ್ದತೆ ಆಚರಿಸಬೇಕೆಂದು ಸಿಪಿಐ ಸಮೀರ್ ಮುಲ್ಲಾ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರಿಗಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಗಣೇಶೋತ್ಸವದ ಹೆಸರಿನಲ್ಲಿ ಡಿಜೆ ಬಳಕೆಗೆ ಮುಂದಾಗುವುದು ಅನಗತ್ಯ. ನಮ್ಮ ಸಂಸ್ಕೃತಿ ಹಾಗೂ ಪರಂಪರೆಗೆ ಗೌರವ ನೀಡುವ ರೀತಿಯಲ್ಲಿ ಭಕ್ತಿ-ಭಾವದಿಂದ ಹಬ್ಬ ಆಚರಿಸಬೇಕು. ಪೊಲೀಸ್ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅನ್ನ ಸಂತರ್ಪಣೆ, ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಸೇರಿದಂತೆ ಸಮಾಜಮುಖಿ ಕಾರ್ಯಗಳ ಮೂಲಕ ಹಬ್ಬವನ್ನು ಅರ್ಥಪೂರ್ಣಗೊಳಿಸಬೇಕು. ಕಾನೂನುಬಾಹಿರ ಚಟುವಟಿಕೆ ಕಂಡುಬಂದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪಿಎಸ್‌ಐ ಶರಣಬಸಪ್ಪ ಸಂಗಳದ ಮಾತನಾಡಿ, ಡಿಜೆ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಆದೇಶವಿದ್ದು, ಎಲ್ಲರೂ ಪಾಲಿಸಬೇಕು. ಮತ್ತೊಬ್ಬರಿಗೆ ತೊಂದರೆಯಾಗದಂತೆ ಪೊಲೀಸ್ ಇಲಾಖೆಯ ನಿಯಮಾವಳಿಗಳಂತೆ ಹಬ್ಬ ಆಚರಿಸಬೇಕು ಎಂದರು.

ಗಣೇಶೋತ್ಸವ ಮಂಡಳಿಗಳು ಸ್ಥಳೀಯ ಆಡಳಿತ, ಹೆಸ್ಕಾಂ ಹಾಗೂ ಪೊಲೀಸ್ ಇಲಾಖೆಯಿಂದ ಅಗತ್ಯ ಪರವಾನಗಿ ಪಡೆಯಬೇಕು. ಪೆಂಡಾಲ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯ. ಧ್ವನಿವರ್ಧಕ ಹಾಗೂ ಸ್ಪೀಕರ್‌ಗಳನ್ನು ನಿಗದಿತ ಮಿತಿಯಲ್ಲಿ ಮಾತ್ರ ಬಳಸಬೇಕು. ಡಿಜೆ ಬಳಕೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಲಕ್ಷ್ಮಣ ಚುಳಕಿ, ನಾಗರಾಜ ದೇಶಪಾಂಡೆ, ಎಸ್‌.ಎನ್‌. ಅರಳಿಕಟ್ಟಿ, ನಾಗರಾಜ ಸುಬರಗಟ್ಟಿ, ಕುಮಾರಸ್ವಾಮಿ ಪೂಜಾರ, ಗಿರೀಶ ಗದಗಿನ, ಉಮೇಶ ಯರಗುಪ್ಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.