ಗಣಪತಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ

| Published : Aug 31 2024, 01:42 AM IST

ಸಾರಾಂಶ

ಪಟ್ಟಣದಲ್ಲಿ ಈ ಬಾರಿ ಎಲ್ಲಾ ಗಣಪತಿಗಳನ್ನು ಒಟ್ಟಾಗಿ ವಿಸರ್ಜನೆ ಮಾಡಲು ನಿರ್ಣಯಿಸಲಾಗಿದೆ. ಗಣೇಶ ಮತ್ತು ಈದ್‌ಮಿಲಾದ್ ಹಬ್ಬಗಳನ್ನು ಭಾವೈಕ್ಯತೆಯಿಂದ ಆಚರಿಸಬೇಕು ಎಂದು ತಹಸೀಲ್ದಾರ್ ಮಂಜುನಾಥ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಪಟ್ಟಣದಲ್ಲಿ ಈ ಬಾರಿ ಎಲ್ಲಾ ಗಣಪತಿಗಳನ್ನು ಒಟ್ಟಾಗಿ ವಿಸರ್ಜನೆ ಮಾಡಲು ನಿರ್ಣಯಿಸಲಾಗಿದೆ. ಗಣೇಶ ಮತ್ತು ಈದ್‌ಮಿಲಾದ್ ಹಬ್ಬಗಳನ್ನು ಭಾವೈಕ್ಯತೆಯಿಂದ ಆಚರಿಸಬೇಕು ಎಂದು ತಹಸೀಲ್ದಾರ್ ಮಂಜುನಾಥ್‌ ಹೇಳಿದರು.ಪಟ್ಟಣದ ಪೋಲೀಸ್ ಠಾಣೆ ಮುಂಭಾಗದಲ್ಲಿ ತಾಲೂಕು ಆಡಳಿತ, ಪೋಲೀಸ್ ಇಲಾಖೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ತಾಲೂಕಿನಲ್ಲಿ ಶಾಂತಿಯುತವಾಗಿ ಆಚರಿಸಬೇಕು. ತಾಲೂಕಿನಲ್ಲಿ ಹಿಂದೂ, ಮುಸ್ಲಿಮ್ ಬಾಂಧವರು ಸೌಹಾರ್ದಯುತವಾಗಿ ಹಬ್ಬ ಆಚರಿಸುವಂತೆ ತಿಳಿಸಿದರು.

ಸಿಪಿಐ ಅನಿಲ್ ಮಾತನಾಡಿ, ತಾಲೂಕು ಹಾಗೂ ಪಟ್ಟಣದ ವಾರ್ಡ್‌ಗಳಲ್ಲಿ ಸಾರ್ವಜನಿಕರು ಗಣೇಶ ಪ್ರತಿಷ್ಠಾಪಿಸಿದ ನಂತರ ಇಲಾಖೆಯ ನಿಯಮ ಮತ್ತು ಷರತ್ತುಗಳ ಅನ್ವಯದಂತೆ ನಡೆದುಕೊಳ್ಳಬೇಕು. ಸೌಹಾರ್ದತೆ ಮತ್ತು ಶಾಂತಿ ಪಾಲನೆ ಅತಿ ಮುಖ್ಯ. ಆಯೋಜಕರು ಗಣಪತಿ ಪ್ರತಿಷ್ಠಾಪನೆ ಕಾರ್ಯಕ್ರಮ ಮತ್ತು ವಿಸರ್ಜನೆಯನ್ನು ನಿಯಮ ಬದ್ದ ಮತ್ತು ಶಾಂತಿಯಿಂದ ನಡೆಸಬೇಕು ಎಂದರು. ಪಿಎಸ್‌ಐ ಚೇತನ್ ಕುಮಾರ್ ಮಾತನಾಡಿ, ಈ ವರ್ಷದ ಗಣಪತಿ ಪ್ರತಿಷ್ಠಾಪನೆಗೆ ಊರಿನ ಎಲ್ಲಾ ಮುಖಂಡರ ತೀರ್ಮಾನದ ಮೇರೆಗೆ 11 ದಿನಗಳ ಸಮಯ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಪಿಎಸ್‌ಐ ಬಸವರಾಜು, ಪಪಂ ಸದಸ್ಯರಾದ ಕೆ.ಆರ್.ಓಬಳರಾಜು, ಕೆ.ಎನ್.ಲಕ್ಷೀನಾರಾಯಣ, ನಟರಾಜು, ನಂದೀಶ್, ಮುಖಂಡರಾದ ಕಲೀಂ, ದಾಡಿವೆಂಕಟೇಶ್, ಅಶ್ವಥನಾರಾಯಣರಾಜು, ಕುದುರೆ ಸತ್ಯನಾರಾಯಣ್, ಕೆ.ವಿ.ಪುರುಷೋತ್ತಮ್, ಪ್ರಕಾಶ್, ಕಾರ್‌ಮಹೇಶ್, ದತ್ತಾತ್ರೇಯ ದೀಕ್ಷೀತ್, ಅಭಿಲಾಷ್, ದೇವರಾಜ್, ದೀಪಕ್, ರಘವೀರ್. ಭರತ್ ಭಾಗವಹಿಸಿದ್ದರು.