ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು
ನಿಮ್ಮ ಉದ್ಯೋಗವಕಾಶಗಳನ್ನು ಹೊರರಾಜ್ಯದವರು ಗಿಟ್ಟಿಸಿಕೊಳ್ಳುತ್ತಿದ್ದಾರೆ, ಸ್ಥಳೀಯ ಯುವಕರು ಸರ್ಕಾರಿ ಹುದ್ದೆ ಅಥವಾ ತಮ್ಮ ವಿದ್ಯೆಯ ತಕ್ಕ ನೌಕರಿ ಬೇಕೆಂಬ ಮನಸ್ಥಿತಿ ಬದಲಾಯಿಸಿಕೊಂಡು ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡಿಕೊಳ್ಳಬೇಕು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.ಪಟ್ಟಣದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಬುಧವಾರ ಮಾಜಿ ಸಂಸದ ದಿ. ಧ್ರುವನಾರಾಯಣ ಅವರ 63ನೇ ಜನ್ಮದಿನದ ಅಂಗವಾಗಿ ತಾಲೂಕು ಕಾಂಗ್ರೆಸ್ ಘಟಕ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಿ.ಧ್ರುವನಾರಾಯಣ ಸ್ಥಳೀಯ ಯುವಕರಿಗೆ ಉದ್ಯೋಗ ದೊರಕಿಸಿ, ಭವಿಷ್ಯ ರೂಪಿಸುವ ಕನಸನ್ನು ಹೊಂದಿದ್ದರು, ಚಾಮರಾಜನಗರದಲ್ಲಿ ಕೈಗಾರಿಕಾ ಕೇಂದ್ರ ಸ್ಥಾಪಿಸುವ ಮೂಲಕ ಹಿಂದುಳಿದ ಜಿಲ್ಲೆಯ ಯುವಕರಿಗೆ ನೆರವಾಗಿದ್ದರು, ಅವರ ಆಶಯದಂತೆ ಯುವಕರಿಗೆ ಉದ್ಯೋಗ ದೊರಕಿಸುವ ಸಲುವಾಗಿ ನೂರಕ್ಕೂ ಹೆಚ್ಚು ಕಂಪನಿಗಳನ್ನು ಕರೆಸಿ, ಅಧಿಕಾರಿಗಳ ಸಮ್ಮಖದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದರು.ಉದ್ಯೋಗ ಆಕಾಂಕ್ಷಿಗಳ ವಿದ್ಯೆ, ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗಗಳು ದೊರಕಿವೆ, ಈ ಮೇಳದಲ್ಲಿ 600ಕ್ಕೂ ಹೆಚ್ಚು ಮಂದಿಗೆ ಉದ್ಯೋಗವಕಾಶ ದೊರಕಿದೆ, ದಿ. ಧ್ರುವನಾರಾಯಣ್ ಅವರಿಗೆ ಸಾಟಿಯಾದ ರಾಜಕಾರಣಿ ಇಲ್ಲ, ಅವರಿಗೆ ಅವರೇ ಸಾಟಿ, ಅವರ ಕನಸುಗಳನ್ನು ಅವರ ಹಾದಿಯಲ್ಲೇ ನಡೆಯುವ ಮೂಲಕ ಅವರ ಮಗ ದರ್ಶನ್ ಧ್ರುವನಾರಾಯಣ ಸಾಕಾರಗೊಳಿಸುತ್ತಿದ್ದಾರೆ ಎಂದರು.
ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಕೇಂದ್ರ ಸರ್ಕಾರ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಹೇಳಿತ್ತು, ಆದರೆ ದೇಶದ ಕೋಟ್ಯಾಂತರ ಮಂದಿ ಯುವಕರು ಉದ್ಯೋಗ ಸಿಗದೆ ನಿರುದ್ಯೋಗಿಗಳಾಗಿದ್ದಾರೆ, ಯುವಕರಿಗೆ ಸ್ಫೂರ್ತಿಯಾಗಿದ್ದ ಧ್ರುವನಾರಾಯಣ ಎರಡು ಬಾರಿ ಸಂಸದರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ, ಅವರ ಮಗ ಶಾಸಕ ದರ್ಶನ್ ಸಹ ಬಜನರೊಂದಿಗೆ ಬೆರೆತು ಕೆಲಸ ಮಾಡುವ ಮೂಲಕ ತಂದೆಯ ಹಾದಿಯಲ್ಲಿ ನಡೆದಿದ್ದಾರೆ, ಯುವಕರಿಗೆ ಉದ್ಯೋಗ ದೊರಕಿಸುವ ಈ ಪ್ರಯತ್ನ ಯಶಸ್ವಿಯಾಗಿದೆ ಎಂದರು.ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ತಂದೆಯವರು ಚಾಮರಾಜನರ ಜಿಲ್ಲೆಯಲ್ಲಿ ನಿರುದ್ಯೋಗ ಹೋಗಲಾಡಿಸುವ ಉದ್ದೇಶದಿಂದ ಕೈಗಾರಿಕಾ ಪ್ರದೇಶ ಸ್ಥಾಪಿಸಿ ಹಲವಾರು ಕೈಗಾರಿಕೆಗಳು ಸ್ಥಾಪನೆಯಾಗುವಂತೆ ಮಾಡಿದ್ದಾರೆ. ಅಲ್ಲದೆ ನನ್ನ ತಂದೆ ಬದುಕಿದ್ದಾಗ 2 ಬಾರಿ ಉದ್ಯೋಗ ಮೇಳವನ್ನು ನಡೆಸಿ, ಯುವಕರಿಗೆ ಉದ್ಯೋಗ ದೊರಕಿಸುವ ಪ್ರಯತ್ನ ನಡೆಸಿದ್ದರು, ಅವರ ಆಶಯದಂತೆ ಅವರ ಹುಟ್ಟುಹಬ್ಬದ ಪ್ರಯುಕ್ತ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ, ಸ್ಥಳೀಯವಾಗಿ ನಮ್ಮ ಯುವಕರಿಗೆ ಹೆಚ್ಚಿನ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಬದ್ದನಾಗಿದ್ದೇನೆ ಎಂದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ವಿಧಾನಸಭಾ ಉಸ್ತುವಾರಿ ಶ್ರೀಕಂಠು, ಸೋಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹೇಶ್, ಸಿ.ಎಂ. ಶಂಕರ್, ಶ್ರೀಕಂಠನಾಯಕ, ವಾಲ್ಮೀಕಿ ನಿಗಮ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಜಿಪಂ ಮಾಜಿ ಸದಸ್ಯ ಕೆ. ಮಾರುತಿ, ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್, ಮುಖಂಡರಾದ ಕಾವೇರಪ್ಪ, ಎನ್.ಎಂ. ಮಂಜುನಾಥ್, ವಿಜಯಕುಮಾರ್, ಶ್ರೀನಿವಾಸಮೂರ್ತಿ, ದೊರೆಸ್ವಾಮಿ ನಾಯಕ, ಮಾಜಿ ನಗರಸಭಾ ಉಪಾಧ್ಯಕ್ಷ ದೊರೆಸ್ವಾಮಿ, ಕೆಪಿಸಿಸಿ ಸದಸ್ಯ ಅಕ್ಬರ್ ಅಲಿಂ, ಧಿರೇನ್ ಧ್ರುವನಾರಾಯಣ್ ಇದ್ದರು.