ಕನ್ನಡಪ್ರಭ ವಾರ್ತೆ ಮಂಡ್ಯ

ಇವರೇನು ಮಕ್ಕಳೂ ಅಂತ ತಿಳ್ಕೊಂಡಿದೀರಾ ಅಥವಾ ಪ್ರಾಣಿಗಳೂಂತ ತಿಳ್ಕೊಂಡಿದಿರಾ. ನೀವೆಲ್ಲಾ ಮನುಷ್ಯರೇನ್ರೀ. ನಿಮಗೆ ಮನುಷ್ಯತ್ವ ಇದೆಯಾ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ನಗರದ ಬಂದೀಗೌಡ ಬಡಾವಣೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಉಪ ಲೋಕಾಯುಕ್ತರು ದಿಢೀರ್ ಭೇಟಿ ನೀಡಿದ ವೇಳೆ ಒಂದೇ ಕೊಠಡಿಯಲ್ಲಿ ೧೩ ಹೆಣ್ಣು ಮಕ್ಕಳು ವಾಸವಿರುವುದನ್ನು ಕಂಡರು. ಇದರಿಂದ ಆಕ್ರೋಶಗೊಂಡ ಅವರು, ಪ್ರಾಣಿಗಳು ತುಂಬುವಂತೆ ಕೊಠಡಿಯಲ್ಲಿ ತುಂಬಿದ್ದೀರಲ್ರೀ. ನಿಮಗೇನೂ ಅನ್ನಿಸೋಲ್ವಾ. ಅವರಿಗೆ ಅನುಕೂಲವಿದ್ದಿದ್ದರೆ ಇಲ್ಲಿಗ್ಯಾಕ್ರೀ ಬರ್ತಾ ಇದ್ದರು. ಇವರೆಲ್ಲಾ ಬಡವರ ಮಕ್ಕಳು. ಓದುವುದಕ್ಕಾಗಿ ಇಲ್ಲಿಗೆ ಬಂದಿದ್ದಾರೆ. ಅವರನ್ನು ನಮ್ಮ ಮಕ್ಕಳಂತೆ ನೋಡಿಕೊಳ್ಳಬೇಕಲ್ಲವೇ. ಓದುವ ಮಕ್ಕಳನ್ನು ಹೀಗೆ ಏನ್ರೀ ನೋಡಿಕೊಳ್ಳೋದು ಎಂದು ವಸತಿ ನಿಲಯದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅಂಬೇಡ್ಕರ್ ಸಂವಿಧಾನ ಕೊಟ್ಟು ಹೋದರು. ಆದರೆ, ನೀವು ಚಿತ್ರಹಿಂಸೆ ಕೊಡುತ್ತಿದ್ದೀರಿ. ಸಮಾನತೆ, ಗೌರವಯುತ ಬದುಕಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೀರಿ. ಪ್ರಾಣಿಗಳಂತೆ ವರ್ತಿಸುತ್ತಿದ್ದೀರಿ. ಹೆಣ್ಣು ಮಕ್ಕಳಿಗೆ ಪ್ರಥಮ ಚಿಕಿತ್ಸೆ ನೀಡುವ ಬಾಕ್ಸ್ ಇಲ್ಲ, ವೈದ್ಯರು ಬರೋದಿಲ್ಲ. ಅದೇ ತಿಂಡಿ, ಅದೇ ಊಟ. ಪಾತ್ರೆಗಳಿಲ್ಲ. ಅವರೇನು ಪ್ರಾಣಿಗಳಾ. ನಿಮಗೆ ಸಂಬಳ ಬರುತ್ತಿದೆ ತಾನೇ. ನಿಮ್ಮ ಕೈಯಿಂದ ದುಡ್ಡು ಕೊಡ್ತಿದ್ದೀರಾ. ಸರ್ಕಾರದ ಹಣ, ತೆರಿಗೆದಾರರು ಕೊಡುತ್ತಿರುವ ಹಣ. ಸರಿಯಾಗಿ ಏಕೆ ಮಾಡುತ್ತಿಲ್ಲ ಎಂದು ಕಟುವಾಗಿ ಪ್ರಶ್ನಿಸಿದರು.

ಪಾತ್ರೆ ತೆಗೆದುಕೊಳ್ಳುವುದಕ್ಕೆ ನಿಮಗೆ ಯೋಗ್ಯತೆ ಇಲ್ಲವೇ. ಅದಕ್ಕೂ ಲೆಟರ್ ಬರೀಬೇಕಾ. ಎಷ್ಟಾಗುತ್ತೆ ಪಾತ್ರೆಗಳಿಗೆ ಎಂದಾಗ ₹೩ ರಿಂದ ₹೪ ಲಕ್ಷ ಎಂದು ಅಧಿಕಾರಿಗಳು ಹೇಳಿದಾಗ, ಈ ಪಾತ್ರೆಗಳಿಗೆ ₹೩ ಲಕ್ಷನಾ ಎಂದು ಅಚ್ಚರಿ ವ್ಯಕ್ತಪಡಿಸಿದರು.