ಮಕ್ಕಳಲ್ಲಿ ಸಂಕೋಚ ಮನೋಭಾವ ಇರಬಾರದು. ಮಕ್ಕಳು ಆಡುತ್ತಾ, ನಲಿಯುತ್ತಾ ಶಿಕ್ಷಣ ಕಲಿಯಬೇಕು. ಶೈಕ್ಷಣೀಕ ರಂಗದಲ್ಲಿ ಉತ್ತಮ ಸಾಧನೆ ಮಾಡಬೇಕು

ಕುಕನೂರು: ಪಾಲಕರು ಹಾಗೂ ಶಿಕ್ಷಕರ ಬಳಿ ಮಕ್ಕಳು ಮುಕ್ತವಾಗಿ ತಮ್ಮ ಬೇಡಿಕೆ ಹಾಗೂ ಸಮಸ್ಯೆ ಹೇಳಿಕೊಳ್ಳಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತಸಮಾಲೋಚಕ ರವಿ ಬಡಿಗೇರ ಹೇಳಿದರು.

ತಾಲೂಕಿನ ಇಟಗಿಯ ಆದರ್ಶ ವಿದ್ಯಾಲಯದಲ್ಲಿ ಜರುಗಿದ ಗ್ರಾಪಂ ಮಟ್ಟದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಸಂಕೋಚ ಮನೋಭಾವ ಇರಬಾರದು. ಮಕ್ಕಳು ಆಡುತ್ತಾ, ನಲಿಯುತ್ತಾ ಶಿಕ್ಷಣ ಕಲಿಯಬೇಕು. ಶೈಕ್ಷಣೀಕ ರಂಗದಲ್ಲಿ ಉತ್ತಮ ಸಾಧನೆ ಮಾಡಬೇಕು. ಮಕ್ಕಳು ಕೂಲಿ ಕೆಲಸಕ್ಕೆ ಹೋಗಬಾರದು. ಅಂತಹ ಮಕ್ಕಳು ಕಂಡರೆ ತಕ್ಷಣವೇ ಶಿಕ್ಷಕರಿಗೆ ತಿಳಿಸಿ ಶಾಲೆಗೆ ಕರೆ ತರಬೇಕು. ಮಕ್ಕಳಿಗೆ ಆಹಾರ ಕೊರತೆ ಸಹ ಇದ್ದರೆ ತಿಳಿಸಬೇಕು. ಯಾರಿಂದಾದರೂ ಕಿರಿಕಿರಿ ಇದ್ದರೆ ಸಹ ಹಿಂಜರಿಯದೇ ತಿಳಿಸಬೇಕು ಎಂದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಶರಣಪ್ಪ ಕೆಳಗಿನಮನಿ ಮಾತನಾಡಿ, 18 ವರ್ಷದ ಒಳಗಿನ ಮಕ್ಕಳ ಅಂಕಿ ಸಂಖ್ಯೆಗಳನ್ನು ಹಾಗೂ ಕಳೆದ ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳು ಕೇಳಲಾದ ಸಮಸ್ಯೆಗಳು ಮತ್ತು ಪ್ರಶ್ನೆಗಳಿಗೆ ಒದಗಿಸಲಾಗದ ಪರಿಹಾರದ ಕುರಿತು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕಾಶೀಮಠ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಕರ್ನಾಟಕ ತಿದ್ದುಪಡಿ ನಿಯಮ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ 2012ರ ಕುರಿತು ಮತ್ತು ಮಕ್ಕಳ ರಕ್ಷಣಾ ನೀತಿ 2016ರ ಅಂಶಗಳ ಅನುಷ್ಠಾನದ ಅಗಾಧತೆಯ ಕುರಿತು ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷೆ ರತ್ನವ್ವ ಹಂಚಾಳಪ್ಪ ಭಜಂತ್ರಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಸಹಾಯವಾಣಿಯ ಸಂಯೋಜಕ ಶರಣಪ್ಪ ಸಿಂಗನಾಳ ಮಕ್ಕಳ ಸಹಾಯವಾಣಿ 1098 ರ ಕುರಿತು ಮತ್ತು ಪ್ರಕರಣಗಳ ವಿಧಗಳ ಕುರಿತು ಮಾಹಿತಿ ನೀಡಿದರು.

ಆರೋಗ್ಯ ಇಲಾಖೆಯ ಸಿಬ್ಬಂದಿಗಳು,ಗ್ರಾಪಂ ಮಟ್ಟದ ಎಲ್ಲ ಶಾಲಾ ಮುಖ್ಯೋಪಾಧ್ಯಯರು,ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಮಕ್ಕಳಿದ್ದರು. ಶಿಕ್ಷಕಿ ರೋಹಿಣಿ ಚಂಡೂರಮಠ, ವಿರುಪಾಕ್ಷಪ್ಪ ಮ್ಯಾಲಿ ನಿರೂಪಣೆ ಮಾಡಿದರು.