ನವದೆಹಲಿಯ ಭಾರತೀಯ ರೆಡ್ಕ್ರಾಸ್ ಸೊಸೈಟಿ ರಾಷ್ಪ್ರೀಯ ಕಾರ್ಯಕಾರಿ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರಾಗಿ ಡಾ.ಮುರಲೀ ಮೋಹನ್ ಚೂಂತಾರು ನೇಮಕಗೊಂಡಿದ್ದಾರೆ.
ಮಂಗಳೂರು: ನವದೆಹಲಿಯ ಭಾರತೀಯ ರೆಡ್ಕ್ರಾಸ್ ಸೊಸೈಟಿ ರಾಷ್ಪ್ರೀಯ ಕಾರ್ಯಕಾರಿ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರಾಗಿ ಡಾ.ಮುರಲೀ ಮೋಹನ್ ಚೂಂತಾರು ನೇಮಕಗೊಂಡಿದ್ದಾರೆ.
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಈ ನೇಮಕಾತಿ ಆದೇಶ ಜಾರಿಗೊಳಿಸಿದ್ದಾರೆ. ಕೇಂದ್ರ ಸರ್ಕಾರದ ಆರೋಗ್ಯ ಸಚಿವರು ಈ ಕಾರ್ಯಕಾರಿ ಸಮಿತಿಯ ಸಭಾಪತಿಯಾಗಿರುತ್ತಾರೆ.ಡಾ.ಚೂಂತಾರು ರೆಡ್ ಕ್ರಾಸ್ ಸೊಸೈಟಿಯ ಆಜೀವ ಸದಸ್ಯರಾಗಿದ್ದು, ಹಲವಾರು ವರ್ಷಗಳಿಂದ ರೆಡ್ ಕ್ರಾಸ್ ಸೊಸೈಟಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ. ಯೂತ್ ರೆಡ್ ಕ್ರಾಸ್ ಅಧಿಕಾರಿಯಾಗಿ, ನಿಟ್ಟೆ ವಿಶ್ವ ವಿದ್ಯಾಲಯದಲ್ಲಿ ಐದು ವರ್ಷ ಕೆಲಸ ಮಾಡಿರುತ್ತಾರೆ. ನಂತರ ದ.ಕ. ಜಿಲ್ಲಾ ರೆಡ್ ಕ್ರಾಸ್ ಸೋಸೈಟಿಯ ಸಭಾಪತಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇವರ ಅಧಿಕಾರದ ಅವಧಿಯಲ್ಲಿಯೇ ೨೦೧೩ ರಲ್ಲಿ ರೆಡ್ ಕ್ರಾಸ್ ರಕ್ತ ನಿಧಿ ಸರ್ಕಾರಿ ಲೇಡಿ ಗೋಷನ್ ಆಸ್ಪತ್ರೆಗೆ ಸ್ಥಳಾಂತರಗೊಂಡಿರುತ್ತದೆ. ರಕ್ತ ನಿಧಿ ಸಮಿತಿಯ ಅಧ್ಯಕ್ಷರಾಗಿ ಭದ್ರವಾದ ಭುನಾಧಿ ಹಾಕಿದ ಹೆಗ್ಗಳಿಕೆ ಇವರದ್ದು. 100ಕ್ಕಿಂತಲೂ ಹೆಚ್ಚು ರಕ್ತದಾನ ಶಿಬಿರ ಆಯೋಜಿಸಿರುತ್ತಾರೆ. ಸ್ವತಃ ರಕ್ತದಾನಿಯಾಗಿರುವ ಡಾ.ಚೂಂತಾರು100ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುತ್ತಾರೆ. ಸದ್ಯ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೆಂಗಳೂರು ರಾಜ್ಯ ಶಾಖೆ ಇದರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಮಾನವೀಯತೆಯಿಂದಲೇ ವಿಶ್ವಶಾಂತಿ ಎಂಬ ತತ್ವದಡಿಯಲ್ಲಿ ನಿಸ್ವಾರ್ಥ ಕೆಲಸ ಮಾಡುವ ರೆಡ್ ಕ್ರಾಸ್ ಸೊಸೈಟಿಗೆ ಡಾ. ಚೂಂತಾರು ನೇಮಕವಾಗಿರುವುದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ.