ಹಿಂದಿನ ಸಿನಿಮಾ ಗೀತೆಗಳು, ಗೀತೆ ರಚನಕಾರರ ಹಾಡುಗಳು ಸಮಾಜ, ಕುಟುಂಬ, ಮನಸ್ಸುಗಳನ್ನು ಬೆಸೆಯುತ್ತಿದ್ದವು. ಸೋಮಾರಿತನವನ್ನು ಬಡಿದೆಬ್ಬಿಸುತ್ತಿದ್ದವು. ಸಂಸ್ಕಾರದ ಮೌಲ್ಯಗಳನ್ನು ಬಿತ್ತರಿಸುತ್ತಿದ್ದವು. ಆದರೆ, ಇಂದಿನ ಸಿನಿಮಾ ಗೀತೆಗಳು ಮನಸ್ಸುಗಳನ್ನು ದಾನವತ್ವದೆಡೆಗೆ ಸಾಗಿಸುತ್ತಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಇತ್ತೀಚಿನ ದಿನಗಳಲ್ಲಿ ಸಿನಿ ವಾಣಿಜ್ಯ ಸಾಹಿತ್ಯವು ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುತ್ತಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಹೇಳಿದರು.

ನಗರದ ಗಾಂಧಿಭವನದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಆಯೋಜಿಸಿದ್ದ ಅಖಿಲ ಕರ್ನಾಟಕ ರಾಜ್ಯ ಮಟ್ಟದ ಕವಿ ಕಾವ್ಯ ಮೇಳ-ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಅಭಿನಂದನೆ ಸಮಾರಂಭ ಉದ್ಘಾಟಿಸಿಮಾತನಾಡಿದರು.

ಸಿನಿಮಾ ಕ್ಷೇತ್ರದ ವಾಣಿಜ್ಯ ಸಾಹಿತ್ಯವು ಸ್ವಾಸ್ಥ್ಯ ಸಮಾಜವನ್ನು ಕದಲಿಸಿ, ಸಂಸ್ಕಾರ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿವೆ. ಮನೋವಿಕಾರವನ್ನು ಪ್ರಚೋದನೆ ಮಾಡುತ್ತಿವೆ. ತಂದೆ-ತಾಯಿ-ಮಹಿಳೆಯರ ಗೌರವಕ್ಕೆ ಚ್ಯುತಿ ತರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದಿನ ಸಿನಿಮಾ ಗೀತೆಗಳು, ಗೀತೆ ರಚನಕಾರರ ಹಾಡುಗಳು ಸಮಾಜ, ಕುಟುಂಬ, ಮನಸ್ಸುಗಳನ್ನು ಬೆಸೆಯುತ್ತಿದ್ದವು. ಸೋಮಾರಿತನವನ್ನು ಬಡಿದೆಬ್ಬಿಸುತ್ತಿದ್ದವು. ಸಂಸ್ಕಾರದ ಮೌಲ್ಯಗಳನ್ನು ಬಿತ್ತರಿಸುತ್ತಿದ್ದವು. ಆದರೆ, ಇಂದಿನ ಸಿನಿಮಾ ಗೀತೆಗಳು ಮನಸ್ಸುಗಳನ್ನು ದಾನವತ್ವದೆಡೆಗೆ ಸಾಗಿಸುತ್ತಿವೆ ಎಂದು ವಿಷಾದಿಸಿದರು.

ಸೆರ್ಸೆ ಸೆರ್ಸೆ ನಿನ್ನ ಸೆರಗ.., ಅಪ್ಪ ಲೂಜಾ, ಅಮ್ಮ ಲೂಜಾ.., ಒಡಿ ಮಗ ಒಡಿ ಬಿಡಬೇಡ ಅವನ್ನ.. ಈ ರೀತಿಯ ವಾಣಿಜ್ಯ ಸಾಹಿತ್ಯ ಸಮಾಜವನ್ನು ಹಾಳು ಮಾಡುತ್ತಿವೆ ಎಂದು ಎಚ್ಚರಿಸಿದರು.

ವೇದಿಕೆ ರಾಜ್ಯ ಕಾರ್ಯದರ್ಶಿ ಸಿ.ಜೆ.ಸುಜಾತ ಕೃಷ್ಣ, ಸಮಾಜ ಕಟ್ಟುವ ಕಾರ್ಯದಲ್ಲಿ ಸಾಹಿತಿಗಳ ಕೊಡುಗೆ ಅಪಾರ. ಭಾಷೆ-ಭಾವನೆ ಬೆಳೆವಣಿಗೆಗೆ ಸಾಹಿತ್ಯ ಅತ್ಯವಶ್ಯಕ. ಹೊಸತನ-ಹೊಸತಲೆಮಾರಿಗೆ ಇಂದಿನ ವಾಸ್ತವತೆ ಕಟ್ಟಿಕೊಡುವ ಸಾಮಥ್ಯ ಸಾಹಿತ್ಯಕಿದೆ ಎಂದು ನುಡಿದರು.

ಸಮ್ಮೇಳನಾಧ್ಯಕ್ಷ ಸಾಹಿತಿ ಕೆ.ಪಿ.ವೀರಪ್ಪ ಮಾತನಾಡಿ, ಜಾನಪದ ವಿಲ್ಲದೆ ಯಾವ ಸಾಹಿತ್ಯವೂ ಉತ್ತಮವಾಗದು. ಜನಪದವೇ ಎಲ್ಲದಕ್ಕೂ ಮೂಲಾಧಾರ. ಇಂದಿನ ಯುವಕವಿಗಳು, ಸಾಹಿತಿಗಳು ಜನಪದವನ್ನು ಅಭ್ಯಾಸ ಮಾಡಿ ಸಂಗ್ರಹಿಸಬೇಕು ಎಂದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಗಣ್ಯರ ಸಮ್ಮುಖದಲ್ಲಿ ಅಭಿನಂದನೆ ಸಲ್ಲಿಸಲಾಯಿತು, ಕವಿಕಾವ್ಯ ಮೇಳ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಪೋತೇರ ಮಹದೇವು, ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ಎಂ.ಗುರುಪ್ರಸಾದ್, ಮೈಸೂರು ಮಹಾಜನ್ ಪ್ರಥಮ ದರ್ಜೆ ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಎಚ್.ಶ್ರೀಧರ್, ಜೆಡಿಎಸ್‌ ಮುಖಂಡ ಕಿರಣ್‌ ರಾಮಲಿಂಗೇಗೌಡ, ವೇದಿಕೆ ರಾಜ್ಯ ಉಪಾಧ್ಯಕ್ಷೆ ಎಂ.ಸಿ.ಚೊಂದಮ್ಮ ಪೂರ್ಣಚ್ಚ, ಸಾಹಿತಿ ಡಾ.ಪದ್ಮಾ ಶ್ರೀನಿವಾಸ್, ಪ್ರೊ.ಜೋಗಿಗೌಡ, ವೇದಿಕೆ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮಯ್ಯ, ಎಸ್.ಟಿ.ರಮೇಶ್, ಮಂಜುಳಾ ರಮೇಶ್, ಹಾವೇರಿ ನಾಗರಾಜು, ಶ್ಯಾಮ ಲತಾ, ಕ್ಷಮಾ ಮತ್ತಿತರರಿದ್ದರು.