ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ನಿವೃತ್ತ ನೌಕರರಿಗೆ ಸಿಗಬೇಕಾದ ಹಕ್ಕಿನ ಮೊತ್ತ ಸಿಗುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ನಮ್ಮ ಸಮಸ್ಯೆಯನ್ನು ಮುಟ್ಟಿಸಿ ೭ನೇ ವೇತನ ಆಯೋಗದಡಿಯಲ್ಲಿ ಪಿಂಚಣಿ ಸೌಲಭ್ಯ ನೀಡಬೇಕೆಂದು ಹಕ್ಕೊತ್ತಾಯ ಮಂಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆಯ ಜಿಲ್ಲಾ ಘಟಕದ ಸಹ ಸಂಚಾಲಕಿ ಮಂಜುಳಾ ಹೇಳಿದರು.ಅವರು ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಸಭಾಭವನದಲ್ಲಿ ನಡೆದ ೧-೭-೨೦೨೨ರಿಂದ ೩೧-೭-೨೦೨೪ರ ಅವಧಿಯಲ್ಲಿ ನಿವೃತ್ತರಾದ ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆಯ ಸದಸ್ವತ್ವ ಅಭಿಯಾನ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿವೃತ್ತರಾದ ನೌಕರರಿಗೆ ೬ನೇ ವೇತನ ಆಯೋಗದಡಿಯಲ್ಲಿ ಪಿಂಚಣಿ ಸೌಲಭ್ಯ ನೀಡಲಾಗುತ್ತಿದ್ದು ಇದನ್ನು ಪರಿಷ್ಕರಿಸಿ ೭ನೇ ವೇತನ ಆಯೋಗದಡಿಯಲ್ಲಿ ನೀಡಬೇಕು. ಜೂ.೧, ೨೦೨೨ರಿಂದ ಜು.೩೧, ೨೦೨೪ರ ಅವಧಿಯಲ್ಲಿ ರಾಜ್ಯದಲ್ಲಿ ೧೭,೬೩೨ ಮಂದಿ ನೌಕರರು ವಿವಿಧ ಇಲಾಖೆಗಳಿಂದ ನಿವೃತ್ತರಾಗಿರುತ್ತಾರೆ. ಈ ಎಲ್ಲ ನಿವೃತ್ತ ನೌಕರರಿಗೆ ಈಗ ನೀಡುತ್ತಿರುವ ಪಿಂಚಣಿ ವ್ಯವಸ್ಥೆಯಲ್ಲಿ ಕಡಿಮೆ ಪಿಂಚಣಿ ಸೌಲಭ್ಯ ಸಿಗುತ್ತಿದೆ. ಇದರಿಂದ ನಿವೃತ್ತ ನೌಕರರಿಗೆ ಸಿಗಲೇಬೇಕಾದ ಹಕ್ಕಿನ ಮೊತ್ತ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ನಮ್ಮ ಸಮಸ್ಯೆಯನ್ನು ಮುಟ್ಟಿಸುವ ಕೆಲಸ ನಡೆಸಲಾಗುತ್ತಿದೆ ಎಂದರು. ಕಡಬ ತಾಲೂಕು ಸಂಚಾಲಕ ಗಣೇಶ್ ಪಿ. ಮಾತನಾಡಿದರು.
ಜಿಲ್ಲಾ ವೇದಿಕೆಯ ಸಹ ಸಂಚಾಲಕಿ ವಿಜಯಾ ಪೈ, ಪುತ್ತೂರು ತಾಲೂಕು ಘಟಕದ ಸಂಚಾಲಕ ಜೆರಾಲ್ಡ್ ಮಸ್ಕರೇನಸ್ ಉಪಸ್ಥಿತರಿದ್ದರು. ಕಡಬ ತಾಲೂಕು ಸಹ ಸಂಚಾಲಕಿ ಸೂಸಮ್ಮ ಪಿ.ಎಸ್. ವಂದಿಸಿದರು.