ಅಶುಚಿತ್ವ ಸಾಂಕ್ರಾಮಿಕ ರೋಗ, ಅನಾರೋಗ್ಯದ ತಾಣವಾಗಲಿದೆ. ನಮ್ಮ ಸುತ್ತಮುತ್ತಲಿನ ಪರಿಸರ ಶುಚಿತ್ವದೆಡೆಗೆ ಗಮನ ಹರಿಸಿದರೆ ಗ್ರಾಮ ಆರೋಗ್ಯ ಧಾಮವಾಗಲಿದೆ. ನಾಗರೀಕರು ನೈರ್ಮಲ್ಯತೆಗೆ ಸಹಕರಿಸಲು ಜಾಗೃತಿ ಮೂಡಿಸಲು ಅಧಿಕಾರಿಗಳು, ಸಿಬ್ಬಂದಿ ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಇತಿಹಾಸ ಪ್ರಸಿದ್ಧ ಹೊಯ್ಸಳರ ಕಾಲದ ಬ್ರಹ್ಮೇಶ್ವರ ದೇಗುಲದಲ್ಲಿ ಬೃಹದಾಕಾರವಾಗಿ ಬೆಳೆದಿದ್ದ ಗಿಡಗಂಟಿ ತೆಗೆದು ಶ್ರಮದಾನ ಮೂಲಕ ಅಧಿಕಾರಿಗಳು, ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್, ತಾಲೂಕು ಪಂಚಾಯ್ತಿ, ಕಿಕ್ಕೇರಿ ಗ್ರಾಮ ಪಂಚಾಯ್ತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ತಾಪಂ ಇಒ ಸುಷ್ಮಾ ಮಾತನಾಡಿ, ಗಾಂಧಿ ಪರಿಕಲ್ಪನೆಯಂತೆ ಎಲ್ಲಿ ಶುಚಿತ್ವ ಇರಲಿದೆಯೋ ಅಲ್ಲಿ ಆರೋಗ್ಯವಿರುತ್ತದೆ ಎಂದರು.

ಅಶುಚಿತ್ವ ಸಾಂಕ್ರಾಮಿಕ ರೋಗ, ಅನಾರೋಗ್ಯದ ತಾಣವಾಗಲಿದೆ. ನಮ್ಮ ಸುತ್ತಮುತ್ತಲಿನ ಪರಿಸರ ಶುಚಿತ್ವದೆಡೆಗೆ ಗಮನ ಹರಿಸಿದರೆ ಗ್ರಾಮ ಆರೋಗ್ಯ ಧಾಮವಾಗಲಿದೆ. ನಾಗರೀಕರು ನೈರ್ಮಲ್ಯತೆಗೆ ಸಹಕರಿಸಲು ಜಾಗೃತಿ ಮೂಡಿಸಲು ಅಧಿಕಾರಿಗಳು, ಸಿಬ್ಬಂದಿ ಮುಂದಾಗಬೇಕು ಎಂದರು.

ವಾರದ ಒಂದು ದಿನ ಸ್ವಚ್ಛ ದಿನಾಚರಣೆ ಮಾಡುವುದರಿಂದ ಇಡೀ ಗ್ರಾಮ ನೈರ್ಮಲ್ಯತೆಯ ಬೀಡಾಗಲಿದೆ. ವಾರಕ್ಕೊಂದು ಬಡಾವಣೆ ಆಯ್ಕೆ ಮಾಡಿಕೊಂಡು ಸ್ಥಳೀಯ ಮುಖಂಡರು, ಸಂಘ-ಸಂಸ್ಥೆಗಳ ಸಹಕಾರದಿಂದ ಶುಚಿತ್ವಕ್ಕೆ ಮುಂದಾಗಬೇಕು ಎಂದು ಮನವರಿಕೆ ಮಾಡಿದರು.

ಪೌರ ಕಾರ್ಮಿಕರು, ಅಧಿಕಾರಿಗಳು ಕೈಯಲಿ ಕುಡುಗೋಲು, ಹಾರೆ, ಪಿಕಾಸಿ, ಗುದ್ದಲಿ, ಪೊರಕೆ, ಬಾಂಡಲಿಗಳನ್ನು ಹಿಡಿದು ಕೂಲಿ ಕಾರ್ಮಿಕರಿಗೆ ತಾವು ಕಡಿಮೆ ಇಲ್ಲದಂತೆ ಕಲ್ಲು ಮುಳ್ಳು ಪೊದೆಗಳನ್ನು ಕಡಿದು ಒಂದೆಡೆ ಒಪ್ಪಊರಣ ಮಾಡಿದರು. ಕಲ್ಲು, ಮುಳ್ಳು ಬಾಚಿಗುಂಡಿ ಬಿದ್ದ ಸ್ಥಳವನ್ನು ಸಮತಟ್ಟು ಮಾಡಿದರು. ಕಲ್ಲು, ಮುಳ್ಳಿನ ಪೊದೆಗಳಿಂದ ತುಂಬಿದ ಪರಿಸರದ ಆವರಣವನ್ನು ಸುಂದರ ಗೊಳಿಸಿ ಕಲ್ಯಾಣಿಯಲ್ಲಿನ ನೀರಿನಿಂದ ತೊಳೆದು ಶುಚಿಗೊಳಿಸಿದರು.

ದೇವಾಲಯದಲ್ಲಿದ್ದ ಜೇಡರ ಬಲೆ, ಧೂಳು ತೆಗೆದು ದೇಗುಲವನ್ನು ಸುಂದರಗೊಳಿಸಿದರು. ಈ ವೇಳೆ ಗ್ರಾಪಂ ಇಒ ಸಿ.ಚಲುವರಾಜು, ಕಾರ್ಯದರ್ಶಿ ಪಾಪೇಗೌಡ, ಲೆಕ್ಕ ಸಹಾಯಕ ವಾಸು, ಪೌರಕಾರ್ಮಿಕರುಇದ್ದರು.

ಸಿ.ಕುಮಾರ್‌ಗೆ ಪಿಎಚ್‌.ಡಿ ಪದವಿ

ಕನ್ನಡಪ್ರಭ ವಾರ್ತೆ ಮೈಸೂರು

ಡಾ.ಎಂ.ಬಿ. ಸುರೇಶ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಸಿ. ಕುಮಾರ ಅವರು ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯ ಅಂಗೀಕರಿಸಿ ಕನ್ನಡ ವಿಷಯದಲ್ಲಿ ಪಿಎಚ್‌.ಡಿ ಪದವಿ ನೀಡಿದೆ.

ಸಿ.ಕುಮಾರ್‌ ಅವರು ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಟ್ಟದಾಸನದೊಡ್ಡಿ ಗ್ರಾಮದ ಚೌಡಯ್ಯ ಹಾಗೂ ಚಿಕ್ಕಚನ್ನಮ್ಮ ಅವರ ಪುತ್ರ, ಪ್ರಸ್ತುತ ಮಳವಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.