ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಏಪ್ರಿಲ್ ೨೧(ಇಂದು) ಗುಂಡ್ಲುಪೇಟೆಗೆ ಆಗಮಿಸಲಿದ್ದು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಅದ್ಧೂರಿ ಸ್ವಾಗತಕ್ಕೆ ಕಾಂಗ್ರೆಸ್ಸಿಗರು ಸಜ್ಜಾಗಿದ್ದಾರೆ.

ಸಿಎಂ, ಡಿಸಿಎಂ ಸ್ವಾಗತ ಕೋರುವ ಫ್ಲೆಕ್ಸ್‌ಗಳು ಪಟ್ಟಣದ ಜೋಡಿ ರಸ್ತೆ, ಕಾರ್ಯಕ್ರಮ ನಡೆಯುವ ಸ್ಥಳವಾದ ಡಿ.ದೇವರಾಜ ಅರಸು ಕ್ರೀಡಾಂಗಣದ ಮುಂದೆ ಹಾಗೂ ಹೆಲಿಪ್ಯಾಡ್‌ ಜಾಗದ ಬಳಿ ರಾರಾಜಿಸುತ್ತಿವೆ.

ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದದಲ್ಲಿ ಬೃಹತ್‌ ವೇದಿಕೆ ನಿರ್ಮಾಣಗೊಂಡಿದೆ. ಸಹಸ್ರಾರು ಕುರ್ಚಿಗಳನ್ನು ವೇದಿಕೆ ಮುಂದೆ ಹಾಕಿದ್ದಾರೆ. ವೇದಿಕೆ ಸ್ಥಳ, ಹೆಲಿಪ್ಯಾಡ್‌ ಹಾಗೂ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿ ಸಚಿವರು ಹಾಗೂ ಗಣ್ಯರಿಗೆ ತಂಗಲು ಪಟ್ಟಣದ ಜೆಎಸ್‌ಎಸ್‌ ಅನುಭವ ಮಂಟಪವನ್ನು ಜಿಲ್ಲಾಧಿಕಾರಿ ಶ್ರೀರೂಪ ಹಾಗೂ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಪರಿಶೀಲನೆ ನಡೆಸಿದ್ದಾರೆ.

ಜನ ಸೇರಿಸಲು ಸೂಚನೆ:


ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಸ್ಥಳೀಯ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ತಯಾರಿ ನಡೆಸಿದ್ದು, ಹೆಚ್ಚು ಜನ ಸೇರಿಸಲು ಶ್ರಮ ಹಾಕಿದ್ದಾರೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ೪೦ ಗ್ರಾಪಂಗಳಿಂದಲೂ ಜನರು, ಫಲಾನುಭವಿಗಳು ಹಾಗೂ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರನ್ನು ಕರೆತರಲು ಶಾಸಕರೇ ವಾಹನಗಳ ವ್ಯವಸ್ಥೆ ಮಾಡಿದ್ದಾರೆ.---

೨೦ಜಿಪಿಟಿ೧

ಗುಂಡ್ಲುಪೇಟೆ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಸಿಎಂ ಆಗಮನದ ಹಿನ್ನೆಲೆ ಬೃಹತ್‌ ವೇದಿಕೆ ನಿರ್ಮಿಸಿರುವುದು.

---

ಸಿಎಂ ಸಭೆಗೆ ಸಾಥ್ ನೀಡಲಿರುವ ಸಚಿವರ ದಂಡು

ಗುಂಡ್ಲುಪೇಟೆ: ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಏ.೨೧ ರಂದು ಬೆಳಗ್ಗೆ ೧೧ ಗಂಟೆಗೆ ಸಮಾರಂಭ ಜರುಗಲಿದ್ದು, ಸಿಎಂ ಸಿದ್ದರಾಮಯ್ಯ ವಿವಿಧ ಕಾಮಗಾರಿಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ದಿನೇಶ್‌ ಗುಂಡೂರಾವ್‌, ಸತೀಶ್‌ ಜಾರಕಿಹೊಳಿ, ಶಿವಾನಂದ ಎಸ್‌. ಪಾಟೀಲ್ ಘನ ಉಪಸ್ಥಿತಿ ವಹಿಸಲಿದ್ದಾರೆ ಎಂದು ಶಾಸಕ ಗಣೇಶ್ ಪ್ರಸಾದ್ ತಿಳಿಸಿದ್ದಾರೆ.

ಶಾಸಕನಾದ ನಾನುನ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಸುನೀಲ್‌ ಬೋಸ್‌, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಎಂ.ಎಸ್.ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಮಧು ಜಿ. ಮಾದೇಗೌಡ, ಸಿ.ಎನ್.ಮಂಜೇಗೌಡ, ಕೆ.ವಿವೇಕಾನಂದ, ಕಾಡ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು ಹಾಗೂ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದಿದ್ದಾರೆ.

₹೪೭೫ ಕೋಟಿ ವೆಚ್ಚದಲ್ಲಿ ೧೧೦ ಕೆರೆ,ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಶಂಕುಸ್ಥಾಪನೆ, ಬೊಮ್ಮನಹಳ್ಳಿ ಡಾ.ಬಿ.ಆರ್.ಅಂಬೇಡ್ಕರ್‌ ವಸತಿ ಶಾಲೆ, ಬೇಗೂರು ಬಳಿ ಹತ್ತಿ ಮಾರುಕಟ್ಟೆ ಉದ್ಘಾಟನೆ, ತೆರಕಣಾಂಬಿ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆ, ಗುಂಡ್ಲುಪೇಟೆ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ಶಾಲೆ ಸೇರಿದಂತೆ ₹೫೩೫ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗಳು ನಡೆಯಲಿವೆ ಎಂದಿದ್ದಾರೆ.