ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಿಎಂಗೆ ಒತ್ತಾಯ

| Published : Jul 10 2025, 01:46 AM IST

ಸಾರಾಂಶ

ಕಾರ್ಮಿಕ ವಿರೋಧಿ 4 ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಲು ಹಾಗೂ ರೈತ ಕಾರ್ಮಿಕರ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಿಐಟಿಯು ಗದಗ ಜಿಲ್ಲಾ ಸಮಿತಿಯ ವತಿಯಿಂದ ಅಪರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಗದಗ: ಕಾರ್ಮಿಕ ವಿರೋಧಿ 4 ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಲು ಹಾಗೂ ರೈತ ಕಾರ್ಮಿಕರ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಿಐಟಿಯು ಗದಗ ಜಿಲ್ಲಾ ಸಮಿತಿಯ ವತಿಯಿಂದ ಅಪರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಸಿಐಟಿಯು ಜಿಲ್ಲಾ ಸಂಚಾಲಕ ಮಹೇಶ ಹಿರೇಮಠ ಮಾತನಾಡಿ, ದೇಶದ ಕಾರ್ಮಿಕ ವರ್ಗದ ತೀವ್ರ ವಿರೋಧವನ್ನು ಲೆಕ್ಕಿಸದೇ 2020ರ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಹಾಗೂ 2019ರ ಸಂಸತ್ತಿನ ಅಧಿವೇಶನದಲ್ಲಿ ದೇಶದಲ್ಲಿ ಜಾರಿಯಲ್ಲಿದ್ದ 29 ಕಾರ್ಮಿಕ ಕಾನೂನುಗಳ ಬದಲಾಗಿ ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತೆ ಸಂಹಿತೆ, ಔದ್ಯೋಗಿಕ ಸುರಕ್ಷತೆ ಆರೋಗ್ಯ ಮತ್ತು ಕೆಲಸದ ಪರಸ್ಥಿಗಳ ಸಂಹಿತೆ ಹಾಗೂ ವೇತನ ಸಂಹಿತೆಗಳನ್ನಾಗಿ ಅಂಗೀಕರಿಸಲಾಗಿದೆ. ದೇಶದ ಕಾರ್ಮಿಕ ವರ್ಗದ ತೀವ್ರ ಹೋರಾಟಗಳಿಂದಾಗಿ ಈ ಸಂಹಿತೆಗಳು ಇನ್ನೂ ಜಾರಿಮಾಡಲು ಸಾಧ್ಯವಾಗಿಲ್ಲವಾದರೂ ಮತ್ತೇ ಸರಕಾರ ಈ ಸಂಹಿತೆಗಳನ್ನು ಜಾರಿಮಾಡಲು ಮುಂದಾಗುತ್ತಿದೆ. ಇನ್ನೊಂದಡೆಗೆ ರಾಜ್ಯ ಸರಕಾರಗಳ ಮೇಲೆ ಒತ್ತಡ ಹೇರಿ ಹಿಂಬಾಗಿಲಿನಿಂದ ಕಾರ್ಮಿಕ ಸಂಹಿತೆಗಳ ಅಂಶಗಳನ್ನು ಜಾರಿಮಾಡಿಸಲು ಕೇಂದ್ರ ಸರಕಾರ ಮುಂದಾಗುತ್ತಿದೆ. ಈ 4 ಕಾರ್ಮಿಕ ಸಂಹಿತೆಗಳು ದೇಶದ ಕಾರ್ಮಿಕರ ರಕ್ಷಣಾತ್ಮಕ ಅಂಶಗಳು, ಜೀವಿಸುವ ಮಣಿಯದೇ ಕಾರ್ಮಿಕ ಸಂಘಟನೆಗಳು ನೀಡಿರುವ ತಕರಾರುಗಳು, ತಿದ್ದುಪಡಿಗಳು, ಸಲಹೆಗಳನ್ನು ಪರಿಗಣಿಸಿ ಕನಿಷ್ಠ ವೇತನ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದರು.ಈ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಲು ಹಾಗೂ ಇತರೆ ರೈತ ಕಾರ್ಮಿಕರ ಬೇಡಿಕೆಗಳಿಗಾಗಿ ದೇಶದ ಎಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹಾಗೂ ದೇಶದ ಎಲ್ಲಾ ರೈತ ಸಂಘಟನೆಗಳನ್ನೊಳಗೊಂಡ ಸಂಯುಕ್ತ ಕಿಸಾನ ಮೋರ್ಚಾ ಇಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ ಈ ಹಿನ್ನಲೆಯಲ್ಲಿ ಮುಷ್ಕರ ನಡೆಸಿ ಪ್ರತಿಭಟನೆ ನಡೆಸಿ ದುಡಿಯುವ ಜನರ ಹಕ್ಕೊತ್ತಾಯಗಳ ಮನವಿಗೆ ಕೇಂದ್ರ, ರಾಜ್ಯ ಸರಕಾರಗಳು ಬೇಡಿಕೆಗಳ ಈಡೇರಿಕೆಗಾಗಿ ಸೂಕ್ತ ಕ್ರಮವಹಿಸಬೇಕೆಂದು ಒತ್ತಾಯಿಸಿದರು.

ಕೇಂದ್ರ ಸರಕಾರ ಜಾರಿ ಮಾಡಲು ಮುಂದಾಗಿರುವ 4 ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು. ರಾಜ್ಯದಲ್ಲಿ ದುಡಿತದ ಅವಧಿಯನ್ನು ದಿನಕ್ಕೆ 10-12 ಗಂಟೆಗೆ ಹೆಚ್ಚಿಸುವ ಅವೈಜ್ಞಾನಿಕ ಪ್ರಸ್ತಾವಗಳನ್ನು ಕೈಬಿಡಬೇಕು. ಜೀವನ ಯೋಗ್ಯ ಕನಿಷ್ಠ ವೇತನ ರು 36000 ನಿಗದಿಮಾಡಬೇಕು. ಸಾರ್ವತ್ರಿಕ ಪಿಂಚಣಿ ಜಾರಿಗೊಳಿಸಿ ಕನಿಷ್ಠ ರು. 8000 ಪಿಂಚಣಿ ನೀಡಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗಿಕರಣ ಮತ್ತು ನಗದೀಕರಣ ನಿಲ್ಲಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ದಿನದ ಕೂಲಿ ರು. 600 ಕ್ಕೆ ದುಡಿತದ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು. ಅಂಗನವಾಡಿ, ಬಿಸಿಯೂಟ, ಆಶಾ ಮುಂತಾದ ಸೀಮ್ ಕಾರ್ಮಿಕರನ್ನು ಕನಿಷ್ಠ ವೇತನ ವ್ಯಾಪ್ತಿಗೆ ಒಳಪಡಿಸಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಜಾರಿಗೊಳಿಸಬೇಕು. ವಸತಿ ರಹಿತ ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ರಾಜ್ಯ ಸರಕಾರಗಳ ವಸತಿ ಯೋಜನೆಗಳನ್ನು ಬಳಸಿಕೊಂಡು ಸೂಕ್ತ ಗುಂಪು ವಸತಿ ಯೋಜನೆಗಳನ್ನು ಜಾರಿಮಾಡಬೇಕು. ಗುತ್ತಿಗೆ ಮುಂತಾದ ಕಾಯಂಯೇತರರ ಕಾಯಂಗೆ ಶಾಸನ ರೂಪಿಸಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಗೊಳಿಸಬೇಕು ಮತ್ತು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಮಾರುತಿ ಚಿಟಗಿ, ಮೈಬು ಹವಾಲ್ದಾರ, ಹನಮಂತ ಮಾದರ, ಮುತ್ತಪ್ಪ ಚಲವಾದಿ, ಶಾರದಾ ರೋಣದ, ಶಾರದಾ ಹಳೆಮನಿ, ಗಿರೀಜಾ ಮಾಚಕನೂರ, ಅಕ್ಕಮ್ಮ ನೆರೆಗಲ್ಲ, ಜ್ಯೋತಿ ಹಿರೇಮಠ, ಸುಶಿಲಾ ಚಲವಾದಿ, ಕಮಲಾಕ್ಷಿ ಬಿಳಗಿ, ಗಂಗಮ್ನ ದೇವರಡ್ಡಿ, ಮಂಗಲಾ ಪಟ್ಟಣಶಟ್ಟಿ, ಗೀತಾ ಪಾಟೀಲ, ನೀಲಮ್ಮ ಹಿರೇಮಠ, ವಾಲಿ, ಯಶೋಧಾ ಬೇಟಗೆರಿ, ನಾಗರತ್ನ ಬಡಗನ್ನವರ. ವಿಜಯಲಕ್ಷ್ಮೀ, ಪ್ರೇಮಾ, ಹಾಲಪ್ಪ ತಾಂಬ್ರಗುಂಡಿ ಸೇರಿದಂತೆ ಇತರರು ಇದ್ದರು.