ಮಂಗಳೂರು: ನವೋದ್ಯಮದಲ್ಲಿ ಕರಾವಳಿಗರು ಮುಂಚೂಣಿಯಲ್ಲಿದ್ದು, ಪ್ರಸ್ತುತ ಮೂವರು ನವೋದ್ಯಮಿಗಳಿಗೆ ರಾಷ್ಟ್ರ ಮಟ್ಟದಲ್ಲಿ ಲಭಿಸಿರುವ ಗೌರವ ಯುವ ಜನತೆಗೆ ಪ್ರೇರಣೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹೇಳಿದರು.ರಾಷ್ಟ್ರಪತಿ ಭವನದಲ್ಲಿ ಜು.31ರಂದು ನಡೆದ ‘ಗ್ರಾಸ್‌ ರೂಟ್ಸ್‌ ಇನ್ನೋವೇಟರ್‌ ರೆಕೊಗ್ನಿಷನ್‌ -2026’ ನಲ್ಲಿ ರಾಷ್ಟ್ರಪತಿ ಅವರಿಂದ ಪುರಸ್ಕೃತರಾದ ಎಐಸಿ ನಿಟ್ಟೆ ಇನ್ಕ್ಯುಬೇಷನ್‌ ಸೆಂಟರ್‌ನ ಮೂವರು ಸಾಧಕರನ್ನು ಶನಿವಾರ ನಗರದಲ್ಲಿ ಅಭಿನಂದಿಸಿ ಅವರು ಮಾತನಾಡಿದರು.

ಕರಾವಳಿಯ ಜನರಿಗೆ ಅನ್ವೇಷಣೆ ಮಾಡುವ ಸಾಮರ್ಥ್ಯವಿದೆ. ಅವರಿಗೆ ಕುಟುಂಬ ಹಾಗೂ ಸಮಾಜ ಬೆಂಬಲ ನೀಡಬೇಕಿದೆ. ಇದಕ್ಕಾಗಿಯೇ ‘ಬ್ಯಾಕ್‌ ಟು ಊರು’ ಪರಿಕಲ್ಪನೆಯಲ್ಲಿ ವಿದೇಶ ಹಾಗೂ ಹೊರ ರಾಜ್ಯಗಳಲ್ಲಿರುವ ಇಲ್ಲಿನ ಉದ್ಯಮಿಗಳನ್ನು ಮತ್ತೆ ಊರಿಗೆ ಕರೆಸಿ, ಇಲ್ಲಿಯೂ ಉದ್ಯಮ ಸ್ಥಾಪಿಸುವ ನಿಟ್ಟಿನಲ್ಲಿ ಅವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ರಾಷ್ಟ್ರಪತಿಗಳಿಂದ ಗುರುತಿಸಲ್ಪಟ್ಟ ದೇಶದ 26 ಸಾಧಕರಲ್ಲಿ ಕರಾವಳಿಯ ಮೂವರು ಸೇರಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಪ್ರಯತ್ನದಲ್ಲಿ ಪ್ರಾಮಾಣಿಕತೆ ಇದ್ದಾಗ ಸಾಧನೆ ಮಾಡಲು ಸಾಧ್ಯ. ನವೋದ್ಯಮಿಗಳ ಬೆಳವಣಿಗೆಗೆ ಪೂರ್ಣ ಸಹಕಾರ ನೀಡಲು ಬದ್ಧ ಎಂದರು.ನಿಟ್ಟೆ ಡೀಮ್ಡ್‌ ವಿವಿ ಕುಲಾಧಿಪತಿ ವಿಶಾಲ್‌ ಹೆಗ್ಡೆ ಅಧ್ಯಕ್ಷತೆ ವಹಿಸಿ, ಮೂವರು ಸಾಧಕರ ಸಾಧನೆ ನಿಟ್ಟೆಸಂಸ್ಥೆಗೆ ಮಾತ್ರವಲ್ಲ ಕರಾವಳಿಗೆ ಹೆಮ್ಮೆ. ಸಾಧನೆಯ ಹಾದಿಯಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿನಿಂತು ಯಶಸ್ಸಿನ ಕಡೆಗೆ ಮುಂದುವರಿಯಿರಿ ಎಂದು ಹಾರೈಸಿದರು.ಕರ್ನಾಟಕ ಡಿಜಿಟಲ್‌ ಇಕಾನಮಿ ಮಿಷನ್‌ ಸಿಇಒ ಸಂಜೀವ್‌ ಕುಮಾರ್‌ ಗುಪ್ತಾ, ನೀತಿ ಆಯೋಗದ ನಾವಿನ್ಯತಾ ಮುಖ್ಯಸ್ಥ ನೀಲ್‌ ಕುಮಾರ್‌, ನಿಟ್ಟೆ ಡೀಮ್ಡ್‌ ವಿವಿ ಕುಲಪತಿ ಪ್ರೊ.ಎಂ.ಎಸ್‌.ಮೂಡಿತ್ತಾಯ, ನಿರ್ದೇಶಕ (ಹಣಕಾಸು) ರಾಜೇಂದ್ರ, ಉಪಾಧ್ಯಕ್ಷ ಪ್ರೊ.ಬಿ.ಸತೀಶ್‌ ಕುಮಾರ್‌ ಭಂಡಾರಿ ಮತ್ತಿತರರಿದ್ದರು. ಎಐಸಿ ನಿಟ್ಟೆ ಇನ್ಕ್ಯುಬೇಷನ್‌ ಸೆಂಟರ್‌ ಇಸಿಒ ಪುನೀತ್‌ ರೈ ಸ್ವಾಗತಿಸಿದರು. ಮೆನೇಜರ್‌ ದೀಕ್ಷಾ ರೈ ವಂದಿಸಿದರು. ಅನುರಾಗ್‌ ನಿರೂಪಿಸಿದರು.ಪುರಸ್ಕೃತ ಸಾಧಕರು: ಎಐಸಿ ನಿಟ್ಟೆಇನ್ಕುಬೇಷನ್‌ ಸೆಂಟರ್‌ನ ಮೂರು ನವೋದ್ಯಮಗಳ ಸಾಧಕರು ನೀತಿ ಆಯೋಗದ ಅಡಿಯಲ್ಲಿ ದೇಶಾದ್ಯಂತ ಆಯ್ಕೆಯಾದ 26 ಮಂದಿ ಸಾಧಕರಲ್ಲಿ ಸ್ಥಾನ ಪಡೆದಿದ್ದಾರೆ. ಅಕ್ಷಯ್‌ ಮಶೆಲ್ಕರ್‌(ಶಿಕ್ಷಣ ಪರಿಕರಗಳು) ಅನುಷಾ ಪ್ರಜ್ವಲ್‌ (ಸಾಂಪ್ರದಾಯಿಕ ತಾಯಂದಿರ ಮತ್ತು ಶಿಶುಗಳ ಪೌಷ್ಟಿಕ ಆಹಾರ), ರತ್ನಾಕರ್‌ ನಾಯ್ಕ್‌(ಸ್ಮಾರ್ಟ್‌ ನೀರಿನ ಮಟ್ಟ ನಿಯಂತ್ರಣ ಹಾಗೂ ನಿರ್ವಹಣಾ ವ್ಯವಸ್ಥೆ) ಅವರನ್ನು ಗೌರವಿಸಲಾಯಿತು.

ರಾಷ್ಟ್ರಪತಿ ಪುರಸ್ಕೃತ ಸಾಧಕರಾದ ಅಕ್ಷಯ್‌ ಮಶೆಲ್ಕರ್‌, ಅನುಷಾ ಪ್ರಜ್ವಲ್‌ ಹಾಗೂ ರತ್ನಾಕರ ನಾಯ್ಕ ಅವರನ್ನು ಸನ್ಮಾನಿಸಲಾಯಿತು.