ಎಲ್ಲರ ಪರಿಶ್ರಮದಿಂದ ಕಾಲೇಜು ಅಭಿವೃದ್ಧಿ ಸಾಧ್ಯ

| Published : Jun 25 2025, 11:47 PM IST

ಸಾರಾಂಶ

ರಾಜ್ಯದಲ್ಲಿರುವ ಸರ್ಕಾರಿ ಪದವಿ ಕಾಲೇಜುಗಳ ಗುಣಮಟ್ಟವನ್ನು ಸುಧಾರಿಸುವಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸ ಕೋಶದ ಪಾತ್ರ ದೊಡ್ಡದು ಎಂದು ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ರಾಜ್ಯ ಗುಣಮಟ್ಟ ಭರವಸ ಕೋಶದ ನೋಡಲ್ ಅಧಿಕಾರಿ ಡಾ. ಕೆ. ವಿಕ್ರಂ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ರಾಜ್ಯದಲ್ಲಿರುವ ಸರ್ಕಾರಿ ಪದವಿ ಕಾಲೇಜುಗಳ ಗುಣಮಟ್ಟವನ್ನು ಸುಧಾರಿಸುವಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸ ಕೋಶದ ಪಾತ್ರ ದೊಡ್ಡದು ಎಂದು ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ರಾಜ್ಯ ಗುಣಮಟ್ಟ ಭರವಸ ಕೋಶದ ನೋಡಲ್ ಅಧಿಕಾರಿ ಡಾ. ಕೆ. ವಿಕ್ರಂ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸ್‌ಸಿ ವತಿಯಿಂದ ಆಂತರಿಕ ಗುಣಮಟ್ಟ ದಕ್ಷತೆ ಮತ್ತು ಮೌಲ್ಯಾಂಕನ ಎಂಬ ವಿಷಯ ಕುರಿತು ನಡೆದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಪದವಿ ಕಾಲೇಜುಗಳ ಗುಣಮಟ್ಟ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುಧಾರಿಸುತ್ತಿರುವುದು ಸಂತೋಷದಾಯಕ ವಿಷಯ. ಕಾಲೇಜುಗಳ ಗುಣಮಟ್ಟ ಸುಧಾರಿಸಬೇಕಾದರೆ ನಾಲ್ಕು ಅಂಗಗಳು ಮುಖ್ಯವಾಗಿದ್ದು ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಉದ್ಯಮಿಗಳು ಮತ್ತು ಹಳೆ ವಿದ್ಯಾರ್ಥಿಗಳ ಪಾತ್ರ ಬಹಳಷ್ಟು ಮುಖ್ಯವಾಗಿದ್ದು ಇವರೆಲ್ಲರ ಪರಿಶ್ರಮದಿಂದ ಕಾಲೇಜಿನ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು. ಉನ್ನತ ಶಿಕ್ಷಣ ಇಲಾಖೆಯ ಎಸ್‌ಕ್ಯೂಎಸಿ ವಿಶೇಷ ಕರ್ತವ್ಯಾಧಿಕಾರಿ ಜೆ. ಜಗದೀಶ್ ಮಾತನಾಡಿ, ವ್ಯವಸ್ಥೆಯಲ್ಲಿ ನಾವು ಒಂದಾಗಬೇಕೆ ವಿನಹ ವ್ಯವಸ್ಥೆಯೇ ನಾವಾಗಬಾರದು. ಯಾವುದೇ ಸಮಸ್ಯೆಗಳಿದ್ದಲ್ಲಿ ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ. ಆದ್ದರಿಂದ ಯಾವುದೇ ಸಮಸ್ಯೆಗಳಿಂದ ವಿಮುಖರಾಗದೆ ಪರಿಹಾರಗಳನ್ನು ಸಂಯೋಚಿತವಾಗಿ ಕಂಡುಕೊಂಡರೆ ನಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ರಾಘವೇಂದ್ರಾಚಾರಿ ಮಾತನಾಡಿ ಕಾಲೇಜಿನ ಉಪನ್ಯಾಸಕರು ಇಂತಹ ಕಾರ್ಯಗಾರಗಳಲ್ಲಿ ಹೆಚ್ಚಿನ ವಿಚಾರಧಾರೆಗಳನ್ನು ತಿಳಿದುಕೊಂಡರೆ ತಮ್ಮ ಬೌದ್ಧಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ. ಹೆಚ್.ಸಿ ಶಶಿಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ. ಎಂ. ಸುಭದ್ರಮ್ಮ, ಡಾ. ವಿರೂಪಾಕ್ಷ, ಡಾ. ನರಸಿಂಹಮೂರ್ತಿ, ಡಾ. ಶ್ರೀನಿವಾಸ್, ಡಾ. ಜಗನ್ನಾಥ ಸೇರಿದಂತೆ ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ, ದೈಹಿಕ ಶಿಕ್ಷಣ ನಿರ್ದೇಶಕರು, ಗ್ರಂಥಪಾಲಕರು, ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.