ಸಾರಾಂಶ
- ಚನ್ನಗಿರಿಯಲ್ಲಿ ಕನ್ನಡನಾಡು ಹಿತರಕ್ಷಣಾ ಸಮಿತಿ ತಾಲೂಕು ಶಾಖೆ ಕಚೇರಿ ಉದ್ಘಾಟನೆ - - - ಕನ್ನಡಪ್ರಭ ವಾರ್ತೆ, ಚನ್ನಗಿರಿ
ಯಾವುದೇ ಸಂಘಟನೆಗಳಾಗಿರಲಿ, ಸೇವೆಯಯಲ್ಲಿ ಬದ್ಧತೆ ಇದ್ದಾಗ ಸಾಮಾಜಿಕವಾಗಿ ಹೋರಾಟ ಮಾಡಲು ಸಂಘ ಸಾಮರ್ಥ್ಯ ಪಡೆದುಕೊಳ್ಳುವುದು ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮೀಜಿ ನುಡಿದರು.ಭಾನುವಾರ ಪಟ್ಟಣದ ಬುಳ್ಳಿ ವಾಣಿಜ್ಯ ಸಂಕಿರ್ಣದಲ್ಲಿ ಕನ್ನಡ ನಾಡು ಹಿತರಕ್ಷಣಾ ಸಮಿತಿ ತಾಲೂಕು ಶಾಖೆಯ ಕಚೇರಿಯ ಉದ್ಘಾಟನೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ರಾಜ್ಯದಲ್ಲಿನ ಮಾತೃಭಾಷೆ ಆಗಿರುವ ಕನ್ನಡಭಾಷೆಗೆ ರಾಷ್ಟ್ರ ವ್ಯಾಪ್ತಿಯಲ್ಲಿ ಮಾನ್ಯತೆಗಳಿವೆ. ಇಂತಹ ಸಮೃದ್ಧ ಕನ್ನಡಭಾಷೆ ಮತ್ತು ಸಾಹಿತ್ಯದ ಕಂಪನ್ನು ಪಸರಿಸುವಲ್ಲಿ ಸಂಘಟನೆ ನಿರಂತರ ಶ್ರಮಿಸಬೇಕು ಎಂದರು.
ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಪುಷ್ಕರಿಣಿ, ಏಷ್ಯಾಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆಯಾದ ಸೂಳೆಕೆರೆ, ಹೊದಿಗೆರೆ ಗ್ರಾಮದಲ್ಲಿ ಮರಾಠ ದೊರೆ ಷಹಜಿರಾಜೇ ಬೌಂಸ್ಲೆ ಸಮಾಧಿ, ಚನ್ನಗಿರಿ ಪಟ್ಟಣದ ಕೆಳದಿರಾಣಿ ಚನ್ನಮ್ಮಾಜಿ ನಿರ್ಮಿಸಿರುವ ಕೋಟೆ ಈ ಐತಿಹಾಸಿಕ ಸ್ಮಾರಕಗಳನ್ನು ಉಳಿಸಿಕೊಂಡು, ಅವುಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಕನ್ನಡಪರವಾದ ಸಂಘಟನೆಯನ್ನು ಆರಂಭಿಸಿರುವುದು ಉತ್ತಮವಾದ ಕೆಲಸವಾಗಿದೆ. ಈ ಸಂಘಟನೆಯನ್ನು ಪ್ರಬಲವಾಗಿ ನಿರ್ವಹಿಸಿಕೊಂಡು ಬಡವರ ಪರ, ಜನಪರವಾದ ಹೋರಾಟಗಳನ್ನು ಮಾಡಬೇಕು. ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಮತ್ತು ಕನ್ನಡ ನಾಡು, ನುಡಿ- ಭಾಷೆಗೆ ಧಕ್ಕೆಯಾದಲ್ಲಿ ಕನ್ನಡಪರ ಧ್ವನಿ ಎತ್ತುವ ಕೆಲಸ ಮಾಡಬೇಕು. ಸಂಘಟನೆ ಬಲವರ್ಧನೆಗೆ ನನ್ನ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆಯಿತ್ತರು.
ಕನ್ನಡನಾಡು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ ಮಾತನಾಡಿ, ಈ ಸಂಘಟನೆ ತಾಲೂಕು ಕೇಂದ್ರದಲ್ಲಿದ್ದುಕೊಂಡು ದಾವಣಗೆರೆ ಜಿಲ್ಲಾದ್ಯಂತ ಕನ್ನಡಪರ ಕೆಲಸಗಳನ್ನು ಮಾಡಲು ತೀರ್ಮಾನಿಸಿದೆ. ತಾಲೂಕಿನ ಪ್ರತಿ ಗ್ರಾಮಾಂತರ ಪ್ರದೇಶಗಳಲ್ಲಿಯೂ ಗ್ರಾಮ ಶಾಖೆಗಳನ್ನು ಆರಂಭಿಸಿ, ಕನ್ನಡ ನಾಡು-ನುಡಿ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಕನ್ನಡಸೇವೆ ಮಾಡಲು ತಾಲೂಕುಮಟ್ಟದ ಸಮಿತಿ ರಚಿಸಲಾಗಿದೆ ಎಂದರು.ಸಮಾರಂಭದ ದಿವ್ಯ ಸಾನಿಧ್ಯವನ್ನು ಕೆಂಗಾಪುರದ ವಾಲ್ಮೀಕಿ ಪೀಠದ ಶ್ರೀ ರಾಮಲಿಂಗೇಶ್ವರ ಸ್ವಾಮೀಜಿ, ಪಟ್ಟಣದ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ತಾಪಂ ಮಾಜಿ ಅಧ್ಯಕ್ಷ ಸಿ.ನಾಗರಾಜ್, ಪಿ.ಲೋಹಿತ್, ಪುರಸಭಾ ಮಾಜಿ ಸದಸ್ಯ ಪಿ.ಬಿ. ನಾಯಕ, ಕನ್ನಡನಾಡು ಹಿತರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ಎಂ.ಅಣ್ಣೋಜಿರಾವ್, ಉಪಾಧ್ಯಕ್ಷ ಅರಶಿನಘಟ್ಟ ಸುರೇಶ್, ಸುಧಾ, ಲಕ್ಷ್ಮೀ, ಶಶಿಕಲಾ, ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.- - - -9ಕೆಸಿಎನ್ಜಿ1:
ಚನ್ನಗಿರಿ ಪಟ್ಟಣದ ಬುಳ್ಳಿ ವಾಣಿಜ್ಯ ಸಂಕಿರ್ಣದಲ್ಲಿ ಕನ್ನಡನಾಡು ಹಿತರಕ್ಷಣಾ ಸಮಿತಿ ತಾಲೂಕು ಶಾಖಾ ಕಚೇರಿ ಉದ್ಘಾಟನೆಯನ್ನು ಪಾಂಡೋಮಟ್ಟಿ ಶ್ರೀ ನೆರವೇರಿಸಿರು. ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಸಮಿತಿಯ ರಾಜ್ಯಾಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ಮೊದಲಾದವರು ಇದ್ದರು.