ಬೇಲೂರಿನ ಅಭಿವೃದ್ಧಿಗೆ ಅನುದಾನ ನೀಡಲು ಬದ್ಧ: ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ

| Published : Jun 02 2025, 12:22 AM IST / Updated: Jun 02 2025, 12:23 AM IST

ಬೇಲೂರಿನ ಅಭಿವೃದ್ಧಿಗೆ ಅನುದಾನ ನೀಡಲು ಬದ್ಧ: ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕರು ಹಾಗೂ ಸಾರ್ವಜನಿಕರ ಅಭಿಪ್ರಾಯದಂತೆ ಬಸ್ ನಿಲ್ದಾಣಕ್ಕೆ ನಮ್ಮ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗವನ್ನು ನೀಡಲು ಕಾನೂನಿನಲ್ಲಿ ಅವಕಾಶ ಇದ್ದರೆ ಅದನ್ನು ಗಮನಿಸಿ ನಮ್ಮ ಅಧಿಕಾರಿಗಳ ಜೊತೆ ಚರ್ಚಿಸಿ, ಜಾಗ ಸಹ ನೀಡಲು ಬದ್ಧರಾಗಿದ್ದೇವೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಹೊಳೆಬೀದಿ ಸೇತುವೆ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲು ಕ್ರಿಯಾಯೋಜನೆ ಸಿದ್ಧವಾಗಿದ್ದು, ಅತಿ ಶೀಘ್ರದಲ್ಲಿ ಚಾಲನೆಗೊಳ್ಳಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಜಿಲ್ಲೆಯಲ್ಲಿ ಎರಡು ದಿನಗಳ ಅಧಿಕೃತ ಭೇಟಿ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ವಿವಿರ ಸಂಗ್ರಹಿಸಿದ ಸಚಿವರು, ಹೊಳೆಬೀದಿ ಬಸ್ ನಿಲ್ದಾಣ ಮುಖ್ಯರಸ್ತೆ ಹಾಗೂ ತಾಲೂಕು ಕಚೇರಿಯನ್ನು ವೀಕ್ಷಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ವಿಶ್ವ ಪಾರಂಪಾರಿಕ ಪಟ್ಟಿಗೆ ಸೇರ್ಪಡೆಯಾದ ನಂತರ ಇಲ್ಲಿ ಹೆಚ್ಚಿನ ಅನುದಾನ ನೀಡಲು ಸರ್ಕಾರ ಬದ್ಧರಾಗಿದ್ದು, ಈಗಾಗಲೇ ಸ್ಥಳೀಯ ಶಾಸಕ ಎಚ್. ಕೆ. ಸುರೇಶ್ ಅವರ ಒತ್ತಾಸೆಯ ಮೇರೆಗೆ ಮೊದಲ ಹಂತದಲ್ಲಿ ಹೊಳೆಬೀದಿ ಅಭಿವೃದ್ಧಿಪಡಿಸಲು ಸೇತುವೆ ನಿರ್ಮಾಣಕ್ಕೆ ನಮ್ಮ ತಾಂತ್ರಿಕ ಅಧಿಕಾರಿಗಳು ಪರಿಶೀಲಿಸಿ, ಅದಕ್ಕೆ ಸಂಪೂರ್ಣ ಅನುದಾನ ನೀಡಲಾಗುತ್ತಿದೆ. ಎರಡು ವರ್ಷಗಳ ಅವಧಿಯಲ್ಲಿ ಸೇತುವೆ ನಿರ್ಮಾಣ ಕಾರ್ಯವನ್ನು ಸಂಪೂರ್ಣಗೊಳಿಸಿದ ನಂತರ ತಾಲೂಕಿನ ಎಲ್ಲಾ ಗ್ರಾಮಗಳ ರಸ್ತೆಗೆ ಅನುದಾನ ನೀಡಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

ಹೊಳೆಬೀದಿ ರಸ್ತೆ ಅಭಿವೃದ್ಧಿ ಆದ ನಂತರ ಹಲವಾರು ವರ್ಷಗಳಿಂದ ಅಭಿವೃದ್ಧಿಯಾಗದ ಬಸ್ ನಿಲ್ದಾಣ ನಿರ್ಮಾಣ ಹಾಗೂ ಮುಖ್ಯರಸ್ತೆ ಅಗಲೀಕರಣಕ್ಕೆ ಕಾಯಕಲ್ಪ ಕೊಡಲಾಗುತ್ತದೆ. ಶಾಸಕರು ಹಾಗೂ ಸಾರ್ವಜನಿಕರ ಅಭಿಪ್ರಾಯದಂತೆ ಬಸ್ ನಿಲ್ದಾಣಕ್ಕೆ ನಮ್ಮ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗವನ್ನು ನೀಡಲು ಕಾನೂನಿನಲ್ಲಿ ಅವಕಾಶ ಇದ್ದರೆ ಅದನ್ನು ಗಮನಿಸಿ ನಮ್ಮ ಅಧಿಕಾರಿಗಳ ಜೊತೆ ಚರ್ಚಿಸಿ, ಜಾಗ ಸಹ ನೀಡಲು ಬದ್ಧರಾಗಿದ್ದೇವೆ ಎಮದು ಹೇಳಿದರು.ಅಲ್ಲದೆ ಹೊಳೆಬೀದಿ ವಿಶ್ವ ಪ್ರವಾಸಿ ತಾಣವಾಗಿರುವುದರಿಂದ ಹೆಚ್ಚುವರಿ ಬಸ್ ನಿಲ್ದಾಣಕ್ಕೆ ಎಲ್ಲಿ ಜಾಗವಿದೆ ಎಂದು ಮಾನ್ಯ ಸಾರಿಗೆ ಸಚಿವರ ಜೊತೆ ಚರ್ಚಿಸಿ, ಬಸ್ ನಿಲ್ದಾಣ ಹಾಗೂ ಹೆಚ್ಚುವರಿ ಬಸ್ ಒದಗಿಸಲು ಕ್ರಮ ಕೈಗೊಳ್ಳಲಾಗುವುದು‌ ಎಂದು ಭರವಸೆ ನೀಡಿದರು.

ಇನ್ನೊಂದು ಬಾರಿ ತಾಲೂಕಿನ ಗ್ರಾಮಗಳಲ್ಲಿರುವ ಸಮಸ್ಯೆ ಅರಿಯಲು ಹಾಗೂ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಕೆಲಸಗಳನ್ನು ಪರಿಶೀಲಿಸಲು ಇಲ್ಲಿಗೆ ಆಗಮಿಸುತ್ತೇನೆ. ಇನ್ನು ಕಂದಾಯ ಇಲಾಖೆಯಲ್ಲಿ ಜಾಗ ಇದ್ದು ಸುಮಾರು ಹಳೆಯ ಕಟ್ಟಡವಾಗಿರುವುದರಿಂದ ಇದನ್ನು ದುರಸ್ತಿಗೊಳಿಸಿ ಉತ್ತಮ ಕಟ್ಟಡ ನಿರ್ಮಾಣ ಮಾಡಲು ನಮ್ಮ ಇಲಾಖೆಯಿಂದ ಅನುದಾನ ನೀಡಿ ಅಭಿವೃದ್ಧಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಸಕ ಎಚ್. ಕೆ. ಸುರೇಶ್ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಪ್ರವಾಸಿ ತಾಣವಾಗಿರುವುದರಿಂದ ಇಲ್ಲಿಗೆ ಹೆಚ್ಚಿನ ಅನುದಾನ ನೀಡಬೇಕು. ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಬಸ್ ಬರುವುದರಿಂದ ಹೆಚ್ಚುವರಿ ಬಸ್ ನೀಡಬೇಕು , ಬಸ್ ನಿಲ್ದಾಣ ಕಿರಿದಾಗಿರುವುದರಿಂದ ನಿಮ್ಮ ಇಲಾಖೆಗೆ ಸೇರಿರುವ ಜಾಗವನ್ನು ನೀಡಿದರೆ ಉತ್ತಮ ಎಂದು ಮನವಿ ಮಾಡಿದರು.

ಪುರಸಭೆ ಅಧ್ಯಕ್ಷ ಎ. ಆರ್. ಅಶೋಕ್ , ತಹಸೀಲ್ದಾರ್ ಎಂ ಮಮತಾ , ಮುಖಂಡರಾದ ಪರ್ವತಯ್ಯ, ರಮೇಶ್ , ಬಿ. ಎಲ್. ಧರ್ಮೇಗೌಡ, ಮಂಜುನಾಥ್ ಇತರರು ಹಾಜರಿದ್ದರು.