ಕನ್ನಡಪ್ರಭ ವಾರ್ತೆ ಮೈಸೂರು

ವಿಜಯನಗರ ನಾಲ್ಕನೇ ಹಂತದ ಹುಣಸೂರು ರಸ್ತೆಯಲ್ಲಿನ ನೋಟ್ರೆ ಡೇಮ್ ಶಾಲೆಯಲ್ಲಿ ಕಾಂಪೋಸಿಟ್ ಸ್ಕಿಲ್ ಲ್ಯಾಬ್ ಉದ್ಘಾಟಿಸಲಾಯಿತು.

ಹೊಸ ಶಿಕ್ಷಣ ನೀತಿ (ಎನ್‌ಇಪಿ)ಯು ಪ್ರಾಥಮಿಕ ಶಿಕ್ಷಣ ಹಂತದಿಂದಲೇ ತಂತ್ರಜ್ಞಾನ ಆಧಾರಿತ ಕಲಿಕೆಗೆ ಒತ್ತು ನೀಡುವಂತೆ ಸಲಹೆ ನೀಡಿರುವುದರಿಂದ ಶಾಲಾ ಆಡಳಿತ ಮಂಡಳಿ ಇದೀಗ ಕಾಂಪೋಸಿಟ್ ಸ್ಕಿಲ್ ಲ್ಯಾಬ್ ಆರಂಭಿಸಿದೆ. ಎಐ (ಕೃತಕ ಬುದ್ಧಿಮತ್ತೆ), ಡ್ರೋನ್ ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಖಗೋಳ ವಿಜ್ಞಾನ, ರೋಬಾಟಿಕ್ಸ್, ತ್ರಿಡಿ ಪ್ರಿಂಟಿಂಗ್ ಸೇರಿದಂತೆ ಹಲವು ಕೌಶಲಗಳನ್ನು ಕಲಿಯಲು ಮಕ್ಕಳಿಗೆ ನೆರವಾಗಲಿದೆ.

ಮೆಟಾಬುಕ್ ಎಕ್ಸ್‌ಆರ್ ಸಂಸ್ಥೆಯ ಸಹಯೋಗದಲ್ಲಿ ಶಾಲೆಯು ಲ್ಯಾಬ್ ನಿರ್ಮಿಸಿದೆ. ನುರಿತ ತಜ್ಞರು ಮಕ್ಕಳಿಗೆ ಬೋಧಿಸುವರು. ಯಾವೆಲ್ಲ ಕ್ಷೇತ್ರಗಳಲ್ಲಿ ಎಐ ಬಳಕೆ ಮಾಡಿಕೊಳ್ಳಬಹುದು, ಎಐನಲ್ಲಿ ಹೊಸ ಆವಿಷ್ಕಾರಗಳು, ಡ್ರೋನ್‌ ಸಿದ್ಧಪಡಿಸುವುದು, ತ್ರಿಡಿ ಪ್ರಿಂಟಿಂಗ್ ವಿನ್ಯಾಸ, ಬಾಹ್ಯಾಕಾಶದಲ್ಲಿನ ಕುತೂಹಲಗಳನ್ನು ಪ್ರಯೋಗಾಲಯದಲ್ಲಿ ಮಕ್ಕಳೇ ಖುದ್ದು ಕಲಿಯುವರು.

ಕಾರ್ಯಕ್ರಮ ಉದ್ಘಾಟಿಸಿದ ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ. ಬೋರಲಿಂಗಯ್ಯ ಮಾತನಾಡಿ, ಭವಿಷ್ಯದ ದೃಷ್ಟಿಯಿಂದ ಎಐ, ಡ್ರೋನ್, ರೋಬಾಟಿಕ್ಸ್ ತಂತ್ರಜ್ಞಾನ ಕಲಿಕೆ ತುಂಬಾ ಅಗತ್ಯವಿದೆ ಎಂದು ಹೇಳಿದರು.


ಜಗತ್ತು ಆಧುನಿಕತೆಗೆ ತೆರೆದುಕೊಳ್ಳುತ್ತಿರುವಂತೆಯೇ ಶೈಕ್ಷಣಿಕ ವ್ಯವಸ್ಥೆಯೂ ಬದಲಾಗುತ್ತಿದೆ. ಈ ಬದಲಾವಣೆಗೆ ಹೊಂದಿಕೊಳ್ಳುವುದು ವಿದ್ಯಾರ್ಥಿಗಳಿಗೆ ಅಗತ್ಯ, ಅನಿವಾರ್ಯವೂ ಆಗಿದೆ. ಆಧುನಿಕ ತಂತ್ರಜ್ಞಾನಗಳು ಇಂದು ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿವೆ. ವಿದ್ಯಾರ್ಥಿಗಳಾಗಲೀ, ಸಾರ್ವಜನಿಕರಾಗಲಿ ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳದಿದ್ದಲ್ಲಿ ಮುಂಬರುವ ದಿನಗಳು ತುಂಬಾ ಕಷ್ಟವಾಗಲಿದೆ ಎಂದು ಹೇಳಿದರು.

ಎಐ, ಡ್ರೋನ್, ರೋಬಾಟಿಕ್ಸ್ ತಂತ್ರಜ್ಞಾನ ಕಲಿಕೆಯಿಂದ ಮಕ್ಕಳಲ್ಲಿ ಕ್ರಿಯಾತ್ಮಕ ಜ್ಞಾನ, ಹೊಸ ಹೊಸ ಆಲೋಚನೆಗಳು, ಆವಿಷ್ಕಾರ ಮನೋಭಾವ ಬೆಳೆಯುತ್ತದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನದೊಂದಿಗೆ ಇಂದಿನಿಂದಲೇ ಹೊಂದಿಕೊಳ್ಳುವ ಜ್ಞಾನ, ಕೌಶಲ ಬೆಳೆಸಿಕೊಳ್ಳಬೇಕು. ಇಂತಹ ಶೈಕ್ಷಣಿಕ ವ್ಯವಸ್ಥೆಗೆ ಶಿಕ್ಷಕರ ಜತೆಗೆ ಪಾಲಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಆರ್‌ಐಇ ಪ್ರಾಂಶುಪಾಲ ಡಾ. ಪ್ರದ್ಯುಮ್ನ ಕುಮಾರ್, ನೋಟ್ರೆ ಡೇಮ್ ಸ್ಕೂಲ್ ಮತ್ತು ಕಾಲೇಜಿನ ವ್ಯವಸ್ಥಾಪಕಿ ರೋಸ್ಲಿನ್, ಪ್ರಾಂಶುಪಾಲೆ ಅಂಜನಾ, ಸೌತ್ ಇಂಡಿಯನ್ ಬ್ಯಾಂಕ್‌ ನ ಮುಖ್ಯ ವ್ಯವಸ್ಥಾಪಕ ಕೆ. ಹರೀಶ್, ಡಾ. ಅನಿಲ್ ಥಾಮಸ್, ಮೆಟಾಬುಕ್ ಎಕ್ಸ್‌ ಆರ್‌ನ ನಿರ್ದೇಶಕ ರಾಕೇಶ್ ಪಾಂಡೆ, ಎವಿಪಿ ಮೊಹಮ್ಮದ್ ಕೈಸರ್, ಆರ್‌ಎಂ ಶರೋನ್ ನೆಲ್ಸನ್, ಕಿರುತೆರೆ ಕಲಾವಿದ ಸೂರಜ್ ಸಿಂಗ್, ಶಿಕ್ಷಕರು, ಸಿಬ್ಬಂದಿ ಇದ್ದರು.