ಸಾರಾಂಶ
ಸಮಾಜದ ಯುವ ನಾಯಕನ ವ್ಯಕ್ತಿತ್ವಕ್ಕೆ ಧಕ್ಕೆ: ಎನ್.ರುದ್ರಮುನಿ । ತೀವ್ರ ಹೋರಾಟದ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ರಾಜಕೀಯ ಏಳಿಗೆ ಸಹಿಸಲಾಗದೆ, ಕೆಲವೊಂದು ಶಕ್ತಿಗಳು ಇಲ್ಲಸಲ್ಲದ ಆರೋಪ ಎಸಗುತ್ತ, ತೇಜೋವಧೆ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ಜಿಲ್ಲಾ ಛಲವಾದಿ ಮಹಾಸಭಾ ಜಿಲ್ಲಾ ಘಟಕ ಹೇಳಿದೆ.ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ರಾಜಕೀಯ ಏಳಿಗೆ ಸಹಿಸಲಾಗದೆ, ಕೆಲವೊಂದು ಶಕ್ತಿಗಳು ಇಲ್ಲಸಲ್ಲದ ಆರೋಪ ಎಸಗುತ್ತ, ತೇಜೋವಧೆ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ಜಿಲ್ಲಾ ಛಲವಾದಿ ಮಹಾಸಭಾ ಜಿಲ್ಲಾ ಘಟಕ ದಾವಣಗೆರೆಯಲ್ಲಿ ಹೇಳಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾ ಜಿಲ್ಲಾಧ್ಯಕ್ಷ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎನ್.ರುದ್ರಮುನಿ, ಸಚಿವ ಪ್ರಿಯಾಂಕ್ ಖರ್ಗೆಯವರನ್ನೇ ಗುರಿಯಾಗಿಸಿಕೊಂಡು ರಾಜಕೀಯ ಎದುರಾಳಿಗಳು, ವಿಪಕ್ಷಗಳ ನಾಯಕರು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.ಪ್ರಿಯಾಂಕ್ ಖರ್ಗೆ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಹಲವಾರು ರಾಜಕೀಯ ಮುಖಂಡರು ಪ್ರಿಯಾಂಕ್ ಖರ್ಗೆ ರಾಜಕೀಯ ಏಳಿಗೆ ಸಹಿಸಲಾಗದೇ, ಅನವಶ್ಯಕವಾಗಿ ಆಧಾರರಹಿತ ಹಾಗೂ ಅವಹೇಳನಕಾರಿಯಾಗಿ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಛಲವಾದಿ ಸಮಾಜದ ಯುವ ನಾಯಕ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡಲಾಗುತ್ತಿದೆ. ಪ್ರಿಯಾಂಕ್ ಖರ್ಗೆ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನು ಕೆಲವು ರಾಜಕೀಯ ಮುಖಂಡರು ನೀಡುತ್ತಿರುವುದು ನಮ್ಮ ಸಮುದಾಯಕ್ಕೆ ತೀವ್ರ ನೋವನ್ನುಂಟು ಮಾಡುತ್ತಿದೆ. ವಿಪಕ್ಷದವರ ಇಂತಹ ಹೇಳಿಕೆ, ಆರೋಪಗಳನ್ನು ಛಲವಾದಿ ಸಮಾಜ ವಿರೋಧಿಸುತ್ತದೆ ಎಂದು ತಿಳಿಸಿದರು.ಇದೇ ರೀತಿ ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪ ಮಾಡುವುದು, ಟೀಕಿಸುವುದು, ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಹೇಳಿಕೆ ನೀಡುವುದನ್ನು ಮುಂದುವರಿಸಿದರೆ ಅಂತಹವರ ವಿರುದ್ಧ ಛಲವಾದಿ ಸಮಾಜವು ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವ ಮೂಲಕ ತಕ್ಕ ಪಾಠ ಕಲಿಸಲಿದೆ. ಇನ್ನಾದರೂ ಪ್ರಿಯಾಂಕ್ ಖರ್ಗೆ ಬಗ್ಗೆ ಮಾತನಾಡುವ ಮುನ್ನ ವಿಪಕ್ಷಗಳ ನಾಯಕರಾದವರು ಆಲೋಚಿಸಿ ಮಾತನಾಡಲಿ ಎಂದು ಎನ್.ರುದ್ರಮುನಿ ಕಿವಿಮಾತು ಹೇಳಿದರು.
ಸಮಾಜದ ಮುಖಂಡರಾದ ನಿವೃತ್ತ ಪೌರಾಯುಕ್ತ ಎಸ್.ಶೇಖರಪ್ಪ, ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗನ್ನಾಥ, ಕೆಪಿಸಿಸಿ ಸಂಚಾಲಕ ಎಚ್.ಚಂದ್ರಪ್ಪ, ಯುವ ಮುಖಂಡ ಎಚ್.ಗಿರೀಶ, ಅರುಣಕುಮಾರ, ರೇವಣಸಿದ್ದಪ್ಪ, ಕೆ.ಶಿವಕುಮಾರ, ಅವಿನಾಶ ಇತರರು ಇದ್ದರು.