ಸಾರಾಂಶ
ಮಡಿಕೇರಿ : ದೆಹಲಿ ಚುನಾವಣೆಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ನೇತೃತ್ವದ ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಬಿಜೆಪಿ ಪಕ್ಷದ ಮುಖಂಡರು ವಿಜಯೋತ್ಸವ ಆಚರಿಸಿದರು.
ವೃತ್ತದಲ್ಲಿ ಜಮಾಯಿಸಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರಧಾನಿ, ರಾಷ್ಟ್ರಧ್ಯಕ್ಷರು ಹಾಗೂ ದೆಹಲಿ ಮತದಾರರಿಗೆ ಜೈಕಾರ ಕೂಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ದೆಹಲಿ ಚುನಾವಣೆ ಇಡೀ ದೇಶದ ಪ್ರತಿಷ್ಠೆಯ ಚುನಾವಣೆಯಾಗಿತ್ತು. ದೇಶದ ರಾಜಧಾನಿಯಲ್ಲಿ ನಡೆದ ಚುನಾವಣೆಯಲ್ಲಿ ನರೇಂದ್ರ ಮೋದಿಯ ಉತ್ತಮ ಆಡಳಿತ ಮೆಚ್ಚಿ ಜನ ಬಿಜೆಪಿ ಬೆಂಬಲಿಸಿದ್ದಾರೆ. ಇದರೊಂದಿಗೆ ಆಪ್ನ ದುರಾಡಳಿತ ಹಾಗೂ ಭ್ರಷ್ಟಚಾರಕ್ಕೆ ತಕ್ಕ ಉತ್ತರ ದೊರೆತಿದೆ ಎಂದರು.
ಮುಂದೆಯೂ ದೇಶದ ಎಲ್ಲೆ ಚುನಾವಣೆ ನಡೆದರೂ ಇಂತಹದ್ದೇ ಫಲಿತಾಂಶ ಬರುವ ನಂಬಿಕೆಯೂ ತಮಗೆ ಇದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ ರವಿ ಕಾಳಪ್ಪ, ಈ ದೇಶವನ್ನು 70 ವರ್ಷ ಆಳಿದ ಕಾಂಗ್ರೆಸ್ ಒಂದೂ ಸ್ಥಾನವನ್ನು ಪಡೆಯದೇ ಶೂನ್ಯ ಗಳಿಸುವ ಸಾಧನೆ ಮಾಡಿದೆ. ದೇಶದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದದ ನಡುವಿನ ವ್ಯತ್ಯಾಸ ಇದರಿಂದ ತಿಳಿಯುತ್ತದೆ. ರಾಷ್ಟ್ರ ರಾಜಧಾನಿಯಿಂದಲೇ ಕಾಂಗ್ರೆಸ್ ಮುಕ್ತ ಭಾರತ ಮಾಡುವ ಕಾರ್ಯವಾಗಲಿದೆ ಎಂದರು.
ವಿಜಯೋತ್ಸವದಲ್ಲಿ ಬಿಜೆಪಿಯ ಮುಖಂಡರಾದ ಅರುಣ್ ಕುಮಾರ್, ಪಿ.ಡಿ ಪೊನ್ನಪ್ಪ, ಮಹೇಶ್ ಜೈನಿ, ಎಂ.ಬಿ ದೇವಯ್ಯ, ತಳೂರು ಕಿಶೋರ್ ಕುಮಾರ್ ಇತರರು ಇದ್ದರು.