ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಮಹಿಳಾ ಮೀಸಲು ವಿಧೇಯಕ ಸೋಲಿಗೆ ಕಾರಣವಾದ ಕಾಂಗ್ರೆಸ್ ಪಕ್ಷ 70 ಕೋಟಿ ಮಹಿಳೆಯರಿಗೆ ಮುಖಭಂಗ ಮಾಡಿದ್ದು, ಇನ್ಮುಂದೆ ಕಾಂಗ್ರೆಸ್ ಸ್ಥಿತಿ ಸ್ಮಶಾನಕ್ಕೆ ಹೋದ ಹೆಣದಂತಾಗುತ್ತದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಿಳಾ ಮೀಸಲು ಸಾಂವಿಧಾನಿಕ ತಿದ್ದುಪಡಿ ಮಸೂದೆ ಸೋಲಿಗೆ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಕಾರಣವಾಗಿವೆ. ದೇಶದ ಶೇ.೫೦ರಷ್ಟಿರುವ ಮಹಿಳೆಯರು ಕಾಂಗ್ರೆಸನ್ನು ಕ್ಷಮಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಹುಮಾನ ಕೊಡಬಹುದು:ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿಗೆ ಮೊದಲ ಬಹುಮಾನ ಕೊಡಬಹುದು. ಬೆಲೆ ಏರಿಕೆಯಲ್ಲಿ ಕಾಂಗ್ರೆಸ್ ಮೀರಿಸೋದಕ್ಕೆ ಯಾವ ಪಕ್ಷದ ಸರ್ಕಾರದಿಂದಲೂ ಸಾಧ್ಯವಿಲ್ಲ ಎಂದರು.ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ:
ಕಾಂಗ್ರೆಸ್ ನೇತೃತ್ವದ ಹಿಮಾಚಲ ಪ್ರದೇಶ ಸರ್ಕಾರ ದಿವಾಳಿಯಾಗಿದೆ. ಅಲ್ಲಿನ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಶೌಚಾಲಯಕ್ಕೂ ಟ್ಯಾಕ್ಸ್ ಹಾಕಲು ಅಲ್ಲಿನ ಸರ್ಕಾರ ಹೊರಟಿದೆ. ನಮ್ಮ ರಾಜ್ಯ ಸರ್ಕಾರ ಕೂಡ ಪ್ರಧಾನಿ ಮೋದೀಜಿ ಕಟ್ಟಿಸಿದ ಶೌಚಾಲಯಕ್ಕೂ ಟ್ಯಾಕ್ಸ್ ಹಾಕುತ್ತಾರೇನೋ ಕಾದು ನೋಡಬೇಕು ಎಂದರು.
ದಲಿತರಿಗೆ ಅನ್ಯಾಯ:
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಎಸ್ಇಪಿ, ಟಿಎಸ್ಪಿ ಹಣ ಬಳಕೆ ಮಾಡಿಕೊಂಡಿದೆ. ಹೀಗಾದಾಗ ದಲಿತರಿಗೆಲ್ಲಿ ಫ್ರೀ ಗ್ಯಾರಂಟಿ ಸಿಕ್ಕಿದಂತಾಗುತ್ತದೆ? ಇತ್ತ ಒಳ ಮೀಸಲಾತಿಯಲ್ಲೂ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಸಿ.ಮಹದೇವಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಡಾ.ನವೀನ್ ಮೌರ್ಯ, ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಎಲ್.ಸುರೇಶ್, ಮಂಡಲ ಪ್ರಧಾನ ಕಾರ್ಯದರ್ಶಿ ಗರಗನಹಳ್ಳಿ ಮಹೇಂದ್ರ, ದಲಿತ ಮುಖಂಡ ಬಸವರಾಜು, ರಾಜೇಂದ್ರ ಸೇರಿದಂತೆ ಹಲವರಿದ್ದರು.
------ಅಕ್ರಮ ಗಣಿಗಾರಿಕೆ; ಪತ್ರಕರ್ತರು ಸಿಎಂ ಪ್ರಶ್ನೆ ಮಾಡಿ
ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸಲಹೆಗುಂಡ್ಲುಪೇಟೆ:
ಗುಂಡ್ಲುಪೇಟೆಗೆ ಇಂದು ಮುಖ್ಯಮಂತ್ರಿಗಳು ಬರುತ್ತಿದ್ದಾರೆ. ಅಕ್ರಮ ಗಣಿಗಾರಿಕೆಗೆ ಬಗ್ಗೆ ನಿಮ್ಮ ಬೆಂಬಲವಿದೆಯಾ ಎಂಬುದರ ಬಗ್ಗೆ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪತ್ರಕರ್ತರಿಗೆ ಮನವಿ ಮಾಡಿದರು.ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಕ್ರಮ ಗಣಿಗಾರಿಕೆಗೆ ಬೆಂಬಲಿಸ್ತೀರಾ? ಎಂದು ಮಂಗಳವಾರ ಗುಂಡ್ಲುಪೇಟೆಗೆ ಆಗಮಿಸಲಿರುವ ಮುಖ್ಯಮಂತ್ರಿಗಳನ್ನೇ ಕೇಳಬೇಕು, ಇಂಥವರ ಮೇಲೆ ಕ್ರಮ ಜರುಗಿಸುತ್ತೀರಾ ಎಂದು ಪತ್ರಕರ್ತರು ಪ್ರಶ್ನಿಸಿ ಎಂದು ಸಲಹೆ ನೀಡಿದರು.
ಇಲ್ಲಿನ ಶಾಸಕರೇ ಅಕ್ರಮ ಗಣಿಗಾರಿಕೆಯಲ್ಲಿ ಪಾಲುದಾರರು, ಅಕ್ರಮ ಗಣಿಗಾರಿಕೆಗೆ ಶಾಸಕ ಸ್ಥಾನ ಬೇಕಾ? ಅಕ್ರಮ ಗಣಿಗಾರಿಕೆ ಮಾಡೋದಾದರೆ ನೀವು ಶಾಸಕನಾಗಲು ನಾಲಾಯಕ್ ಎಂದು ಶಾಸಕ ಗಣೇಶ್ ಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದರು.ಸ್ಥಳೀಯ ಶಾಸಕರಾದ ಗಣೇಶ್ ಪ್ರಸಾದ್ ಶಾಸಕರಾಗಿರುವವರೆಗೂ ಅವರು ನಡೆಸುವ ಎಲ್ಲಾ ಉದ್ದಿಮೆಗಳನ್ನು ರಾಜ್ಯ ಸರ್ಕಾರ ರದ್ದು ಪಡಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಗುಂಡ್ಲುಪೇಟೆ ತಾಲೂಕಿನ ಅಕ್ರಮ ಗಣಿಗಾರಿಕೆಗೆ ಸ್ಥಳೀಯ ಶಾಸಕರೇ ಕಾರಣರಾಗಿದ್ದಾರೆ. ಹಾಗಾಗಿ ಮುಖ್ಯಮಂತ್ರಿಗಳು ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಸಿದ್ದು ಕೈ ಬಿಡೋವಾಗ ಕಾಂಗ್ರೆಸ್ ನಿರ್ಣಾಮ ಗ್ಯಾರಂಟಿ: ಛಲವಾದಿ
ಗುಂಡ್ಲುಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಬಿಡುವಾಗ ಕಾಂಗ್ರೆಸ್ ನಿರ್ಣಾಮ ಮಾಡುತ್ತಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು. ಸಿದ್ದರಾಮಯ್ಯ ಕಾಂಗ್ರೆಸ್ಗೆ ಸೇರುವುದಕ್ಕೂ ಮುನ್ನ ನೇರ ನಡೆಗೆ ಹೆಸರಾಗಿದ್ದರು. ಕಾಂಗ್ರೆಸ್ ಸೇರಿದ ಬಳಿಕ ಕಾಂಗ್ರೆಸ್ಸಿಗರನ್ನೇ ಮುಳುಗಿಸುವ ಸುಳ್ಳು ಹೇಳಿ ಮುಖ್ಯಮಂತ್ರಿಯಾದರು. ಸಿದ್ದರಾಮಯ್ಯ ಹಸಿ ಸುಳ್ಳುಗಾರರಲ್ಲಿ ಸುಳ್ಳುಗಾರ ಎಂದು ಜರಿದರು.------