ಪ್ರೆಸ್‌ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ರಾಜ್ಯ ಸರ್ಕಾರದ ಸಾಲದ ಮೊತ್ತ ₹ 8.14 ಲಕ್ಷ ಕೋಟಿ ಆಗಿದ್ದು, ಸಿದ್ದರಾಮಯ್ಯ ಅವಧಿಯಲ್ಲೇ ₹5.84 ಕೋಟಿ ಸಾಲ ಮಾಡಲಾಗಿದೆ. ಈ ಸಾಲಕ್ಕೆ ಬಡ್ಡಿ ಕಟ್ಟುವುದಕ್ಕೂ ₹48 ಸಾವಿರ ಕೋಟಿ ಹೊಸ ಸಾಲ ಮಾಡಲಾಗಿದೆ. ಇದು ಕಾಂಗ್ರೆಸ್‌ ಸರ್ಕಾರದ ಸಾಧನೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ಗುರುವಾರ ಪ್ರೆಸ್‌ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿಯೇ ಬರೋಬ್ಬರಿ ₹4.84 ಲಕ್ಷ ಕೋಟಿ ನಷ್ಟು ಸಾಲ ಆಗಿದೆ. ಇದು ಸಿದ್ದರಾಮಯ್ಯ ಅವರ ಚಾಣಕ್ಯ ನೀತಿಯಲ್ಲ, ಚಾರ್ವಾಕ ನೀತಿ ಎಂದು ಟೀಕಿಸಿದರು.

ರಾಜ್ಯದ ಆರ್ಥಿಕ ವ್ಯವಸ್ಥೆ ಹಳಿ ತಪ್ಪಿರುವುದು ದುಃಖದ ವಿಚಾರ. ಸಿದ್ದರಾಮಯ್ಯನವರಂತಹ ಅನುಭವಿ ಆರ್ಥಿಕ ಸಚಿವರಿದ್ದಾಗ ಇಂತಹ ಪರಿಸ್ಥಿತಿ ನಿರ್ಮಾಣವಾಗ ಬಾರದಿತ್ತು. ಈ ವರ್ಷದ ಸಾಲಕ್ಕೆ ₹48 ಸಾವಿರ ಕೋಟಿ ಬಡ್ಡಿ ಕಟ್ಟಲಾಗಿದೆ. ಇದಕ್ಕೂ ಸಾಲ ಮಾಡಲಾಗಿದೆ ಎಂದು ತಿಳಿಸಿದರು.


ಹೂವಿಗೆ ನೋವಾಗದಂತೆ, ಮಕರಂದ ಹೀರುವ ದುಂಬಿಯಂತೆ, ಜನರಿಂದ ತೆರಿಗೆ ಸಂಗ್ರಹಿಸಬೇಕು ಎನ್ನುವುದು ಚಾಣಕ್ಯ ನೀತಿ. ಆದರೆ, ಸಿದ್ದರಾಮಯ್ಯ ಎಲ್ಲದರ ಬೆಲೆ ಏರಿಕೆ ಮಾಡಿ, ಜನರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ ಎಂದರು.

ರಾಜ್ಯದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ, ಔಷಧಿ ಖರೀದಿಗೆ ಹಣವಿಲ್ಲ. ಸರ್ಕಾರಿ ವೈದ್ಯರ ಸಂಘವೇ ವಿವಿಧ ಬೇಡಿಕೆಗಳಿಗೆ ಚಳವಳಿಗೆ ಕರೆ ನೀಡಿದ್ದಾರೆ. ಅವರು ಪ್ರಮುಖವಾಗಿ ಕಾಲಕಾಲಕ್ಕೆ ಔಷಧ ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದನ್ನು ರಾಜಕೀಯ ಉದ್ದೇಶ ಎಂದವರು ಈಗ ಸರ್ಕಾರಿ ವೈದ್ಯರದ್ದೂ ರಾಜಕೀಯ ಉದ್ದೇಶ ಎನ್ನುತ್ತಾರೆಯೇ? ಎಂದು ಪ್ರಶ್ನಿಸಿದರು.

ಇಷ್ಟೆಲ್ಲ ಸಾಲ ಮಾಡಿದರೂ, ಔಷಧ ಖರೀದಿಗೆ, ಗುತ್ತಿಗೆದಾರರ ಬಾಕಿ ಪಾವತಿಗೆ, ಅರೆಕಾಲಿಕ ಉಪನ್ಯಾಸಕರ ವೇತನಕ್ಕೆ, ಅಂಗನ ವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ಅಡುಗೆ ಸಹಾಯಕರೆಲ್ಲರೂ ಹೋರಾಟಕ್ಕೆ ಇಳಿದಿದ್ದಾರೆ. ಇಷ್ಟೊಂದು ಸಾಲದ ಹಣಎಲ್ಲಿ ಹೋಯಿತು? ಇಷ್ಟೆಲ್ಲ ಬೆಲೆ ಏರಿಕೆ ಮಾಡಿದರೂ, ಹಣ ಪಾವತಿಯಾಕಾಗಿಲ್ಲ? ಬಸ್ ಟಿಕೆಟ್‌ದರ, ವಿದ್ಯುತ್‌ ದರ, ಪೆಟ್ರೋಲ್‌ ಡೀಸೆಲ್ ಮೇಲೆ ಸೆಸ್, ಸ್ಟ್ಯಾಂಪ್‌ಡ್ಯೂಟಿ, ಅಬಕಾರಿ ತೆರಿಗೆ, ವಾಹನ ನೋಂದಣಿ ಶುಲ್ಕ, ಜನನ - ಮರಣ ಪ್ರಮಾಣಪತ್ರ, ಸರ್ಕಾರಿ ಆಸ್ಪತ್ರೆಗಳ ಒಪಿಡಿ ನೋಂದಣಿ, ಎಲ್ಲದರ ಬೆಲೆಯನ್ನೂ ಸರ್ಕಾರ ಏರಿಸಿದೆ ಎಂದು ಆರೋಪಿಸಿದರು.ಈ ಬಾರಿ ಗ್ಯಾರಂಟಿಗೆ ಎಸ್‌ಸಿಪಿ ಟಿಎಸ್‌ಪಿ ನಿಧಿ ಬಳಸುವುದಿಲ್ಲ ಮತ್ತು ಬಳಸಿಕೊಂಡ ₹39 ಸಾವಿರ ಕೋಟಿ ಬಜೆಟ್‌ನಲ್ಲಿ ಹರಿಜನ ಗಿರಿಜನ ಕಲ್ಯಾಣಕ್ಕಾಗಿ ತೆಗೆದಿಡಬೇಕು. ಎಸ್‌ಸಿಪಿ ಟಿಎಸ್‌ಪಿ ನಿಧಿ ಬಳಸಿದ್ದರಿಂದ ನಿಗಮಗಳಿಗೂ ಹಣದ ಕೊರತೆ ಯಾಗಿದೆ. ಈ ಬಜೆಟ್‌ನಲ್ಲಿ ಮೀಸಲು ನಿಧಿ ಘೋಷಿಸದಿದ್ದರೆ, ಸಿದ್ದರಾಮಯ್ಯನವರದ್ದು ಸಾಮಾಜಿಕ ಅನ್ಯಾಯ. ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ಆದಿ ಜಾಂಬವ, ವಾಲ್ಮೀಕಿ, ಲಂಬಾಣಿತಾಂಡ್ಯಾ, ಲಿಡ್ಕರ್ ಮುಂತಾದಅಭಿವೃದ್ಧಿ ನಿಗಮಗಳು ಸೊರಗಿವೆ. ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳನ್ನು ವಿದೇಶ ವ್ಯಾಸಂಗಕ್ಕೆ ಕಳುಹಿಸುವ ಕೋಟಾ ಕಡಿಮೆಗೊಳಿಸಲಾಗಿದೆ ಎಂದರು.

ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್‌ದೇವರಾಜ್ ಶೆಟ್ಟಿ, ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಕಾರ್ಯದರ್ಶಿ ಸೀತಾರಾಮ ಭರಣ್ಯ, ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಕೆ.ಪಿ ವೆಂಕಟೇಶ್, ಎಸ್‌ಟಿ ಮೋರ್ಚಾ ರಾಜ್ಯ ವಕ್ತಾರ ಶೃಂಗೇರಿ ಶಿವಣ್ಣ, ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ನಂದೀಶ್ ಮದಕರಿ, ಹಿರಿಯ ಮುಖಂಡ ಲಕ್ಷ್ಮಣ್‌ನಾಯಕ್ ಇದ್ದರು.

---ಬಾಕ್ಸ್‌--

ಬೇರೆ ಕ್ಷೇತ್ರ ಇಲ್ಲ, ಚಿಕ್ಕಮಗಳೂರಿನಲ್ಲೇ ಸ್ಪರ್ಧೆ: ಸಿ.ಟಿ.ರವಿ

ಚಿಕ್ಕಮಗಳೂರಿನ ಜನರು 4 ಬಾರಿ ಗೆಲ್ಲಿಸಿದ್ದಾರೆ. ಒಂದು ಸೋಲಿಗೆ ಓಡಿ ಹೋಗುವ ಪ್ರಶ್ನೆಯೇ ಇಲ್ಲ. ಚಿಕ್ಕಮಗಳೂರು ಜನ್ಮಭೂಮಿಯೂ ಹೌದು, ಕರ್ಮಭೂಮಿಯೂ ಹೌದು. ಸೋಲಿನ ಅವಲೋಕನ ಮಾಡಿ, ತಪ್ಪುಗಳಿಂದ ಪಾಠಕಲಿತು ಮುಂದೆ ಹೋಗುತ್ತೇವೆ ಎಂದು ಸಿ.ಟಿ. ರವಿ ಹೇಳಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಸೈದ್ಧಾಂತಿಕ ಕಾರಣಗಳಿಗೆ ರಾಜಕಾರಣಕ್ಕೆ ಬಂದವರು. ಕಳೆದ 20 ವರ್ಷ ಶಾಸಕನಾಗಿ, ಸಚಿವನಾಗಿದ್ದಾಗ ಯಾರೂ ಜಾತಿ ರಾಜಕಾರಣ ಆರೋಪ ಮಾಡಿರಲಿಲ್ಲ. ಈಗ ಸೋತು ಬೇರೆಯವರು ಗೆದ್ದಾಗ ಈ ಆರೋಪ ಗಳು ಬರುತ್ತಿವೆ. ಇದರ ಸತ್ಯಾಸತ್ಯತೆ ಜನರೇ ನಿರ್ಧರಿಸುತ್ತಾರೆ. ಚುನಾವಣೆಗಳಲ್ಲಿ ಗೆಲ್ಲಬಹುದು, ಸೋಲಬಹುದು. ಹಿಂದುತ್ವ ಮತ್ತು ಅಭಿವೃದ್ಧಿ ಸಿದ್ಧಾಂತ ಬಿಟ್ಟುರಾಜಕಾರಣದ ಪ್ರಶ್ನೆಯೇಇಲ್ಲ. ಈ ಕಾರಣಕ್ಕೆ ಸೋಲು ಬಂದರೆ ಸೋಲನ್ನು ಸ್ವೀಕರಿಸುತ್ತೇನೆ. ಆದರೆ ಗೆಲುವಿಗಾಗಿ ಪಕ್ಷ ಬದಲಿಸುವುದು, ನಂಬಿದವರಿಗೆ ಚೂರಿ ಹಾಕುವುದು ಸಾಧ್ಯವೇ ಇಲ್ಲ ಎಂದರು. (ಸಿಟಿ ರವಿ ಫೋಟೋ ಬಳಸುವುದು)