ಕನ್ನಡಪ್ರಭ ವಾರ್ತೆ ಬೆಂಗಳೂರು

ಜಕ್ಕೂರು ಕೆರೆ ಕೋಡಿ ಪ್ರದೇಶದಲ್ಲಿ ಹೊಸದಾಗಿ ರಸ್ತೆ ನಿರ್ಮಾಣಕ್ಕೆ ಅಲೈನ್ಮೆಂಟ್‌ ನಕ್ಷೆ ಹಾಗೂ ಸಂಪೂರ್ಣ ಕಡತಗಳನ್ನು ಜಿಬಿಎ ಆಯುಕ್ತರಿಗೆ ಸಲ್ಲಿಸುವಂತೆ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬುಧವಾರ ಜಕ್ಕೂರು ಕೆರೆ ಕೋಡಿ ಪ್ರದೇಶದಲ್ಲಿ ಸ್ಥಳ ವೀಕ್ಷಣೆ ನಡೆಸಿದ ಆಯುಕ್ತರು, ಪ್ರಸ್ತುತ 60 ಅಡಿ (18 ಮೀಟರ್‌) ಅಗಲದ ರಸ್ತೆ ಯೋಜನೆಯು ಕೋಗಿಲು ರಸ್ತೆಯಿಂದ ಪ್ರಾರಂಭವಾಗಿ ಸಂಪಿಗೆಹಳ್ಳಿ, ಜಕ್ಕೂರು ಹಾಗೂ ಗಸ್ತಿ ಕೆಂಪನಹಳ್ಳಿ ಮೂಲಕ ಜಕ್ಕೂರು ಕೆರೆ ಕೋಡಿ ಮುಂಭಾಗದಿಂದ ರೈಲ್ವೆ ಸಮಾನಾಂತರ ರಸ್ತೆಯವರೆಗೆ ಸಂಪರ್ಕ ಕಲ್ಪಿಸುವ ಸುಮಾರು 3,365 ಮೀಟರ್‌ ಉದ್ದದ ರಸ್ತೆ ಆಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ರಿವೈಸ್ಡ್‌ ಮಾಸ್ಟರ್‌ ಪ್ಲಾನ್‌ ( ಆರ್‌ಎಂಪಿ–2015 ) ಅನ್ವಯ ಭೂಸ್ವಾಧೀನ ಪ್ರಕ್ರಿಯೆಗೆ ಫಾರ್ಮ್-1 ಅಧಿಸೂಚನೆ ಹೊರಡಿಸಲಾಗಿದೆ. ಅದರಂತೆ ರಸ್ತೆ ನಿರ್ಮಿಸುವ ಪ್ರದೇಶದಲ್ಲಿ ಹಲವಾರು ಮನೆಗಳು ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ, ರಸ್ತೆಯ ಅಲೈನ್‌ಮೆಂಟ್ ಪರಿಷ್ಕರಣೆ ಅಗತ್ಯವಾಗಿದೆ ಎಂದು ತಿಳಿಸಿದರು.

ಹಾಲಿ ಬಳಕೆಯಲ್ಲಿರುವ 15 ಮೀಟರ್‌ ಅಗಲದ ರಸ್ತೆಗೆ ಸೇರುವಂತೆ ಹೊಸ ರಸ್ತೆ ನಿರ್ಮಾಣ ಮಾಡುವುದರ ಜೊತೆಗೆ ಜಕ್ಕೂರು ಕೆರೆಯ ಬಫರ್‌ ಪ್ರದೇಶದ ಅಂಚಿನಲ್ಲಿ ಪರಿಷ್ಕೃತ ಅಲೈನ್ಮೆಂಟ್‌ ಅನುಮೋದನೆ ಪಡೆಯಬೇಕಿದೆ. ಅದಕ್ಕಾಗಿ ಆಡಳಿತಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಬಿ-ಸ್ಮೈಲ್‌ (ಬಿಎಸ್‌ಎಂಐಎಲ್‌ಇ) ಅಭಿಯಂತರರಿಂದ ಅಲೈನ್ಮೆಂಟ್ ನಕ್ಷೆ ಹಾಗೂ ಸಂಪೂರ್ಣ ಕಡತ ಪಡೆದು ಆಯುಕ್ತರಿಗೆ ಸಲ್ಲಿಸುವಂತೆ ನಗರ ಪಾಲಿಕೆಯ ಮುಖ್ಯ ಅಭಿಯಂತರರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಂಟಿ ಆಯುಕ್ತ ಮಹಮದ್‌ ನಯೀಮ್ ಮೊಮಿನ್, ಮುಖ್ಯ ಅಭಿಯಂತರ ರಾಘವೇಂದ್ರ ಪ್ರಸಾದ್, ಅಧೀಕ್ಷಕ ಅಭಿಯಂತರ ಪ್ರಕಾಶ್, ಕಾರ್ಯಪಾಲಕ ಅಭಿಯಂತರ ಸಚಿನ್, ಬಿ-ಸ್ಮೈಲ್‌ ಅಭಿಯಂತರ ಪ್ರಕಾಶ್ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.