ಒಕ್ಕೂಟದಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಹೆಚ್ಚುವರಿ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತನೆ ಮಾಡಲು ಬೇರೆ ಕಡೆ ಸಾಗಿಸುವಾಗ ಸಾಗಾಣಿಕೆ ವೆಚ್ಚ ಸೇರಿದಂತೆ ಒಕ್ಕೂಟಕ್ಕೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಹೀಗಾಗಿ ಒಕ್ಕೂಟದಲ್ಲಿ ಹಾಲಿನ ಪುಡಿ ಘಟಕ ಸ್ಥಾಪನೆಗೆ ಬಗ್ಗೆ ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಹಾಲಿನ ಪುಡಿ ಪರಿವರ್ತನಾ ಮತ್ತು ಐಸ್ ಕ್ರೀಮ್ ತಯಾರಿಕಾ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಎಂ.ಕೆ.ಹರೀಶ್ ಬಾಬು ಹೇಳಿದರು.ತಾಲೂಕಿನ ಗೆಜ್ಜಲಗೆರೆ ಜಿಲ್ಲಾ ಹಾಲು ಒಕ್ಕೂಟದಲ್ಲಿ ಬುಧವಾರ ನಡೆದ 2025, 26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿ, ಒಕ್ಕೂಟದಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಹೆಚ್ಚುವರಿ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತನೆ ಮಾಡಲು ಬೇರೆ ಕಡೆ ಸಾಗಿಸುವಾಗ ಸಾಗಾಣಿಕೆ ವೆಚ್ಚ ಸೇರಿದಂತೆ ಒಕ್ಕೂಟಕ್ಕೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಹೀಗಾಗಿ ಒಕ್ಕೂಟದಲ್ಲಿ ಹಾಲಿನ ಪುಡಿ ಘಟಕ ಸ್ಥಾಪನೆಗೆ ಬಗ್ಗೆ ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಒಕ್ಕೂಟದಲ್ಲಿ ನೂತನವಾಗಿ ಅಂದಾಜು 50 ಲೀಟರ್ ಸಾಮರ್ಥ್ಯ ಉಳ್ಳ ಐಸ್ ಕ್ರೀಮ್ ಘಟಕ ಸ್ಥಾಪನೆ ಮಾಡಲು ರಾಜ್ಯ ಹಾಲು ಮಾರಾಟ ಮಹಾಮಂಡಳಿಗೆ ಅನುಮತಿ ಕೋರಿದೆ. ಕೆಎಂಎಫ್ನಿಂದ ಅನುಮತಿ ದೊರಕಿದ ನಂತರ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಯೋಜನೆಗಳ ಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದರು.ರಾಷ್ಟ್ರೀಯ ಹೈನು ಅಭಿವೃದ್ಧಿ ನಿಗಮ ಅಭಿವೃದ್ಧಿ ಪಡಿಸಿರುವ ಎಎಂಸಿಎಸ್ ತತ್ತಾಂಶ ವನ್ನು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಅಳವಡಿಸಲಾಗಿದೆ. ಇದರಿಂದ ನೈಜ ಸಮಯದಲ್ಲಿ ಅಂಕಿ ಅಂಶಗಳನ್ನು ಪಡೆಯುವುದರ ಜೊತೆಗೆ ಹಾಲಿನ ಗುಣಮಟ್ಟವನ್ನು ಕಾಪಾಡಲು ಮತ್ತು ಗುಣಮಟ್ಟಕ್ಕೆ ತಕ್ಕಂತೆ ಉತ್ಪಾದಕರು ದರ ಪಡೆಯಲು ಸಹಕಾರಿಯಾಗುತ್ತದೆ ಎಂದರು.
ಹಾಲು ಒಕ್ಕೂಟದ ಮಾರುಕಟ್ಟೆ ಈಗಾಗಲೇ ವಿಸ್ತರಿಸಲಾಗಿದೆ. ದೆಹಲಿ ಮಾರುಕಟ್ಟೆಯಲ್ಲಿ ಈಗಾಗಲೇ ಹಾಲು ಮಾರಾಟ ಪ್ರಾರಂಭವಾಗಿದೆ. ಅಲ್ಲಿಯ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆಯ ಒಕ್ಕೂಟದಲ್ಲಿ ಪ್ರಸ್ತುತ ಪ್ರತಿನಿತ್ಯ 15 ಹಾಗೂ 30 ಮೆಟ್ರಿಕ್ ಟನ್ ಹಳೆಯ ಹಾಲಿನ ಪುಡಿ ಘಟಕ ಗಳಿವೆ. 40 ವರ್ಷದ ಹಳೆಯ ಘಟಕಗಳಾಗಿವೆ. ಇದರಿಂದ ಹಾಲಿನ ಪುಡಿ ಗುಣಮಟ್ಟ ಕಡಿಮೆ ಬರುತ್ತಿದೆ. ಪ್ರಸ್ತುತ ಹಾಲಿನ ಶೇಖರಣೆ ಅಧಿಕವಾಗಿರುವುದರಿಂದ ನೂತನವಾಗಿ 30 ಮೆಟ್ರಿಟನ್ ಸಾಮರ್ಥ್ಯದ ಅತ್ಯಾಧುನಿಕ ತಂತ್ರಜ್ಞಾನದ ಹಾಲಿನ ಪುಡಿ ಘಟಕ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.ಸಭೆಯಲ್ಲಿ ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯ ಹಾಲು ಸಹಕಾರ ಸಂಘಗಳಲ್ಲಿ ಗುಣಮಟ್ಟದ ಹಾಲು ಪೂರೈಕೆ ಮಾಡಿದ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಹಾಲು ಉತ್ಪಾದಕರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.
ಸಭೆಯಲ್ಲಿ ನಿರ್ದೇಶಕರಾದ ಎನ್.ಅಪ್ಪಾಜಿಗೌಡ, ಬಿ.ಬೋರೇಗೌಡ, ಎಂ.ಬಿ.ಹರೀಶ್, ಬಿ. ಆರ್.ರಾಮಚಂದ್ರ, ಯು.ಸಿ.ಶಿವಕುಮಾರ್, ರಘುನಂದನ್, ಕೆ.ರವಿ, ಎಸ್.ಪಿ.ಸ್ವಾಮಿ, ಲಕ್ಷ್ಮೀನಾರಾಯಣ, ಕೃಷ್ಣೇಗೌಡ, ಶಿವಕುಮಾರ್, ಅಣ್ಣೂರು ರಾಜೀವ್, ವಿಶ್ವಾಸ್, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎಚ್.ಆರ್.ರಘು ವಿವಿಧ ವಿಭಾಗಗಳ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.