ಕನ್ನಡಪ್ರಭವಾರ್ತೆ ಚನ್ನಪಟ್ಟಣ
ಸಮಾಜವನ್ನು ತಿದ್ದಿ ತೀಡಿ ಸರಿದಾರಿಗೆ ತರುವ ಪತ್ರಕರ್ತರಿಗೆ ತಮ್ಮ ಕಾರ್ಯಚಟುವಟಿಕೆಗಳ ಅನುಕೂಲಕ್ಕಾಗಿ ಪತ್ರಿಕಾ ಭವನ ಅವಶ್ಯಕವಾಗಿದೆ. ನಾನೂ ಸಹ ಪತ್ರಕರ್ತರು ಮತ್ತು ಪತ್ರಿಕಾ ಭವನದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು ಜವಾಬ್ದಾರಿ ಇರುವ ಎಲ್ಲರೂ ಒಗ್ಗಟ್ಟಿನಿಂದ ಮುಕ್ತವಾಗಿ ಸಹಕರಿಸಿದರೆ ಒಂದು ವರ್ಷದೊಳಗೆ ಆಧುನಿಕ ಸುಸಜ್ಜಿತವಾದ ಪತ್ರಿಕಾ ಭವನ ನಿರ್ಮಾಣ ಮಾಡಿಕೊಡಲು ಸಂಕಲ್ಪ ಮಾಡಿದ್ದೇನೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.ನಗರದಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರದ ಅನುದಾನದ ಜತೆಗೆ ಪತ್ರಕರ್ತರ ಭವನ ನಿರ್ಮಾಣಕ್ಕೆ ದಾನಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಸಹಾಯ ಸಹಕಾರ ಮಾಡುವ ವಿಶ್ವಾಸವಿದೆ. ಪತ್ರಕರ್ತರೆಲ್ಲರೂ ಒಟ್ಟಾಗಿ ನಿಂತು ಅವರ ಸಹಾಯ ಸಹಕಾರವನ್ನು ಪಡೆದು ನನ್ನೊಂದಿಗೆ ಸಹಕರಿಸಿದರೆ ಒಂದು ವರ್ಷದೊಳಗೆ ಪತ್ರಿಕಾ ಭವನವನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು.
ಕೆಯುಡ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಿಕಾ ಭವನ ತಾಲೂಕಿನ ಪತ್ರಕರ್ತರ ಬಹುದಿನಗಳ ಕನಸು. ಪತ್ರಕರ್ತರೆಲ್ಲರೂ ಒಟ್ಟಾಗಿ ಅವಿರತವಾಗಿ ಹೋರಾಟ ಮಾಡಿ ಪಟ್ಟಣದ ಹೃದಯ ಭಾಗದಲ್ಲಿ ಸ್ವಂತ ನಿವೇಶನವನ್ನು ಹೊಂದಿ ಇಂದು ಶಾಸಕರಾದ ಸಿ.ಪಿ.ಯೋಗೇಶ್ವರ್ ಅವರ ಸಹಕಾರದೊಂದಿಗೆ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಪತ್ರಿಕಾ ಭವನ ನಿರ್ಮಾಣವನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಿ ಇದೇ ಬಸವ ಜಯಂತಿ ದಿನ ಪತ್ರಿಕಾ ಭವನ ಲೋಕಾರ್ಪಣೆ ಗೊಳಿಸಲು ಶ್ರಮಿಸುವಂತೆ ಕಿವಿಮಾತು ಹೇಳಿದರು.ಗೌಡಗೆರೆ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯ ಕ್ಷೇತ್ರದ ಧರ್ಮದರ್ಶಿ ಡಾ. ಮಲ್ಲೇಶ್ ಗುರೂಜಿ ಮಾತನಾಡಿ, ಇಂದು ಬಸವಜಯಂತಿ ಮತ್ತು ಅಕ್ಷಯ ತೃತೀಯ ದಿನ. ಈ ಶುಭ ದಿನದಲ್ಲಿ ಯಾವುದೇ ಕಾರ್ಯ ಕೈಗೊಂಡರೂ ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ. ಇಂದು ಪತ್ರಕರ್ತರ ಬಹುದಿನಗಳ ಕನಸು ನನಸಾಗುತ್ತಿದೆ. ಈ ಕಾರ್ಯಕ್ಕೆ ನಾನು ನಿಮ್ಮ ಬೆನ್ನೆಲುಬಾಗಿ ನಿಲ್ಲುತ್ತೇನೆ. ಸಹಾಯ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.
ತಹಶೀಲ್ದಾರ್ ಗಿರೀಶ್ ಬಿ.ಎನ್., ಪೌರಾಯುಕ್ತ ಮಹೇಂದ್ರ ಬಿ., ಬಮೂಲ್ ನಿರ್ದೇಶಕ ಎಸ್. ಲಿಂಗೇಶ್ಕುಮಾರ್, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್, ನಗರಸಭೆ ಅಧ್ಯಕ್ಷ ಬಿ.ಎಂ. ನಾಗೇಶ್, ಮಾಜಿ ಅಧ್ಯಕರಾದ ಪ್ರಶಾಂತ್, ವಾಸಿಲ್ ಆಲಿ ಖಾನ್, ಬಿ.ಪಿ.ಮುದ್ದುಕೃಷ್ಣೇಗೌಡ, ಸದಸ್ಯರಾದ ಚಂದ್ರಶೇಖರ್, ಸತೀಶ್, ಸುಮಾ ರವೀಶ್, ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್. ಆನಂದಸ್ವಾಮಿ, ಕರಣ್ ಆನಂದ್, ಕೆಯುಡ್ಲ್ಯೂಜೆ ರಾಜ್ಯ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ, ರಾಜ್ಯ ಕಾರ್ಯದರ್ಶಿ ಕೆರಗೋಡು ಸೋಮಶೇಖರ್ ಸೇರಿ ಹಲವರು ಉಪಸ್ಥಿತರಿದ್ದರು.