ಸಾರಾಂಶ
ಹೋಬಳಿ ವ್ಯಾಪ್ತಿ ಮಳೆ ಬಿಡುವು ಕೊಟ್ಟು ಮೂರು ದಿನಗಳಿಂದ ಸುರಿಯುತ್ತಿದೆ. ಮಳೆ ಯಿಂದ ಕಾವೇರಿ ನದಿ ತುಂಬಿ ಹರಿಯುತ್ತಿದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಹೋಬಳಿ ವ್ಯಾಪ್ತಿಯಲ್ಲಿ ಮಳೆ ಬಿಡುವು ಕೊಟ್ಟು ಮೂರು ದಿನಗಳಿಂದ ಸುರಿಯುತ್ತಿದ್ದು ಮಳೆಯ ಪರಿಣಾಮದಿಂದ ಕಾವೇರಿ ನದಿ ತುಂಬಿ ಹರಿಯುತ್ತಿದೆ.ಇಲ್ಲಿಗೆ ಸಮೀಪದ ನಾಪೋಕ್ಲು-ಮೂರ್ನಾಡು ಸಂಪರ್ಕ ರಸ್ತೆಯ ಹೊದ್ದೂರಿನ ಗ್ರಾಮದ ಬೊಳಿಬಾಣೆ ಎಂಬಲ್ಲಿ ರಸ್ತೆ ಕಾವೇರಿ ಪ್ರವಾಹದಿಂದ ಜಲಾವೃತವಾಗಿದೆ. ಕಿರು ವಾಹನಗಳ ಸಂಚಾರ ಕಷ್ಟಕರವಾಗಿದ್ದು ರಾತ್ರಿಯೂ ಮಳೆ ಸುರಿದರೆ ಮೂರ್ನಾಡು ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ .
ಸಮೀಪದ ಚೆರಿಯಪರಂಬುವಿನಲ್ಲೂ ರಸ್ತೆ ಜಲಾವೃತವಾಗಿ ನಾಪೋಕ್ಲು- ಕಲ್ಲುಮೊಟ್ಟೆ ಸಂಪರ್ಕ ರಸ್ತೆ ಕಡಿತಗೊಂಡಿದೆ. ಇಲ್ಲಿಗೆ ಸಮೀಪದ ಎಮ್ಮೆಮಾಡಿನಲ್ಲಿರುವ ಗದ್ದೆಗಳು ಕಾವೇರಿ ಪ್ರವಾಹದಿಂದ ಸಂಪೂರ್ಣ ಜಲಾವೃತವಾಗಿದೆ.ಚೆರಿಯಪರಂಬುವಿನಲ್ಲಿ ನದಿ ತಟದ ಮನೆಗಳಲ್ಲಿ ವಾಸಿಸುತ್ತಿರುವವರಿಗೆ ಈ ಹಿಂದೆ ಕಂದಾಯ ಇಲಾಖೆಯಿಂದ ನೋಟಿಸು ಜಾರಿ ಮಾಡಲಾಗಿದ್ದು ಹಲವರು ಮನೆ ಖಾಲಿ ಮಾಡಿದ್ದು ಇನ್ನುಳಿದಂತೆ ಹಲವರ ಮನೆ ಜಲಾವೃತವಾಗುವ ಸಾಧ್ಯತೆಗಳಿವೆ. ಕೊಟ್ಟ ಮುಡಿಯಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದ್ದು ಬಹುತೇಕ ಕಾಫಿ ತೋಟಗಳು ಪ್ರವಾಹದಲ್ಲಿ ಮುಳುಗಿದೆ.
ಇಲ್ಲಿಗೆ ಸಮೀಪದ ಚೇಲಾವರ ಗ್ರಾಮದ ಮುತ್ತಪ್ಪ ಅವರ ವಾಸದ ಮನೆ ಗಾಳಿ ಮಳೆಗೆ ಹೆಂಚುಗಳು ಹಾರಿದ್ದು ಹಾನಿ ಸಂಭವಿಸಿದೆ. ಕುಂಜಿಲ ಗ್ರಾಮದ ಮುದ್ದಪ್ಪ ಅವರ ಮನೆ ಮೇಲೆ ಮರ ಬಿದ್ದು ಹಾನಿ ಕುಂಜಿಲ ಗ್ರಾಮದ ಮಾಯಮ್ಮ ಅವರ ಮನೆ ಮೇಲೆ ಮರ ಬಿದ್ದು ನಷ್ಟ, ಎಮ್ಮೆಮಾಡು ಗ್ರಾಮದ ಹುಸೇನ್ನರ್ ಅವರ ಮನೆ ಮೇಲೆ ಮರ ಬಿದ್ದು ಹಾನಿ, ಕೋಣಂಜಗೆರಿ ಗ್ರಾಮದ ಕುಶಾಲಪ್ಪ ಅವರ ವಾಸದ ಮನೆ ಮಳೆಗೆ ಗೋಡೆಗಳು ಬಿರುಕು ಬಿಟ್ಟಿದ್ದು ಹಾನಿಯಾಗಿದ್ದು ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಬಹುತೇಕ ಬಿರುಸಿನ ಮಳೆಯೂ ಅದರೊಂದಿಗೆ ಬೀಸುತ್ತಿರುವ ಗಾಳಿಯೂ ಗ್ರಾಮೀಣ ಜನರಿಗೆ ಕಷ್ಟ ನಷ್ಟಗಳು ಸಂಭವಿಸಿದ್ದು ಹೈರಾಣಾಗಿಸಿದೆ.ಸ್ಥಳಕ್ಕೆನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗರು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಒಂದು ದಿನದ ಅವಧಿಯಲ್ಲಿ ಭಾಗಮಂಡಲದಲ್ಲಿ 172.0 ಮಿ.ಮೀ , ಅಯ್ಯಂಗೇರಿ 4.85 ಇಂಚು, ಕಕ್ಕಬೆ, ನಾಲಡಿಯಲ್ಲಿ 217.0 ಮಿ.ಮೀ. ನಾಪೋಕ್ಲು 70.2 ಮಿ.ಮೀ ಮಳೆ ಸುರಿದಿದ್ದು ಪ್ರವಾಹದ ಭೀತಿ ದಟ್ಟವಾಗಿದೆ.