ಸಾರಾಂಶ
ಗಂಗಾವತಿ: ತಾಲೂಕಿನ ಬಸವನದುರ್ಗಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಂಗಾವತಿ ಬಾಲಕರ ಸರ್ಕಾರಿ ಪಿಯು ಕಾಲೇಜಿನಿಂದ ಎನ್ಎಸ್ಎಸ್ ವಾರ್ಷಿಕ ಶಿಬಿರ ಕಾರ್ಯಕ್ರಮ ಜರುಗಿತು.ನಾಲ್ಕನೇ ದಿನದಂದು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಆಧುನಿಕ ಕೃಷಿ ಅಪಾಯಗಳು ಕುರಿತಾಗಿ ಡಾ.ನಾರಪ್ಪ ವಿಶೇಷ ಉಪನ್ಯಾಸ ನೀಡಿದರು. ಆಧುನಿಕ ಕೃಷಿ ಪದ್ಧತಿಯಲ್ಲಿ ರಾಸಾಯನಿಕ ರಸಗೊಬ್ಬರಗಳನ್ನು ಬಳಸುವುದರಿಂದ ವಾತಾವರಣದಲ್ಲಿ ಮಿಥೇನ್ ಅಂಶ ಹೆಚ್ಚಾಗಿ ಹಸಿರು ಮನೆ ಪರಿಣಾಮ ಉಂಟಾಗುತ್ತದೆ. ರೈತರು ಭತ್ತದ ಒಣ ಹುಲ್ಲಿಗೆ ಬೆಂಕಿ ಹಚ್ಚದೇ ಅದನ್ನು ಸಾವಯವ ಗೊಬ್ಬರವನ್ನಾಗಿ ಮಾರ್ಪಡಿಸಲು ಕರೆ ನೀಡಿದರು.ಕೃಷಿ ಇಲಾಖೆ ಅಧಿಕಾರಿ ಪ್ರಕಾಶ ರಾಥೋಡ್ ಮಾತನಾಡಿ, ಇತ್ತೀಚೆಗೆ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾನವರು ರೋಗಗಳಿಗೆ ಬಲಿಯಾಗುತ್ತಿದ್ದು, ಮಾನವರ ಜೀವಿತಾವಧಿ ಕಡಿಮೆಯಾಗುತ್ತಿದೆ. ಹಾಗಾಗಿ ಸಾವಯವ ಗೊಬ್ಬರ ಬಳಸುವುದರ ಮುಖಾಂತರ ಇದನ್ನು ತಡೆಗಟ್ಟಬೇಕಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಟಿಎಂಎಇ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಅರುಣಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಎನ್ಎಸ್ಎಸ್ ಇತಿಹಾಸ, ನಡೆದು ಬಂದ ದಾರಿ, ಉದ್ದೇಶ, ಗುರಿ, ವಿದ್ಯಾರ್ಥಿಗಳು ಜೀವನದಲ್ಲೇ ಅಳವಡಿಸಿಕೊಳ್ಳಬೇಕಾದ ಅಂಶಗಳ ಕುರಿತು ಸುದೀರ್ಘ ಉಪನ್ಯಾಸ ನೀಡಿದರು.ಕಾಲೇಜಿನ ಉಪನ್ಯಾಸಕ ಚಿದಾನಂದ ಮೇಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಗ್ರಾಮದ ಮುಖಂಡರಾದ ಶ್ರೀನಿವಾಸ್ ರೆಡ್ಡಿ, ಗ್ರಾಪಂ ಸದಸ್ಯರಾದ ರಾಜಶೇಖರ್, ವೆಂಕಟೇಶ್ ಬಾಬು, ಹೊನ್ನಪ್ಪ ನಾಯಕ್ ಚಿನ್ನತಂಬಿ, ಕುಮಾರಸ್ವಾಮಿ, ಛತ್ರಪ್ಪ ತಂಬೂರಿ, ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಸೋಮಶೇಖರ್ ಗೌಡ ಉಪಸ್ಥಿತರಿದ್ದರು.ಉಷಾ ನಿರೂಪಿಸಿದರು. ಶ್ರೀನಿವಾಸ ಸ್ವಾಗತಿಸಿದರು. ಕುಮಾರ ವಿನಯ್ ವಂದಿಸಿದರು.