ಸಾರಾಂಶ
ಧಾರವಾಡ:
ನಾಮಪತ್ರ ಸಲ್ಲಿಕೆ ಅವಧಿಯಲ್ಲಿ ತಾವು ಪಾಲಿಸಬೇಕಾದ ಚುನಾವಣಾ ನಿಯಮ, ಎಷ್ಟು ವಾಹನ ಬಳಕೆ, ಎಷ್ಟು ಜನರಿಗೆ ಅನುಮತಿ ಮುಂತಾದ ಅಂಶಗಳನ್ನು ಈಗಾಗಲೇ ತಿಳಿಸಲಾಗಿದ್ದು, ಇವುಗಳನ್ನು ಪಾಲಿಸುವ ಮೂಲಕ ರಾಜಕೀಯ ಪಕ್ಷಗಳು ಸಹಕಾರ ನೀಡಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಅನುಸರಿಸಬೇಕಾದ ಚುನಾವಣಾ ನಿಯಮ ಮತ್ತು ನಾಮಪತ್ರ ಸಲ್ಲಿಕೆ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ಜರುಗಿಸಿದ ಅವರು, ಡಿಸಿ ಕಚೇರಿ ಸುತ್ತಮುತ್ತಲು 200 ಮೀಟರ್ ವ್ಯಾಪ್ತಿ ಗಡಿ ಗುರುತಿಸಿ, 100 ಮೀಟರ್ ವ್ಯಾಪ್ತಿಯನ್ನು ನಿರ್ಬಂಧಿಯ ಪ್ರದೇಶವನ್ನಾಗಿ ಗುರುತಿಸಲಾಗುತ್ತದೆ. ಈ ವ್ಯಾಪ್ತಿಯೊಳಗಡೆ ನಾಮಪತ್ರ ಸಲ್ಲಿಸಲು ಬರುವ ಮೂರು ವಾಹನಗಳಿಗೆ ಮಾತ್ರ ಅವಕಾಶವಿದೆ. ಇವುಗಳಿಗೆ ಅನುಮತಿ ಪಡೆದಿರಬೇಕು ಎಂದರು.
ನಾಮಪತ್ರ ಸಲ್ಲಿಕೆಗೆ ಆಗಮಿಸುವ ವೇಳೆಯಲ್ಲಿ ಡ್ರೋನ್ ಬಳಕೆಯ ಕುರಿತು ಪೊಲೀಸ್ ಇಲಾಖೆಯ ಪೂರ್ವನುಮತಿಯೊಂದಿಗೆ ಏಕಗವಾಕ್ಷಿ ಕೇಂದ್ರದಲ್ಲಿ ಮುಂಚಿತವಾಗಿ ಪರವಾನಗಿ ಪಡೆದು ಉಪಯೋಗಿಸಬೇಕು. ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸದಂತೆ ಚುನಾವಣಾ ಪ್ರಚಾರ ಕಾರ್ಯವನ್ನು ಧಾರ್ಮಿಕ ಸ್ಥಳಗಳಲ್ಲಿ ಕೈಗೊಳದಂತೆ ನಿಗಾವಹಿಸಲು ಎಲ್ಲ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮಾತನಾಡಿ, ಈ ವರೆಗೂ ಮತಪಟ್ಟೆಯಲ್ಲಿ ಹೆಸರುಗಳು ಬಿಟ್ಟು ಹೋಗಿರುವ ಬಗ್ಗೆ ದೂರುಗಳಿಲ್ಲ. ಆದಾಗ್ಯೂ ಪರಿಶೀಲಿಸಲು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಎಸಿಪಿ ಬಿ.ಎಸ್. ಬಸವರಾಜ, ನೋಡಲ್ ಅಧಿಕಾರಿ ಅಜೀಜ ದೇಸಾಯಿ, ಸಿಪಿಐ ದಯಾನಂದ ಇದ್ದರು.ನಾಮಪತ್ರ ಸಲ್ಲಿಕೆ ವೇಳೆ ವಾಹನಗಳ ಬಳಕೆಗೆ ಟ್ರಾಫಿಕ್ ನಿಯಮ ಪಾಲಿಸಬೇಕು. ತಮ್ಮ ವಾಹನಗಳು ಯಾವವು, ಎಷ್ಟು ವಾಹನಗಳು, ಬರುವ ಸಮಯ, ಯಾವ ರೋಡ್ಗಳ ಮುಖಾಂತರ ಬರುವುದು ಇವುಗಳನ್ನು ಮೊದಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.