ಸಾರಾಂಶ
ತಮ್ಮನ್ನು ತಾವು ಗೆದ್ದು, ಸಮಾಜಕ್ಕೆ ಬೆಳಕಿನ ದಾರಿ ತೋರಿದವರ ಸ್ಮರಣೆಗಾಗಿ ಜಯಂತಿ ಆಚರಣೆ ಮಾಡಲಾಗುತ್ತದೆ ಎಂದು ಎರೆಹೊಸಳ್ಳಿಯ ರಡ್ಡಿ ಗುರುಪೀಠದ ವೇಮನಾನಂದ ಶ್ರೀಗಳು ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ತಮ್ಮನ್ನು ತಾವು ಗೆದ್ದು, ಸಮಾಜಕ್ಕೆ ಬೆಳಕಿನ ದಾರಿ ತೋರಿದವರ ಸ್ಮರಣೆಗಾಗಿ ಜಯಂತಿ ಆಚರಣೆ ಮಾಡಲಾಗುತ್ತದೆ ಎಂದು ಎರೆಹೊಸಳ್ಳಿಯ ರಡ್ಡಿ ಗುರುಪೀಠದ ವೇಮನಾನಂದ ಶ್ರೀಗಳು ಹೇಳಿದರು.ಕೆರಕಲಮಟ್ಟಿ ಗ್ರಾಮದಲ್ಲಿ ಸ್ಥಳೀಯ ಹೇಮ ವೇಮ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮಳ 602ನೇ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ತಮಗಾಗಿ ಬದುಕದೇ ಸಮಾಜದ ಒಳಿತಿಗಾಗಿ ಜೀವನ ಸವೆಸಿ ಭಕ್ತಿ, ಮುಕ್ತಿಯ ಮಾರ್ಗದ ದಾರಿ ತೋರುತ್ತಾರೆಯೋ ಅಂತವರನ್ನು ಸದಾ ಸ್ಮರಿಸಬೇಕು ಎಂದರು.
ಹೇಮರಡ್ಡಿ ಮಲ್ಲಮ್ಮ ತಾಳ್ಮೆ, ಸಹನೆ, ಧೈರ್ಯ, ದಾನ, ಭಕ್ತಿಯ ಗುಣಗ ಬೆಳೆಸಿಕೊಂಡು ಬದುಕಿ ದೇವರ ಸ್ಥಾನದಲ್ಲಿ ನಿಂತಳು. ಅವಳ ಆದರ್ಶಗಳನ್ನು ಮಹಿಳೆಯರು ಬೆಳೆಸಿಕೊಂಡು ಮಕ್ಕಳಿಗೂ ತಿಳಿಸಿದರೆ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದು ವೇಮನಾನಂದ ಸ್ವಾಮೀಜಿ ಹೇಳಿದರು.ಆಧ್ಯಾ ತ್ಮಿಕ ಚಿಂತಕ ಪ್ರದೀಪ ಗುರೂಜಿ ಹಾಗೂ ಐಶ್ವರ್ಯ ಪತ್ತಾರ ಉಪನ್ಯಾಸ ನೀಡಿ, ಆಧ್ಯಾತ್ಮಿಕ ಸಂಸ್ಕಾರದಿಂದಾಗಿ ಮಲ್ಲಮ್ಮ ಮೇರು ವ್ಯಕ್ತಿತ್ವ ಬೆಳೆಸಿಕೊಂಡು ಸಾಕ್ಷಾತ್ ಪರಮಾತ್ಮನನ್ನು ವರಿಸಿಕೊಂಡಳು. ಅವಳ ಆದರ್ಶದ ಬದುಕು ಮಹಿಳಾ ಕುಲಕ್ಕೆ ಮಾದರಿ ಎಂದರು.
ಸಂಗಮೇಶ ನಾಡಗೌಡ ಅಧ್ಯಕ್ಷತೆ ವಹಿಸಿದ್ದರು. ಗಿರೀಶ ನಾಡಗೌಡ, ಚಂದ್ರಶೇಖರ ಕುಸಬಿ, ಬಸವರಾಜ ಕಡಿವಾಲ, ಶೇಖರ ಗಾಡದ, ಬಸಪ್ಪ ಬಿರಾದಾರ, ಪಾಂಡಪ್ಪ ಜೈನಾಪೂರ, ಡಿ.ಪಿ. ಅಮಲಝರಿ, ಸಿ.ಎನ್. ಬಾಳಕ್ಕನವರ ಇದ್ದರು. ಬೆನಕಟ್ಟಿಯ ಮಲ್ಲಮಾಂಬೆ ಭಜನಾ ತಂಡ ವಚನ ಪಠಣ ಮಾಡಿದರು. ಬಸವರಾಜ ಜೈನಾಪೂರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪಿಕೆಪಿಎಸ್ ನೂತನ ಅಧ್ಯಕ್ಷ ನಾಡಗೌಡ ಹಾಗೂ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.