ಸಾರಾಂಶ
ಇತ್ತೀಚಿನ ದಿನಗಳಲ್ಲಿ ಚಿರತೆಗಳು ಕಾಡನ್ನು ಬಿಟ್ಟು ರೈತರ ಜಮೀನಿನ ಕಡೆ ಬರುತ್ತಿವೆ. ಇದರಿಂದ ರೈತರು ಸಾಕುವ ಪ್ರಾಣಿಗಳಾದ ಹಸು, ಎಮ್ಮೆ, ಮೇಕೆ, ಕುರಿ, ನಾಯಿಗಳನ್ನು ತಿಂದು ಹಾಕುತ್ತಿರುವ ಪ್ರಕರಣಗಳು ನಿತ್ಯ ಒಂದಲ್ಲ ಒಂದು ಕಡೆ ವರದಿಯಾಗುತ್ತಿವೆ. ಇದರಿಂದ ರೈತರು ತಮ್ಮ ಹೊಲ ಗದ್ದೆಗಳ ಬಳಿಗೆ ಹೋಗುವುದಕ್ಕೂ ಭಯಪಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಚಿರತೆ ದಾಳಿ ಮಾಡಿ ಹಸುವನ್ನು ಬಲಿ ಪಡೆದಿರುವ ಘಟನೆ ತಾಲೂಕಿನ ಅಗ್ರಹಾರ ಬಾಚಹಳ್ಳಿಯ ಜಮೀನಿನ ಬಳಿ ನಡೆದಿದೆ.ಗ್ರಾಮದ ಕೃಷ್ಣೇಗೌಡರಿಗೆ ಸೇರಿದ ಸುಮಾರು 1 ಲಕ್ಷ ಬೆಲೆ ಬಾಳುವ ಹಸುವನ್ನು ಎಂದಿನಂತೆ ತಮ್ಮ ಜಮೀನಿನ ಬಳಿ ಮೇಯಿಸುತ್ತಿದ್ದಾಗ ಚಿರತೆ ದಾಳಿ ನಡೆಸಿ ತಿಂದು ಹಾಕಿದೆ.ಕೃಷ್ಣೇಗಡೌರು ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಸಾಲ ಮಾಡಿ ಹಸು ಖರೀದಿ ಮಾಡಿ ಹೈನುಗಾರಿಕೆ ಮೂಲಕ ಜೀವನವನ್ನು ನಡೆಸುತ್ತಿದ್ದರು. ಆದರೆ, ದಿಢೀರ್ ಘಟನೆಯಿಂದ ಕೃಷ್ಣೇಗೌಡರ ಕುಟುಂಬ ಕಂಗಾಲಾಗಿದೆ.
ಘಟನಾ ಸ್ಥಳಕ್ಕೆ ತಾಲೂಕು ಅರಣ್ಯಾಧಿಕಾರಿ ಅನಿತಾ, ಪ್ರಶಾಂತ್, ತಾಲೂಕು ಪಶು ವೈದ್ಯಾಧಿಕಾರಿಗಳಾದ ಡಾ.ದೇವರಾಜ್ ಪರಿಶೀಲಿಸಿದರು. ಗ್ರಾಮಸ್ಥರಾದ ಉದ್ದಾನಿ ಮಹದೇವೇಗೌಡ, ಎ.ಸಿ.ಅಭಿ, ನಿಶಾಂತ್, ಪ್ರಮೋದ್, ಪ್ರತಾಪ್, ರಾಜೇಗೌಡ, ಪ್ರತಾಪ್ ಇದ್ದರು.ಚಿರತೆಗಳ ಸೆರೆಗೆ ಆಗ್ರಹ:
ಇತ್ತೀಚಿನ ದಿನಗಳಲ್ಲಿ ಚಿರತೆಗಳು ಕಾಡನ್ನು ಬಿಟ್ಟು ರೈತರ ಜಮೀನಿನ ಕಡೆ ಬರುತ್ತಿವೆ. ಇದರಿಂದ ರೈತರು ಸಾಕುವ ಪ್ರಾಣಿಗಳಾದ ಹಸು, ಎಮ್ಮೆ, ಮೇಕೆ, ಕುರಿ, ನಾಯಿಗಳನ್ನು ತಿಂದು ಹಾಕುತ್ತಿರುವ ಪ್ರಕರಣಗಳು ನಿತ್ಯ ಒಂದಲ್ಲ ಒಂದು ಕಡೆ ವರದಿಯಾಗುತ್ತಿವೆ. ಇದರಿಂದ ರೈತರು ತಮ್ಮ ಹೊಲ ಗದ್ದೆಗಳ ಬಳಿಗೆ ಹೋಗುವುದಕ್ಕೂ ಭಯಪಡುತ್ತಿದ್ದಾರೆ.ಪ್ರತಿನಿತ್ಯ ನೂರಾರು ಜನರು ಬರುತ್ತಾರೆ. ಪವಿತ್ರ ಪುಣ್ಯಕ್ಷೇತ್ರ ಕಾಪನಹಳ್ಳಿ ಗವಿಮಠದ ಬೆಟ್ಟ ಮೇಲೆಯೂ ಕಳೆದ ವಾರ ಜೋಡಿ ಚಿರತೆಗಳು ಕಾಣಿಸಿಕೊಂಡಿವೆ. ತಾಲೂಕಿನ ಉದ್ದಗಲಕ್ಕೂ ಚಿರತೆ ಹಾವಳಿ ವ್ಯಾಪಿಸಿವೆ. ನಿತ್ಯ ಒಂದಲ್ಲ ಕಡೆ ರೈತರ ಸಾಕುಪ್ರಾಣಿಗಳ ಮೇಲೆ ಚಿರತೆ ದಾಳಿ ನಡೆಯುತ್ತಲೇ ಇದೆ.
ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಬೋನು ಇಟ್ಟು ಚಿರತೆಗಳ ಸೆರೆ ಹಿಡಿಯಬೇಕು. ಶಾಸಕರು ಕೂಡಾ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.