ಸಾರಾಂಶ
ಹುಬ್ಬಳ್ಳಿ: ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡಿರುವ ನಾರಿ ಶಕ್ತಿ ವಂದನಾ ಅಧಿನಿಯಮದ ಬಗ್ಗೆ ಜನರಲ್ಲಿ ಜಾಗೃತಿಯನ್ನುಂಟು ಮಾಡಬೇಕು ಎಂದು ಬಿಜೆಪಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸೀಮಗೌಡರ ಹೇಳಿದರು.
ಇಲ್ಲಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಹಿಳಾ ಮೋರ್ಚಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಮಹಿಳೆಯರಿಗೆ ರಾಜಕೀಯದಲ್ಲೂ ಆದ್ಯತೆ ಸಿಗಲೆಂಬ ಕಾರಣದಿಂದ ನಾರಿ ಶಕ್ತಿ ವಂದನಾ ಜಾರಿಗೊಳಿಸಿದೆ. ಸುರಕ್ಷಿತ ಮಾತೃತ್ವ ಅಭಿಯಾನ ಪ್ರತಿತಿಂಗಳು 9ರಂದು ಎಲ್ಲ ಗರ್ಭಿಣಿಯರಿಗೆ ಸಾರ್ವತ್ರಿಕ ಗುಣಮಟ್ಟದ ಪ್ರಸವ ಪೂರ್ವ ಆರೈಕೆ ಯೋಜನೆ ಜಾರಿಗೊಳಿಸಲಾಗಿದೆ. 2023ರ ಆಗಸ್ಟ್ ವರೆಗೆ 1741249 ಗರ್ಭಿಣಿಯರ ಆರೈಕೆ ಮಾಡಲಾಗಿದೆ. ಹೆಣ್ಣು ಮಕ್ಕಳಿಗೆ ಪ್ರಧಾನ ಮಂತ್ರಿ ಸುಕನ್ಯಾ ಯೋಜನೆ ಉಜ್ವಲ ಯೋಜನೆಯಡಿ ಎಲ್ಪಿಜಿ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. ಮಹಿಳೆಯರಿಗಾಗಿ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಮಹಿಳೆಯರಿಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಮಹಿಳಾ ಒಕ್ಕೂಟ, ಧರ್ಮಸ್ಥಳ ಮಹಿಳಾ ಸಂಘಗಳು ಸೇರಿದಂತೆ ಅನೇಕ ಮಹಿಳಾ ಸಂಘಟನೆಗಳೊಂದಿಗೆ ಸಂಪರ್ಕ ಸಾಧಿಸಿ ಜಾಗೃತಿ ಮೂಡಿಸಬೇಕು ಎಂದರು.ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಿಗೆ ಮಾತನಾಡಿ, ಭವಿಷ್ಯದಲ್ಲಿ ಭಾರತ ಜಗತ್ತಿನ ಅತ್ಯಂತ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ರಾಜೇಶ್ವರಿ ಸಾಲುಗಟ್ಟಿ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿಗಳಾದ ದತ್ತಮೂರ್ತಿ ಕುಲಕರ್ಣಿ, ವಿಜಯಾನಂದ ಶೆಟ್ಟಿ, ರಾಜ್ಯ ಉಪಾಧ್ಯಕ್ಷೆ ಮೇನಕ ಮುರಳಿ. ಮಹಾನಗರ ಪ್ರಧಾನ ಕಾರ್ಯದರ್ಶಿ ಸೀಮಾ ಲದ್ವ, ಮಂಡಲಗಳ ಅಧ್ಯಕ್ಷರಾದ ರೂಪಾ ಶೆಟ್ಟಿ. ಅನುರಾಧ ಚಿಲ್ಲಾಳ, ಪ್ರತಿಭಾ ಪವಾರ್, ರಾಜೇಶ್ವರಿ ಅಳದವಾಡಿ, ಅಕ್ಕಮ್ಮ ಹೆಗಡೆ ಸೇರಿದಂತೆ ಮತ್ತಿತರರು ಇದ್ದರು.