ಸಾರಾಂಶ
ಬಳ್ಳಾರಿ: ಲೋಕಸಭಾ ಚುನಾವಣೆ ಪಾರದರ್ಶಕವಾಗಿ ಜರುಗಲು ಚುನಾವಣೆ ಮಾಹಿತಿ, ಸಹಾಯವಾಣಿ, ಕುಂದುಕೊರತೆಗಳ ಬಗ್ಗೆ ಶಾಲೆ-ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸಬೇಕು ಎಂದು ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿ ಕಚೇರಿಯ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್ ಸೂಚಿಸಿದರು.ಜಿಲ್ಲಾ ಸ್ವೀಪ್ ಸಮಿತಿ, ಹಾಗೂ ಬಳ್ಳಾರಿ ನಗರದಲ್ಲಿ ಕಡಿಮೆ ಮತದಾನ ಕೇಂದ್ರಗಳ ಬಿಎಲ್ಒ ಮೇಲ್ವಿಚಾರಕರು, ಜಿಲ್ಲಾ ಮತ್ತು ತಾಲೂಕು ಸ್ವೀಪ್ ತರಬೇತುದಾರರೊಂದಿಗೆ ಜಿಪಂನ ನಜೀರ್ ಸಭಾಂಗಣದಲ್ಲಿ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಚುನಾವಣಾ ಆ್ಯಪ್ಗಳಾದ ವಿಎಚ್ಎ, ಸಕ್ಷಮ್, ಸುವಿಧಾ, ಸಿ-ವಿಜಿಲ್ ಮತ್ತು 1950 ಸಹಾಯವಾಣಿ ಕುರಿತಂತೆ ವಿದ್ಯಾರ್ಥಿ ಯುವಜನರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ನಿರಂತರ ಮಾಡಬೇಕು. ಕಡಿಮೆ ಮತದಾನ ಕೇಂದ್ರಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಮತ್ತು ಮತದಾರರ ಜಾಗೃತಿ ನಮೂನೆಗಳ ಮೂಲಕ ವಿಶೇಷವಾದ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಮತದಾನ ಕೇಂದ್ರಗಳಲ್ಲಿನ ಮೂಲ ಸೌಕರ್ಯಗಳ ಕುರಿತು ವಿಶೇಷ ಗಮನ ಹರಿಸಿ ಸಾರ್ವಜನಿಕರಿಗೆ, ವಿಶೇಷ ಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಬೇಕು ಎಂದರು.2019ರ ಲೋಕಸಭಾ ಚುನಾವಣೆಗಿಂತ ಶೇಕಡಾವಾರು ಮತದಾನ ಹೆಚ್ಚಿಸಲು ಹಲವಾರು ಸ್ವೀಪ್ ಚಟುವಟಿಕೆ ಕಾರ್ಯಕ್ರಮ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಕ್ರಮ ವಹಿಸಲು ವಿಶೇಷ ಕಾಳಜಿ ವಹಿಸಬೇಕು ಎಂದರು.ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಹಾಗೂ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ಚುನಾವಣಾ ಜಾಗೃತಿ ಸ್ವೀಪ್ ಚಟುವಟಿಕೆಗಳು ಹಾಗೂ ಕಡಿಮೆ ಮತದಾನ ಕೇಂದ್ರಗಳಲ್ಲಿ ಶೇಕಡಾವಾರು ಮತದಾನ ಹೆಚ್ಚಿಸಲು ಕೈಗೊಂಡ ಕ್ರಮಗಳ ಕುರಿತು ಸಭೆಗೆ ವಿವರವಾದ ಮಾಹಿತಿ ನೀಡಿದರು.ಬಳಿಕ ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲೆಯಲ್ಲಿ ಮತದಾರರಲ್ಲಿ ಚುನಾವಣಾ ಜಾಗೃತಿ ಸ್ವೀಪ್ ಚಟುವಟಿಕೆಗಳ ಅನುಷ್ಟಾನ ಹಾಗೂ ಮತದಾನ ಕೇಂದ್ರಗಳಲ್ಲಿನ ಮೂಲ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಬಳ್ಳಾರಿ ತಾಲೂಕಿನ ವಿವಿಧೆಡೆ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್, ಮಹಾನಗರ ಪಾಲಿಕೆಯ ಆಯುಕ್ತ ಜಿ.ಖಲೀಲ್ಸಾಬ್, ತಹಶೀಲ್ದಾರ ಗುರುರಾಜ, ತಾಪಂ ಇಒ ಮಡಗಿನ ಬಸಪ್ಪ ಮತ್ತಿತರರಿದ್ದರು.