ಸಾರಾಂಶ
ತಾಲೂಕಿನಾದ್ಯಾಂತ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಿಂದ ಮನೆಯ ಮೇಲ್ಛಾವಣಿ ಕುಸಿದು ವೃದ್ಧೆ ಗಾಯಗೊಂಡ ಘಟನೆ ತಾಲೂಕಿನ ಮಾಳನೂರ ಗ್ರಾಮದಲ್ಲಿ ನಡೆದಿದೆ. ಗಾಯಗೊಂಡವರನ್ನು ಲಕ್ಷ್ಮೀಬಾಯಿ ಚಲುವಾದಿ ಎಂದು ಗುರುತಿಸಲಾಗಿದೆ.
ಕನ್ನಡಪ್ರಭ ವಾರ್ತೆ ಹುಣಸಗಿ
ತಾಲೂಕಿನಾದ್ಯಾಂತ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಿಂದ ಮನೆಯ ಮೇಲ್ಛಾವಣಿ ಕುಸಿದು ವೃದ್ಧೆ ಗಾಯಗೊಂಡ ಘಟನೆ ತಾಲೂಕಿನ ಮಾಳನೂರ ಗ್ರಾಮದಲ್ಲಿ ನಡೆದಿದೆ. ಗಾಯಗೊಂಡವರನ್ನು ಲಕ್ಷ್ಮೀಬಾಯಿ ಚಲುವಾದಿ ಎಂದು ಗುರುತಿಸಲಾಗಿದೆ. ವೃದ್ಧೆ ಮೊಮ್ಮಕ್ಕಳೊಂದಿಗೆ ರಾತ್ರಿ ಮನೆಯ ಒಳಗೆ ಇದ್ದಾಗಲೇ ಮನೆಯ ಮೇಲ್ಛಾವಣಿ ಕುಸಿದಿದೆ. ಅಕ್ಕ ಪಕ್ಕದ ಮನೆಯವರು ಗಮನಿಸಿ ಹುಣಸಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.ವೃದ್ಧೆಯನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ತಹಸೀಲ್ದಾರ್ ಎಂ.ಬಸವರಾಜ ಬೇಟಿ ನೀಡಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಸರಕಾರದಿಂದ ಬರುವ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಶಾಸಕ ರಾಜಾ ವೇಣುಗೋಪಾಲ ಭೇಟಿ : ತಾಲೂಕಿನ ಮದಲಿಂಗನಾಳ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಯುವಕನೊಬ್ಬನ ಕೊಲೆಯಾದ ಕುಟುಂಬಸ್ಥರಿಗೆ ಬೇಟಿಯಾಗಿ ಸಾಂತ್ವನ ಹೇಳಿ ಸರ್ಕಾರದಿಂದ ಬರುವ ಪರಿಹಾರವನ್ನು ಒದಗಿಸಲಾಗುತ್ತದೆ ಎಂದು ಧೈರ್ಯ ತುಂಬಿದರು.ಹಾಗೂ ಇದೇ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಕುಟುಂಬಕ್ಕೆ ಈಗಾಗಲೇ ಸರ್ಕಾರದಿಂದ ಪರಿಹಾರದ ಚೆಕ್ ವಿತರಿಸಲಾಗಿದೆ ಎಂದು ಹೇಳಿದರು.
ನಂತರ ತಾಲೂಕಿನಾದ್ಯಾಂತ ಸತತ ಮಳೆ ಸುರಿಯುತ್ತಿರುವುದರಿಂದ ನಾರಾಯಣಪುರ ಸೇರಿದಂತೆ ಇನ್ನಿತರ ಗ್ರಾಮಗಳ ಜಮೀನುಗಳಿಗೆ ಅಧಿಕಾರಿಗಳೊಂದಿಗೆ ಬೇಟಿ ನೀಡಿ ಬೆಳೆಗಳ ಹಾನಿಯನ್ನು ಪರಿಶೀಲನೆ ನಡೆಸಿದರು. ಹಾನಿಯಾದ ಎಲ್ಲಾ ರೈತರಿಗ ಸರ್ಕಾರದ ನಿಯಮಾನುಸಾರ ಪರಿಹಾರ ಒದಗಿಸಲು ತಹಸೀಲ್ದಾರ್ ಅವರಿಗೆ ಸೂಚಿಸಿದರು.