ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕು ಗೃಹ ನಿರ್ಮಾಣ ಸಹಕಾರ ಸಂಘದ ಹಿಂದಿನ ಆಡಳಿತ ಮಂಡಳಿ ಸದಸ್ಯರು ಚಂದ್ರೆ ಬಡಾವಣೆಯಲ್ಲಿ 12 ವರ್ಷಗಳಾದರೂ ಸಂಘದ ಹೆಸರಿಗೆ ಭೂಮಿ ಖರೀದಿಸದೆ ನಿರ್ಲಕ್ಷ್ಯವಹಿಸುವ ಮೂಲಕ ವಂಚನೆ ಮಾಡಿ ಕೋಟ್ಯಾಂತರ ರು. ನಷ್ಟ ಮಾಡಿದ್ದಾರೆ ಎಂದು ಷೇರುದಾರ ಸದಸ್ಯರು ಆಕ್ರೋಶ ಹೊರಹಾಕಿದರು.ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ಆಡಳಿತಾಧಿಕಾರಿ ಎನ್.ಆರ್. ನಿರ್ಮಲ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ, ತಾಲೂಕಿನ ಚಂದ್ರೆ ಬಡಾವಣೆಯ ಬಳಿ ನಿವೇಶನ ರಚನೆ ಮಾಡಲು ಭೂಮಿ ಖರೀದಿಗೆ ಮುಂದಾಗಿ ಶಿವಲಿಂಗಯ್ಯ ಎಂಬ ವ್ಯಕ್ತಿಗೆ 2013ರಲ್ಲಿ 1.30 ಕೋಟಿ ರು. ಹಣವನ್ನು ನೀಡಿದ್ದಾರೆ. ಹಣ ಕೊಡುವಾಗ ಕಾನೂನು ಸಲಹೆ ಪಡೆದು ಸಬ್ ರಿಜಿಸ್ಟರ್ ಮೂಲಕ ಅಗ್ರಿಮೆಂಟ್ ಮಾಡಿಕೊಳ್ಳದೆ 100 ರು. ಛಾಪಾಕಾಗದ ಮೂಲಕ ಅಗ್ರಿಮೆಂಟ್ ಮಾಡಿಸಿಕೊಂಡಿದ್ದಾರೆ. ಈವರೆಗೂ ಸಂಘದ ಹೆಸರಿಗೆ ಭೂಮಿ ರಿಜಿಸ್ಟರ್ ಮಾಡಿಸಿಲ್ಲ. ಇದರಿಂದ ಸಂಘಕ್ಕೆ ಕೋಟ್ಯಾಂತರ ರು. ನಷ್ಟವಾಗಿದೆ. ನಾಳೆ ಸ್ವಲ್ಪ ವ್ಯತ್ಯಾಸವಾದರೆ ನಮ್ಮ ಸಂಘದ ಹಣಕ್ಕೆ ಜವಾಬ್ದಾರರು ಯಾರು ಎಂದು ಸದಸ್ಯರಾದ ಕೆ.ಕುಬೇರ್, ಗಂಗಾಧರ್, ಜನಾರ್ಧನ್, ಪರಮೇಶ್, ಚಿಕ್ಕಾಡೆ ಮಹೇಶ್, ಮಹದೇವು ಸೇರಿದಂತೆ ಅನೇಕ ಷೇರುದಾರರು ಆಕ್ರೋಶ ಹೊರಹಾಕಿದರು.
ಸಂಘದಲ್ಲಿ ನಡೆದಿರುವ ಅಕ್ರಮ ವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಲು ಆದೇಶವಾಗಿದ್ದರೂ ಅದಕ್ಕೆ ಆಡಳಿತ ಮಂಡಳಿಯ ಸದಸ್ಯರು ಹೈಕೋರ್ಟ್ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಹೈಕೋರ್ಟ್ನ ತಡೆಯಾಜ್ಞೆ ರದ್ದುಗೊಳಿಸಿ ಸಂಘದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಈ ಹಿಂದೆ ಸಂಘದಿಂದ ಹಂಚಿಕೆಯಾಗಿರುವ ಲೇಔಟ್ನಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸಿಲ್ಲ. ಜತೆಗೆ ರಸ್ತೆಗಳಿಗೆ ಡಾಂಬರ್ ಹಾಕಿಸಿಲ್ಲ. ಹಲವು ಲೋಪದೋಷಗಳಿವೆ. ಅವುಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಡಳಿತಾಧಿಕಾರಿಗೆ ಒತ್ತಾಯಿಸಿದರು.
----------25ಕೆಎಂಎನ್ ಡಿ18
ಪಾಂಡವಪುರ ತಾಲೂಕು ಗೃಹ ನಿರ್ಮಾಣ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಷೇರುದಾರರು, ಆಡಳಿತ ಮಂಡಳಿ ನಡುವೆ ಮಾತಿನ ಚಕಮಕಿ ನಡೆಯಿತು.