ಸಾರಾಂಶ
ಸೀಗೋಡು ಜವಾಹರ ನವೋದಯ ವಿದ್ಯಾಲಯದಲ್ಲಿ ನಡೆದ ೩೬ನೇ ವಾರ್ಷಿಕೋತ್ಸವ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಮಕ್ಕಳು ಕೇವಲ ಜ್ಞಾನಾರ್ಜನೆ ಮಾಡಿದರೆ ಸಾಲದು. ಉತ್ತಮ ಸಂಸ್ಕೃತಿ ಬೆಳೆಸಿಕೊಂಡು ಸುಸಂಸ್ಕೃತ ವ್ಯಕ್ತಿಗಳಾಗಬೇಕು ಎಂದು ಎಂಎಡಿಬಿ ಮಾಜಿ ಅಧ್ಯಕ್ಷೆ ಬಿ.ಸಿ.ಗೀತಾ ಹೇಳಿದರು.ಸೀಗೋಡು ಜವಾಹರ ನವೋದಯ ವಿದ್ಯಾಲಯದಲ್ಲಿ ನಡೆದ ೩೬ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಉತ್ತಮ ವ್ಯಕ್ತಿತ್ವವನ್ನು ಮಕ್ಕಳಲ್ಲಿ ಬೆಳೆಸುವ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರ ಮೇಲಿದೆ. ಶಿಕ್ಷಕರು ಮಕ್ಕಳನ್ನು ಉತ್ತಮವಾಗಿ ರೂಪಿಸಿದರೆ ದೇಶಕ್ಕೆ ಒಬ್ಬ ಸತ್ಪ್ರಜೆ ದೊರೆಯಲು ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕಿದೆ ಎಂದರು.ನವೋದಯ ವಿದ್ಯಾಲಯ ಸಮಿತಿ ಸದಸ್ಯ ಕೆ.ಟಿ.ವೆಂಕಟೇಶ್ ಮಾತನಾಡಿ, ನವೋದಯ ರಾಷ್ಟ್ರದ ಅತ್ಯುತ್ತಮ ವಿದ್ಯಾಲಯ ಗಳಲ್ಲಿ ಒಂದಾಗಿದೆ. ಇಲ್ಲಿ ಓದುವ ಮಕ್ಕಳು ತುಂಬಾ ಭಾಗ್ಯವಂತರು. ಇಂತಹ ಅವಕಾಶವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ವಿದ್ಯಾಲಯದ ಪ್ರಭಾರಿ ಪ್ರಾಚಾರ್ಯ ಶಶಿಕುಮಾರ್ ಮಾತನಾಡಿ, ವಿದ್ಯಾಲಯ ಎಲ್ಲ ರಂಗಗಳಲ್ಲಿ ಉತ್ತಮ ಸಾಧನೆ ಮಾಡಿದ್ದು, ಕಳೆದ ಸಾಲಿನಲ್ಲಿ 10ನೇ ತರಗತಿ ಸಿಬಿಎಸ್ಇ ಬೋರ್ಡ್ ಪರೀಕ್ಷೆಯಲ್ಲಿ ಹೈದರಬಾದ್ ವಲಯದ 77 ನವೋದಯ ವಿದ್ಯಾಲಯಗಳಲ್ಲಿ ತೃತೀಯ ಸ್ಥಾನ ಪಡೆದಿದೆ ಎಂದರು. 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ರಂಜನಾರಾಜ್, ಸಿ.ಪಿ.ಸ್ನೇಹ, ವರುಣ್ ಅವರಿಗೆ, 10ನೇ ತರಗತಿ ಮಿಥುನ್, ತ್ರಿಶಾ ಅವರಿಗೆ ಸನ್ಮಾನಿಸಲಾಯಿತು. 10ನೇ ತರಗತಿಯ ಕನ್ನಡ ಬೋರ್ಡ್ ಪರೀಕ್ಷೆಯಲ್ಲಿ 100ಕ್ಕೆ 100 ಅಂಕ ಗಳಿಸಿದ ವಿ.ಎನ್.ಪ್ರೀತಿ ಮತ್ತು ಹಿತೈಷಿ ಅವರಿಗೆ ಪಾರಿತೋಷಕ, ನಗದು ಬಹುಮಾನ ನೀಡಲಾಯಿತು.ಕನ್ನಡ ವಿಷಯದಲ್ಲಿ ಉತ್ತಮ ಫಲಿತಾಂಶ ನೀಡುವ ಮೂಲಕ ಕರ್ನಾಟಕದ 31 ಜವಾಹರ ನವೋದಯ ವಿದ್ಯಾಲಯಗಳಲ್ಲಿ ಪ್ರಥಮ ಸ್ಥಾನ ಪಡೆದಿರುವ ಕನ್ನಡ ಉಪನ್ಯಾಸಕ ದೊರೆರಾಜ್ ಅವರಿಗೆ ಪ್ರಮಾಣಪತ್ರ, ಪಾರಿತೋಷಕ ನೀಡಲಾಯಿತು. 12ನೇ ತರಗತಿ ಪರೀಕ್ಷೆಯಲ್ಲಿ ಭೌತಶಾಸ್ತ್ರ ರಸಾಯನ ಶಾಸ್ತ್ರ, ಜೀವಶಾಸ್ತ್ರ ಮತ್ತು ಆಂಗ್ಲ ವಿಷಯಗಳಲ್ಲಿ ಉತ್ತಮ ಫಲಿತಾಂಶ ನೀಡಿದ ಉಪನ್ಯಾಸಕರಾದ ಎಂ.ಶಿವಮೂರ್ತಿ, ರಿತು ಶರ್ಮಾ, ಎ.ರವಿ ಮತ್ತು ಶ್ರೀರಾಜ್ ಅವರಿಗೆ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಸಂಗೀತ ಶಿಕ್ಷಕಿ ಗಾಯತ್ರಿ .ಕೆ ಥೀಟೆ ಅವರ ಮಾರ್ಗದರ್ಶನದಲ್ಲಿ ಪ್ರದರ್ಶಿಸಿದ ಮಕ್ಕಳ ಕೃಷ್ಣ- ಕುಚೇಲ, ದ್ರೋಣ- ಏಕಲವ್ಯ, ಶಿವಾಜಿ-ತಾನಾಜಿ ನೃತ್ಯ ರೂಪಕಗಳು, ಪೂಜಾ ಕುಣಿತ, ಕಾಶ್ಮೀರಿ ನೃತ್ಯ, ಮೂಕಾಬಿನಯ, ಶಿವ ತಾಂಡವ, ರಾಮ ಲೀಲಾ, ಕೇರಳದ ತಯ್ಯಮ್, ತುಳುನಾಡು ವೈಭವ ಮತ್ತು ಸಿನಿಮಾ ನೃತ್ಯ ಪ್ರೇಕ್ಷಕರ ಮನಸೂರೆಗೊಂಡವು.ವಿದ್ಯಾರ್ಥಿಗಳಾದ ಸಾತ್ವಿಕ್, ನಯನ, ಹಿತೈಷಿ, ಪ್ರೀತಿ, ದೀಪಕ್ ಮತ್ತು ಆದಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ೧೧ಬಿಹೆಚ್ಆರ್ ೧:
ಬಾಳೆಹೊನ್ನೂರು ಸಮೀಪದ ಸೀಗೋಡು ಜವಾಹರ ನವೋದಯ ವಿದ್ಯಾಲಯದಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಎಂಎಡಿಬಿ ಮಾಜಿ ಅಧ್ಯಕ್ಷೆ ಬಿ.ಸಿ.ಗೀತಾ ಉದ್ಘಾಟಿಸಿದರು. ಕೆ.ಟಿ.ವೆಂಕಟೇಶ್, ಶಶಿಕುಮಾರ್ ಮತ್ತಿತರರು ಹಾಜರಿದ್ದರು.