ಕೊಟ್ಟೂರು: ಮನುಷ್ಯನು ಹಣ-ಮನೆಯಿಂದ ದೊಡ್ಡವನಾಗಲಾರ. ನಡೆ, ನುಡಿಗಳಲ್ಲಿ ಸಂಸ್ಕಾರವಿದ್ದು, ಮನಸ್ಸು ದೊಡ್ಡದಿದ್ದಾಗ ಮಾತ್ರ ದೊಡ್ಡವನಾಗುತ್ತಾನೆ ಎಂದು ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಶ್ರೀ ಆಶೀರ್ವಚನ ನೀಡಿದರು.

ಕೊಟ್ಟೂರು ತಾಲೂಕಿನ ಹರಾಳು ಗ್ರಾಮದಲ್ಲಿ ಕರಿಯಮ್ಮದೇವಿ ದೇವಸ್ಥಾನ ಕಲಸಾರೋಹಣ ಹಾಗೂ ಕರಿಗಲ್ಲು ಪ್ರತಿಷ್ಠಾಪನೆಯ ಎರಡನೇ ದಿನದ ಶುಕ್ರವಾರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಣ್ಣವನಿದ್ದಾಗ ತಾಯಿಯ ಜೋಗಳ ದೊಡ್ಡವನಾದಾಗ ತಂದೆಯ ಬೈಗಳು ಕೂಡಿದಾಗ ಮಗ ಪರಿಪೂರ್ಣನಾಗುತ್ತಾನೆ. ಅವನ ಬದುಕು ಉಜ್ವಲಗೊಳ್ಳುತ್ತದೆ. ಈ ಹಿನ್ನೆಲೆ ಮನೆಯಲ್ಲಿ ಹಿರಿಯರು ಹೇಳುವ ಮಾತು ಕೇಳಬೇಕು ಎಂದರು.

ಸತ್ಯವನ್ನು ಸರಿಯಾಗಿ ತಿಳಿಯದೇ ನಾವು ನೋಡಿದ್ದೇ ಸತ್ಯ ಎಂದು ವಾಗ್ವಾದಕ್ಕಿಳಿದು ಮನೆ, ಊರುಗಳಲ್ಲಿ ಗಲಭೆ ಉಂಟು ಮಾಡಿ ನೆಮ್ಮದಿ ಕಳೆದುಕೊಂಡು ಸಂಬಂಧಗಳನ್ನು ದೂರ ಮಾಡಿಕೊಳ್ಳುತ್ತಿರುವೆವು. ಈ ಕಾರಣ ನಾವು ನೋಡುವ ದೃಷ್ಟಿ ಬದಲಾಯಿಸಿಕೊಂಡು ನಿಜವಾದ ಸತ್ಯ ತಿಳಿಯಲು ಪ್ರಯತ್ನ ಮಾಡಬೇಕು ಎಂದರು.

ಅಖಂಡ ಬಳ್ಳಾರಿ ಲೋಕಸಭಾ ಸದಸ್ಯ ಈ.ತುಕಾರಾಮ್ ಮಾತನಾಡಿ, ಗ್ರಾಮದಲ್ಲಿನ ಸಮುದಾಯ ಭವನ ನಿರ್ಮಾಣಕ್ಕೆ ₹10 ಲಕ್ಷ, ₹15 ಲಕ್ಷ ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯ ನಿರ್ಮಾಣಕ್ಕೆ ಅನುದಾನ ಕೊಡುವುದಾಗಿ ಭರವಸೆ ನೀಡಿದರು.


ಮಾಜಿ ಶಾಸಕ ಭೀಮಾ ನಾಯ್ಕ್ ಮಾತನಾಡಿ, ಹರಾಳು ಗ್ರಾಮದ ಜನರು ತಮ್ಮ ಮೇಲೆ ಅಪಾರ ಗೌರವ ಹೊಂದಿದೆ. ಈ ಋಣ ತೀರಿಸಲು ಇಲ್ಲಿನ ಮಕ್ಕಳಿಗೆ ಅವಶ್ಯಕವಾಗಿರುವ ಪ್ರೌಢಶಾಲೆ ಹಾಗೂ ಪ್ರಾಥಮಿಕ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ವಹಿಸುವುದಾಗಿ ವಾಗ್ದಾನ ಮಾಡಿದರು. ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ಎಂ. ದಾರುಕೇಶ ಮಾತನಾಡಿದರು.

ಈ ವೇಳೆ ಲೇಖಕ, ಪತ್ರಕರ್ತ ಗಜಾಪುರ ಭೀಮಣ್ಣ ಬರೆದ ಕರಿಯಮ್ಮದೇವಿ ಹಾಡುಗಳ ಧ್ವನಿಸುರುಳಿಯನ್ನು ಕೊಪ್ಪಳ ಶ್ರೀಗಳು ಬಿಡುಗಡೆ ಮಾಡಿದರು.

ಬೆಣ್ಣಿಹಳ್ಳಿ ಮಠದ ಪಂಚಾಕ್ಷರಿ ಶ್ರೀ, ಉತ್ತಂಗಿ ಮಠದ ಸೋಮಶೇಖರ ಶ್ರೀ, ರಾಜ್ಯಬೀಜ ನಿಗಮ ನಿರ್ದೇಶಕ ಸಾವಜ್ಜಿ ರಾಜೇಂದ್ರ ಪ್ರಸಾದ್, ಕೊಟ್ಟೂರು ಎಪಿಎಂಸಿ ಅಧ್ಯಕ್ಷ ಹರಾಳು ನಂಜಪ್ಪ, ತಾಪಂ ಮಾಜಿ ಅಧ್ಯಕ್ಷ ಎಸ್.ಗುರುಮೂರ್ತಿ, ಎಪಿಎಂಸಿ ಸದಸ್ಯ ಚಿರಿಬಿ ಕೊಟ್ರೇಶ, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಅನಿಲ ಹೊಸಮನಿ, ಹರಪನಹಳ್ಳಿ ಪುರಸಭೆ ಮಾಜಿ ಅಧ್ಯಕ್ಷ ಆಶೋಕ ಎಚ್.ಎಂ., ಎಸ್.ಮಲ್ಲಿನಾಥ, ವಿ.ರಾಮನಗೌಡ್ರು, ಕೂಡ್ಲಿಗಿ ತಾಪಂ ಮಾಜಿ ಅಧ್ಯಕ್ಷ ಉತ್ತಂಗಿ ಕೊಟ್ರುಗೌಡ್ರು, ಉದ್ಯಮಿ ಆಚೆಮನಿ ಮಲ್ಲಿಕಾರ್ಜುನ ಇದ್ದರು.