ಸಾರಾಂಶ
ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಕೊರತೆ ಹಾಗೂ ಜಾನುವಾರು ಸಾಕುವುದು ಕಡಿಮೆಯಾದ ಪರಿಣಾಮ ಕೃಷಿ ಚಟುವಟಿಕೆಗೆ ತೀವ್ರ ಪೆಟ್ಟು ಬಿದ್ದಿದೆ. ಸಕಾಲಕ್ಕೆ ಕೂಲಿಕಾರ್ಮಿಕರು ಸಿಗದೆ ರೈತರು ಬೆಳೆಹಾನಿಯಂತಹ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ.
ಪರಶಿವಮೂರ್ತಿ ದೋಟಿಹಾಳ
ಕುಷ್ಟಗಿ:ಎತ್ತು ಹಾಗೂ ಕೂಲಿಕಾರರ ಕೊರತೆ ನೀಗಿಸಲು ರೈತರು ಸೈಕಲ್ ಎಡೆಕುಂಟೆ ಬಳಕೆಯತ್ತ ಮುಖ ಮಾಡಿದ್ದು ಉಳಿತಾಯದ ಜತೆಗೆ ಕಡಿಮೆ ಅವಧಿಯಲ್ಲಿಯೇ ಕೃಷಿ ಕೆಲಸವೂ ಪೂರ್ಣಗೊಳ್ಳುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಕೊರತೆ ಹಾಗೂ ಜಾನುವಾರು ಸಾಕುವುದು ಕಡಿಮೆಯಾದ ಪರಿಣಾಮ ಕೃಷಿ ಚಟುವಟಿಕೆಗೆ ತೀವ್ರ ಪೆಟ್ಟು ಬಿದ್ದಿದೆ. ಸಕಾಲಕ್ಕೆ ಕೂಲಿಕಾರ್ಮಿಕರು ಸಿಗದೆ ರೈತರು ಬೆಳೆಹಾನಿಯಂತಹ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಇದೀಗ ಬೆಳೆ ಮಧ್ಯೆ ಬೆಳೆದಿರುವ ಕಳೆ ತೆಗೆಯಲು ಸೈಕಲ್ ಎಡೆಕುಂಟೆಗೆ ಮೊರೆ ಹೋಗಿದ್ದಾರೆ. ಸೈಕಲ್ ಎಡೆಕುಂಟೆ ಸರಳ ಮತ್ತು ಸುಲಭ ವಿಧಾನವಾಗಿದೆ.ಮುಂಗಾರು ಬೆಳೆಗಳಾದ ಹೆಸರು, ತೊಗರಿ ಇತ್ಯಾದಿ ಬೆಳೆಗಳಲ್ಲಿ ಕಳೆ ತೆಗೆಯಲು ಪ್ರತಿ ಕೂಲಿಕಾರ್ಮಿಕರಿಗೆ ₹ 500 ಕೊಡಬೇಕಾಗಿದ್ದು, ಒಟ್ಟು ಕಳೆ ತೆಗೆಯಲು ಸಾವಿರಾರು ರೂಪಾಯಿ ಆಗಲಿದೆ. ಇದು ರೈತರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಅಷ್ಟು ಕೂಲಿ ನೀಡಿದರೂ ಕಾರ್ಮಿಕರು ಸಿಗುತ್ತಿಲ್ಲ. ಈ ಹಿನ್ನೆಲೆ ಸರ್ಕಾರ ನೂತನ ತಂತ್ರಜ್ಞಾನ ಬಳಸಿ ಸೈಕಲ್ ಎಡೆಕುಂಟೆ ಹೊರತಂದಿದ್ದು, ಕೃಷಿ ಇಲಾಖೆಯಲ್ಲಿ ₹ 1000ಕ್ಕೆ ದೊರೆಯಲಿದೆ. ಈ ಮೂಲಕ ಹೊಲದಲ್ಲಿನ ಬೆಳೆ ನಡುವೆ ಇರುವ ಕಳೆ ತೆಗೆಯಬಹುದು.
ಈ ಎಡೆಕುಂಟೆ ಹಗುರವಾಗಿದ್ದು, ಒಬ್ಬರೆ ಇದನ್ನು ನಿರ್ವಹಿಸಲು ಸಾಧ್ಯವಿದೆ. ಸರಳ, ಸುಲಭವಾಗಿ ಇದರಿಂದ ಕಳೆ ತೆಗೆಯಬಹುದು. ಎತ್ತು ಬಳಸಿ ಎಡೆಕುಂಟೆ ಹೊಡೆಯಲು ಮೂರ್ನಾಲ್ಕು ಕೃಷಿ ಕೂಲಿ ಕಾರ್ಮಿಕರು ಬೇಕು. ಇದಕ್ಕೆ ದುಬಾರಿ ಖರ್ಚು ಭರಿಸುವುದು ಅನಿವಾರ್ಯ. ಕೂಲಿಯ ದರ ಗಗನಕ್ಕೇರಿದೆ. ಮತ್ತೊಂದೆಡೆ ಕೃಷಿ ಚಟುವಟಿಕೆಗೆ ಕೂಲಿ ಕಾರ್ಮಿಕರನ್ನು ಹುಡುಕುವುದು ಹರಸಾಹಸ ಎನಿಸಿದೆ. ಬಾಡಿಗೆ ಎತ್ತುಗಳನ್ನು ಪಡೆದು, ಕೃಷಿ ಕೂಲಿಕಾರ್ಮಿಕರಿಗೂ ದಿನಗೂಲಿ ನೀಡಿ ಎಡೆಕುಂಟೆ ಹೊಡೆಯುವುದು ಬಡ ಹಾಗೂ ಸಣ್ಣ ರೈತರಿಗೆ ಕಷ್ಟವಾಗಿದೆ. ರೈತರ ಇಂತಹ ಕಷ್ಟಗಳಿಗೆ ಸೈಕಲ್ ಎಡೆಕುಂಟೆ ಪರಿಹಾರವಾಗಿ ದೊರೆತಿದೆ.ಹಳೆಯ ಸೈಕಲ್ ಮೂಲಕ ಎಡೆಕುಂಟೆ ಮಾಡಿಕೊಂಡಿದ್ದು ಎರಡು ಎಕರೆ ಜಮೀನನಲ್ಲಿ ಹಾಕಲಾದ ಬೆಳೆಗಳ ನಡುವೆ ಕಸ ತೆಗೆದಿದ್ದೇನೆ. ಸಾವಿರಾರು ರೂಪಾಯಿ ಖರ್ಚು ಉಳಿದಿದೆ. ಎಡೆಕುಂಟೆಯು ಲಾಭದಾಯಕವಾಗಿದೆ.ಶರಣಪ್ಪ ಗುರಿಕಾರ ಕೇಸೂರು ಗ್ರಾಮದ ರೈತಸೈಕಲ್ ಎಡೆಕುಂಟೆಗಳು ಕೃಷಿ ಇಲಾಖೆಯಲ್ಲಿ ಲಭ್ಯವಿದ್ದು ರೈತರು ಖರೀದಿಸುವ ಮೂಲಕ ಕೃಷಿ ಕಾರ್ಯಕ್ಕೆ ಬಳಸಿಕೊಳ್ಳಬಹುದಾಗಿದೆ.
ರಾಜಶೇಖರ ತಾಂತ್ರಿಕ ಸಹಾಯಕರು ಕೃಷಿ ಇಲಾಖೆ ಕುಷ್ಟಗಿ