ಸಾರಾಂಶ
ವಿಜಯಪುರ: ಬಬಲೇಶ್ವರ ತಾಲೂಕಿನ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಮುಖ್ಯ ಪ್ರವರ್ತಕ ದಿ.ಬಿ.ಟಿ.ಪಾಟೀಲರ 24ನೇ ಪುಣ್ಯಸ್ಮರಣೆ ಆಚರಿಸಲಾಯಿತು. ಕಾರ್ಖಾನೆಯ ಆಡಳಿತ ಕಚೇರಿ ಮುಂಭಾಗದಲ್ಲಿನ ದಿ.ಬಿ.ಟಿ.ಪಾಟೀಲರ ಕಂಚಿನ ಪುತ್ಥಳಿಗೆ ಪೂಜೆ ಸಲ್ಲಿಸಿ, ಕಾರ್ಖಾನೆ ಅಧ್ಯಕ್ಷ ಕುಮಾರ ದೇಸಾಯಿ, ಉಪಾಧ್ಯಕ್ಷ ಅಶೋಕ ಲೆಂಕೆಣ್ಣವರ, ನಿರ್ದೇಶಕ ಬಿ.ಡಿ.ಪಾಟೀಲ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ ದಿ ಬಿ.ಟಿ.ಪಾಟೀಲ(ಸಾ:ಶಿರಬೂರ) ಅವರು ಸಹಕಾರಿ ಸಂಸ್ಥೆಗಳನ್ನು ಸ್ಥಾಪಿಸಬೇಕೆಂಬ ಧ್ಯೇಯೋದ್ದೇಶದಿಂದ ಈ ಭಾಗದಲ್ಲಿಯ ರೈತರು ಆರ್ಥಿಕವಾಗಿ ಶ್ರೇಯೋಭಿವೃದ್ಧಿಗೆ ಸಹಕಾರಿಯಾದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವಲ್ಲಿ ಶ್ರಮಿಸಿದವರು. ಅವರ ಅವಿರತ ಶ್ರಮವನ್ನು ಈ ದಿನ ನೆನಪಿನಲ್ಲಿಟ್ಟುಕೊಂಡು ಶ್ರೀಯುತರು ಹಾಕಿಕೊಟ್ಟ ಸಹಕಾರಿ ವಲಯದ ಧ್ಯೇಯ, ಆದರ್ಶಗಳನ್ನು ಕಾರ್ಖಾನೆಯ ಅಧ್ಯಕ್ಷ ಕುಮಾರ ದೇಸಾಯಿ ಮೆಲಕು ಹಾಕಿದರು. ಈ ವೇಳೆ ಕಾರ್ಖಾನೆ ನಿರ್ದೇಶಕರಾದ ರಮೇಶ ಜಕರಡ್ಡಿ, ಜಿ.ಕೆ.ಕೋನಪ್ಪನವರ, ಸೋಮನಗೌಡ ಪಾಟೀಲ, ಮಲ್ಲಪ್ಪ ಮಾದರ, ಡಾ.ಎಚ್.ಜಿ.ಬಿದರಿ, ಸುತ್ತಮುತ್ತಲಿನ ರೈತರು, ಸಿಬ್ಬಂದಿ, ಕಾರ್ಮಿಕರು ಹಾಜರಿದ್ದರು.