ಸಾರಾಂಶ
ಚಾಮರಾಜನಗರದ ಪ್ರವಾಸಿಮಂದಿರದ ಸಭಾಂಗಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಆರ್.ಮೋಹನ್ ಅವರು ಸುದ್ದಿಗೋಷ್ಠಿ ನಡೆಸಿದರು.
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿರುವ ಡಿ.ದೇವರಾಜು ಅರಸು ಕ್ರೀಡಾಂಗಣದ ಸುತ್ತು ಗೋಡೆ ಕಾಮಗಾರಿಯು ಕಳಪೆಯಾಗಿದ್ದು ಈ ಸಂಬಂಧ ಇಲಾಖೆಯ ಅಧಿಕಾರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಳಪೆ ಕಾಮಗಾರಿ ಬಗ್ಗೆ ಕೂಡಲೇ ಕ್ರಮಕೈಗೊಳ್ಳದಿದ್ದರೆ ಜಿಲ್ಲಾಡಳಿತ ಭವನ ಎದುರು ಹೋರಾಟ ರೂಪಿಸಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಆರ್.ಮೋಹನ್ ಎಚ್ಚರಿಸಿದರು.
ನಗರದ ಪ್ರವಾಸಿಮಂದಿರದ ಸಭಾಂಗಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಜಿಲ್ಲಾ ಘಟಕದ ಸಭೆಯಲ್ಲಿ ಅವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಸರ್ಕಾರದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ 1.50 ಕೋಟಿ ರು. ವೆಚ್ಚದಲ್ಲಿ ನಡೆಯುತ್ತಿರುವ ಗುಂಡ್ಲುಪೇಟೆ ಪಟ್ಟಣದ ದೇವರಾಜು ಅರಸ್ ಕ್ರೀಡಾಂಗಣದ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು, ಅಡಿಪಾಯ ಗುಂಡಿಯನ್ನು ತೆಗೆಯದೆ ಕಳಪೆ ಗುಣಮಟ್ಟದ ಎಂ ಸ್ಯಾಂಡ್ ಬಳಸಿದ್ದಾರೆ. ಪಿಲ್ಲರ್ ಗಳಿಗೆ ಸಣ್ಣ ಪ್ರಮಾಣದ ಕಬ್ಬಿಣ ಬಳಸಿದ್ದಾರೆ. ಕ್ರಿಯಾ ಯೋಜನೆ ಪ್ರಕಾರ ಕಾಮಗಾರಿ ಮಾಡಿಲ್ಲ ಅಲ್ಲದೆ ಕ್ರೀಡಾಂಗಣ ಒತ್ತುವರಿ ಜಾಗ ಬಿಡಿಸದೆ ಒತ್ತುವರಿದಾರರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ. ಇದರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗೆ ದೂರು ಸಲ್ಲಿಸಲಾಗಿದೆ ಯಾವುದೇ ಪ್ರಯೋಜನವಾಗಿಲ ಎಂದು ದೂರಿದರು.ಕೂಡಲೇ ಜಿಲ್ಲಾಡಳಿತ ದೇವರಾಜು ಅರಸು ಕ್ರೀಡಾಂಗಣದ ಕಳಪೆ ಸುತ್ತುಗೋಡೆ ತೆರವುಗೊಳಿಸಿ ಸರ್ಕಾರದ ಕ್ರಿಯಾಯೋಜನೆ ಪ್ರಕಾರ ಕಾಮಗಾರಿ ಮಾಡಬೇಕು. ಗುತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಇಲ್ಲದಿದ್ದರೆ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅಧ್ಯಕ್ಷ ಆರ್.ಮೋಹನ್ ಎಚ್ಚರಿಸಿದರು. ಸಭೆಯಲ್ಲಿ ಜಿಲ್ಲಾ ಗೌರವ ಅಧ್ಯಕ್ಷ ಕೃಷ್ಣನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ್ ಪಾಷ, ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ ನಾಯಕ, ನಾಗೇಶ್, ಸಿಂಗನಪುರ ಮಾದೇಶ್, ಕೆಂಪರಾಜು, ಮಲ್ಲೇಶಗೌಡ ಇತರರು ಹಾಜರಿದ್ದರು.