ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ವಿಪತ್ತು ನಿರ್ವಹಣಾ ತಂಡ 70 ಗೃಹರಕ್ಷರರನ್ನು ಹೊಂದಿದೆ. ದ.ಕ. ಜಿಲ್ಲೆಯ 8 ಬೀಚ್ಗಳಾದ ಸೋಮೇಶ್ವರ, ಮೊಗವೀರಪಟ್ಣ, ಉಳ್ಳಾಲ, ಪಣಂಬೂರು, ಫಾತಿಮಾ ಬೀಚ್, ತಣ್ಣೀರುಬಾವಿ, ಸುರತ್ಕಲ್, ಸಸಿಹಿತ್ಲು ಬೀಚ್ಗಳಲ್ಲಿ ಗೃಹರಕ್ಷಕರು ಪ್ರತೀ ಬೀಚ್ಗೆ ಇಬ್ಬರಂತೆ 2 ಪಾಳಿಯಲ್ಲಿ ಬೆಳಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ.ಮುರಲೀ ಮೋಹನ್ ಚೂಂತಾರು ಹೇಳಿದರು.ಸುರತ್ಕಲ್ ಮತ್ತು ಸಸಿಹಿತ್ಲು ಬೀಚ್ಗಳಿಗೆ ಭೇಟಿ ನೀಡಿ ಅಲ್ಲಿ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರಿಗೆ ಪ್ರವಾಹ ರಕ್ಷಣಾ ಕಾರ್ಯದ ಕುರಿತು ಸೂಕ್ತ ಸಲಹೆ ಮಾರ್ಗದರ್ಶನ ನೀಡಿ ಮಾತನಾಡಿದರು.
ಮಳೆಗಾಲದ ಸಂದರ್ಭ ಬೀಚ್ ಉಗ್ರವಾಗಿದ್ದು, ಅಲೆಗಳು ಎತ್ತರಕ್ಕೆ ಏರುತ್ತಾ ಇರುತ್ತದೆ. ಈ ಸಂದರ್ಭ ಮಂಗಳೂರಿಗೆ ಬರುವ ಪ್ರವಾಸಿಗರಿಗೆ ಆಳ ಅಗಲದ ಅರಿವಿರುವುದಿಲ್ಲ. ಸ್ವಾಭಾವಿಕವಾಗಿ ತೊಂದರೆಗೆ ಸಿಲುಕುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಕಳೆದ 5 ವರ್ಷಗಳಿಂದ ನಿರಂತರವಾಗಿ ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ನಲ್ಲಿ 8 ಬೀಚ್ಗಳಲ್ಲಿ ಬೀಚ್ ಗಾರ್ಡ್ಗಳು ಪ್ರವಾಸಿಗರ ರಕ್ಷಣೆಯನ್ನು ಮಾಡುತ್ತಿದ್ದಾರೆ. ಜೂನ್ 1ರಿಂದ ಎಲ್ಲ 8 ಬೀಚ್ಗಳಲ್ಲಿಯೂ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.ಜಿಲ್ಲಾಧಿಕಾರಿಯವರ ಆದೇಶದಂತೆ ಜಿಲ್ಲಾಡಳಿತದ ನಿರ್ದೇಶನದದಲ್ಲಿ ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆ ಜೊತೆಗೂಡಿ ಜಿಲ್ಲಾ ವಿಪತ್ತು ನಿರ್ವಹಣಾ ತಂಡದ ಗೃಹರಕ್ಷಕರು ಕರ್ತವ್ಯ ನಿರ್ವಹಿಸಲಿದ್ದಾರೆ. ಜಿಲ್ಲಾ ಕಚೇರಿಯಲ್ಲಿ 10 ಗೃಹರಕ್ಷಕರು ರಿಸರ್ವ್ ಆಗಿರುತ್ತಾರೆ. ಮಳೆಗಾಲದ ಸಂದರ್ಭದಲ್ಲಿ ಬಂದಂತಹ ತುರ್ತು ಕರೆಗಳಿಗೆ ಸ್ಪಂದಿಸುತ್ತಾರೆ. ಇದಲ್ಲದೆ ಜಿಲ್ಲಾದ್ಯಂತ ಒಟ್ಟು 70 ಗೃಹರಕ್ಷಕರಿದ್ದು, ವಿಪತ್ತು ನಿರ್ವಹಣೆ ತಂಡದಲ್ಲಿ ಕೆಲಸ ಮಾಡಲಿದ್ದಾರೆ. ಸುಬ್ರಹ್ಮಣ್ಯದ ಸ್ನಾನಘಟ್ಟ, ಉಪ್ಪಿನಂಗಡಿಯ ಸಂಗಮ ಕ್ಷೇತ್ರ, ಬಂಟ್ವಾಳ, ಮೂಲ್ಕಿ, ಸುಳ್ಯ ಮತ್ತು ಬೆಳ್ತಂಗಡಿ ಈ ಎಲ್ಲ ಜಾಗದಲ್ಲಿ ಗೃಹರಕ್ಷಕರು ಸನ್ನದ್ಧರಾಗಿರುತ್ತಾರೆ ಎಂದು ತಿಳಿಸಿದರು.
ಮುಳುಗು ತಜ್ಞರು ಹಾಗೂ ಉತ್ತಮ ಈಜುಗಾರರನ್ನು ಗುರುತಿಸಿದ್ದು, ತುರ್ತು ಅಗತ್ಯದ ಸಂದರ್ಭಗಳಲ್ಲಿ ಜನರ ರಕ್ಷಣೆ ಹಾಗೂ ಆಸ್ತಿಪಾಸ್ತಿ ರಕ್ಷಣೆಗೆ ಗೃಹರಕ್ಷಕರು ಬದ್ಧರಾಗಿರುತ್ತೇವೆ. ಒಟ್ಟಿನಲ್ಲಿ ಎಲ್ಲ ಇಲಾಖೆಗಳ ಜೊತೆ ಸೇರಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ನಾವು ಪ್ರವಾಸಿಗರ ರಕ್ಷಣೆಗೆ ಕಟಿಬದ್ಧರಾಗಿರುತ್ತೇವೆ ಎಂದು ಹೇಳಿದರು.ಈ ಸಂದರ್ಭ ಉಳ್ಳಾಲ ಘಟಕ ಅಧಿಕಾರಿ ಸುನಿಲ್, ಜೀವನ್ ರಾಜ್, ಮಂಗಳೂರು ಘಟಕದ ಧನಂಜಯ, ಸುರತ್ಕಲ್ ಘಟಕಾಧಿಕಾರಿ ರಮೇಶ್, ಲಲಿತಾ, ಗಿರೀಶ್, ನಾಗರಾಜ್, ಮನೋರಮಾ ಮತ್ತಿತರರು ಉಪಸ್ಥಿತರಿದ್ದರು.