ಶುಕ್ರವಾರ ಚಿತ್ರದುರ್ಗದಲ್ಲಿ ನಡೆದ ಶಿಮುಲ್ ಸಭೆಯಲ್ಲಿ ನಿರ್ದೇಶಕ ಜಿ.ಬಿ.ರೇವಣಸಿದ್ದಪ್ಪ ಮಾತನಾಡಿದರು. ಜಿ.ಬಿ.ಶೇಖರ್, ಬಿ.ಸಿ.ಸಂಜೀವಮೂರ್ತಿ ಇದ್ದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಶಿವಮೊಗ್ಗ ಹಾಲು ಒಕ್ಕೂಟದ ವತಿಯಿಂದ ಚಿತ್ರದುರ್ಗದಲ್ಲಿ ಎಂಟು ಲಕ್ಷ ಲೀಟರ್ ಸಾಮರ್ಥ್ಯದ ಹಾಲಿನ ಡೈರಿ ಪ್ರಾರಂಭಿಸಲಾಗುತ್ತಿದೆ ಎಂದು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನಿರ್ದೇಶಕ ಜಿ.ಬಿ.ರೇವಣಸಿದ್ದಪ್ಪ ಹೇಳಿದರು.

ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಲಾದ ಹಾಲು ಒಕ್ಕೂಟದ ಘಟಕದ ಅಧ್ಯಕ್ಷರು, ಕಾರ್ಯದರ್ಶಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಾವಣಗೆರೆಯಲ್ಲಿಯೂ ಕೂಡ ಡೈರಿ ನಿರ್ಮಾಣವಾಗಲಿದೆ. ಹಾಗಾಗಿ ಗುಣಮಟ್ಟದ ಹಾಲನ್ನು ಡೈರಿಗೆ ಹಾಕುವ ಮೂಲಕ ಸಹಕಾರ ನೀಡುವಂತೆ ಮನವಿ ಮಾಡಿದರು.

ಆರು ತಿಂಗಳಿಗೊಮ್ಮೆ ಕಾರ್ಯದರ್ಶಿ, ಅಧ್ಯಕ್ಷರು ಸಭೆ ಕರೆದು ಕುಂದುಕೊರತೆಗಳನ್ನು ಆಲಿಸಿಕೊಂಡು ಬರುತ್ತಿದ್ದೇವೆ. ಒಕ್ಕೂಟದಿಂದ ಸಂಘಗಳಿಗೆ ಏನು ಕೊಡುತ್ತೇವೆನ್ನುವುದು ಅಧ್ಯಕ್ಷರುಗಳ ಗಮನದಲ್ಲಿರಬೇಕು. ಹಾಗಾಗಿ ಮುಂದಿನ ಸಲ ಅಧ್ಯಕ್ಷರುಗಳನ್ನು ಸಭೆಗೆ ಕರೆತರುವಂತೆ ಕಾರ್ಯದರ್ಶಿಗಳಿಗೆ ತಾಕೀತು ಮಾಡಿದರು.

ಒಗ್ಗಟ್ಟಾಗಿ ಸಂಘವನ್ನು ನಡೆಸಿಕೊಂಡು ಹೋಗಿ. ನಾವುಗಳು ಹಸ್ತಕ್ಷೇಪ ಮಾಡುವುದಿಲ್ಲ. ಒಂಬತ್ತುವರೆ ಲಕ್ಷ ಲೀಟರ್ ಹಾಲು ಪ್ರತಿನಿತ್ಯವೂ ನಮಗೆ ಬರುತ್ತದೆ. ಇದರಲ್ಲಿ ಖರ್ಚಾಗುವುದು ಕೇವಲ ಮೂರು ಲಕ್ಷ ಲೀ.ಮಾತ್ರ. ಉಳಿದ ಹಾಲನ್ನು ಬೇರೆ ಬೇರೆ ಘಟಕಗಳಿಗೆ ಕಳಿಸಿ ಬೆಣ್ಣೆ, ತುಪ್ಪ, ಹಾಲಿನ ಪೌಡರ್ ಹಾಗೂ ಇತರೆ ಸಿಹಿ ಉತ್ಪನ್ನಗಳನ್ನು ತಯಾರಿಸಲಾಗುವುದು. ಹಾಲನ್ನು ಪುಡಿಯಾಗಿ ಪರಿವರ್ತಿಸಲು ಒಂದು ಲೀಟರ್ ಗೆ ಆರು ರು ಖರ್ಚಾಗುತ್ತದೆ. ಮೂರು ತಾಲೂಕಿನಿಂದ ಸೇರಿ 57 ಕಂಪ್ಯೂಟರ್‍ಗ ಳು ಬೇಕು. ಇನ್ನು ಮೂರು ತಿಂಗಳಲ್ಲಿ ಪೂರೈಸಲಾಗುವುದೆಂದು ಹೇಳಿದರು.

ಶಿಮುಲ್ ನಿರ್ದೇಶಕ ಜಿ.ಬಿ.ಶೇಖರ್ ಮಾತನಾಡಿ ಸಂಘಗಳ ಕಾರ್ಯದರ್ಶಿಗಳ ಕುಂದುಕೊರತೆಗಳನ್ನು ಆಲಿಸಿದ್ದೇವೆ. 68 ಸಂಘಗಳಿಂದ ದಿನವಹಿ ಐವತ್ತು ಲಕ್ಷ ಲೀ.ಹಾಲು ಸಂಗ್ರಹವಾಗುತ್ತಿದೆ. ರೈತರಿಗೆ ತೊಂದರೆಯಾಗಬಾರದೆಂದು ಮ್ಯಾಟ್, ಮೆಷಿನ್ ಹಾಗೂ ಕ್ಯಾನ್‍ಗಳನ್ನು ಕೊಡುತ್ತಿದ್ದೇವೆ.ಗುಣಮಟ್ಟದ ಹಾಲು ಹಾಕಿದರೆ ಮುಂದಿನ ದಿನಗಳಲ್ಲಿ ಲಾಭಾಂಶವನ್ನು ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಮತ್ತೋರ್ವ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ ಮಾತನಾಡಿ ಹಿಂದಿನ ಆಡಳಿತ ಮಂಡಳಿ ಸರಿಯಾಗಿ ಸಭೆಗಳನ್ನು ನಡೆಸುತ್ತಿರಲಿಲ್ಲ. ಅನೇಕ ಕೆಲಸಗಳು ಸ್ಥಗಿತಗೊಂಡಿದ್ದವು. ಈ ವರ್ಷ ಹದಿನೈದು ಕೋಟಿ ರು.ಲಾಭ ಗಳಿಸಿದ್ದು, ಬೋನಸ್ ರೂಪದಲ್ಲಿ ಲಾಭಾಂಶವನ್ನು ನೀಡಿದ್ದೇವೆ. ಬೇರೆ ಬೇರೆ ಘಟಕಗಳಿಗೆ ಹಾಲನ್ನು ಕಳಿಸಿ ಇತರೆ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಚಿತ್ರದುರ್ಗ ತಾಲೂಕಿನಲ್ಲಿ 280 ಸಂಘಗಳಿದ್ದವು. ಈಗ 360 ರಿಂದ 380 ಕ್ಕೆ ಏರಿಕೆಯಾಗಿದೆ.

ಚಳ್ಳಕೆರೆ, ಹೊಸದುರ್ಗ ಭಾಗಗಳಲ್ಲಿಯೂ ಹೊಸ ಸಂಘಗಳಾಗಿವೆ. ಚಿತ್ರದುರ್ಗ ತಾಲೂಕಿನಲ್ಲಿ 5212 ಹಸುಗಳಿಗೆ ಇನ್ಸೂರೆನ್ಸ್ ಮಾಡಿಸಿದ್ದೇವೆ. ಎಂಟು ಲಕ್ಷ ಲೀ.ಸಾಮಥ್ರ್ಯದ ಡೈರಿ ಚಿತ್ರದುರ್ಗದಲ್ಲಿ ಆಗಬೇಕು. ಕಾಲ ವ್ಯಯ ಮಾಡಬೇಡಿ. ಅಭಿವೃದ್ದಿಗೆ ಸಹಕರಿಸಿ ಎಂದು ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಲ್ಲಿ ಮನವಿ ಮಾಡಿದರು.

ನಿರ್ದೇಶಕ ರವಿಕುಮಾರ್ ಮಾತನಾಡಿ ಮಿಲ್ಕಿಂಗ್ ಮೆಷಿನ್, ಮ್ಯಾಟನ್ನು ಅವಸರವಾಗಿ ಖರೀದಿಸುವುದು ಬೇಡ. ಮೊದಲು ದಾವಣಗೆರೆ, ಶಿವಮೊಗ್ಗದವರು ಖರೀಧಿಸಲಿ ಅವುಗಳ ಗುಣಮಟ್ಟ ನೋಡಿ ನಾವುಗಳು ಖರೀಧಿ ಮಾಡೋಣ. ಲೇಟಾಗಿ ಡೈರಿಗೆ ಹಾಲು ತೆಗೆದುಕೊಂಡು ಹೋದರೆ ನಾವುಗಳು ಹೊಣೆಯಲ್ಲ. ಕಲ್ಯಾಣ ಟ್ರಸ್ಟ್ ನಲ್ಲಿರುವ ಹಣವನ್ನು ಮುಂದಿನ ದಿನಗಳಲ್ಲಿ ಹೆಚ್ಚು ಮಾಡೋಣ ಎಂದು ಹೇಳಿದರು. ವ್ಯವಸ್ಥಾಪಕ ಸತೀಶ್, ಉಪ ವ್ಯವಸ್ಥಾಪಕ ಮುಕುಂದ, ಅಶ್ವಿನಿ, ರಂಜಿತ ಇವರುಗಳು ವೇದಿಕೆಯಲ್ಲಿದ್ದರು.