ಸಾರಾಂಶ
ದಲಿತ ಯುವಕನಿಗೆ ದೇವಸ್ಥಾನದೊಳಗೆ ಪ್ರವೇಶ ನಿರಾಕರಿಸಿದ ಘಟನೆ ಶನಿವಾರ ತಾಲೂಕಿನ ಕವಣದಾಲ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ
ಕನ್ನಡಪ್ರಭ ವಾರ್ತೆ ಮಧುಗಿರಿ
ದಲಿತ ಯುವಕನಿಗೆ ದೇವಸ್ಥಾನದೊಳಗೆ ಪ್ರವೇಶ ನಿರಾಕರಿಸಿದ ಘಟನೆ ಶನಿವಾರ ತಾಲೂಕಿನ ಕವಣದಾಲ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ಶ್ರೀರಾಮಾಂಜನೇಯಸ್ವಾಮಿ ದೇಗುಲದಲ್ಲಿ ಈ ಘಟನೆ ನಡೆದಿದ್ದು ಗ್ರಾಮದ ದಲಿತ ಯುವಕ ಸ್ವಾಮಿನಾಥ್ ದೇವಸ್ಥಾನಕ್ಕೆ ಹೋದಾಗ ಅಲ್ಲಿನ ಸವರ್ಣಿಯರು ಸ್ವಾಮಿನಾಥ್ ಗೆ ಪ್ರವೇಶ ನಿರಾಕರಿಸಿದ್ದರು ಎಂದು ಯುವಕ ಆರೋಪಿಸಿದ್ದಾನೆ.ಈ ಬಗ್ಗೆ ವಾದ ವಿವಾದ ನಡೆದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಅಡಿಷನಲ್ ಎಸ್ಪಿ ಗೋಪಾಲ್ , ಡಿವೈಎಸ್ಪಿ ಮಂಜುನಾಥ್, ತಹಸೀಲ್ದಾರ್ ಶಿರಿನ್ ತಾಜ್ ,ಸಿಪಿಐ ಹನುಮಂತರಾಯಪ್ಪ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದರು. ದೇವಸ್ಥಾನಗಳಿಗೆ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಇದನ್ನು ಮೇಲ್ಜಾತಿಯ ಜನರು ಅರಿತು ಬೆರೆತು ಒಗ್ಗಟ್ಟಾಗಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕು ಸಾಗಿಸಬೇಕು. ಗ್ರಾಮದಲ್ಲಿ ಇನ್ನೂ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು. ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಮುಂದೆ ಇದೇ ರೀತಿ ಮುಂದುವರಿದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿ ಗೋಂದಲಗಳಿಗೆ ತೆರೆ ಎಳೆದರು.